ಮಧುಗಿರಿ
ತಾಲ್ಲೂಕಿನಲ್ಲಿ ಹೋಬಳಿಗೊಂದರಂತೆ ಡಿ.ಸಿ.ಸಿ. ಬ್ಯಾಂಕ್ ತೆರೆಯುತ್ತಿರುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗುತ್ತಿದೆ ಎಂದು ಜಿ.ಪಂ.ಸದಸ್ಯ ಜಿ.ಜೆ.ರಾಜಣ್ಣ ತಿಳಿಸಿದರು.
ಪಟ್ಟಣದ ಯಾದವ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಸಹಕಾರ ಬ್ಯಾಂಕ್ 31ನೆ ಶಾಖೆಯ ಉದ್ಘಾಟನಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೆ ಜಿಲ್ಲೆಯಾದ್ಯಂತ ಟಿ.ಡಿ.ಸಿ.ಸಿ. ಬ್ಯಾಂಕ್ನ ಅಡಿಯಲ್ಲಿ ಹಲವಾರು ಶಾಖೆಗಳನ್ನು ತೆರೆಯುವುದರ ಮೂಲಕ ಸಹಕಾರಿಗಳಾದ ಕೆ.ಎನ್. ರಾಜಣ್ಣ ಬ್ಯಾಂಕ್ನ ಮೂಲಕ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದು ಅವರ ರೈತ ಪರವಾದ ಕಾಳಜಿಯನ್ನು ತೋರುತ್ತದೆ.
ಎಲ್ಲ್ಲರ ಸಹಕಾರದಿಂದ ಇತ್ತೀಚೆಗೆ ಐಡಿ ಹಳ್ಳಿ ಶಾಖೆಯ ಉದ್ಘಾಟನೆಯ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಡಿ.15ರಂದು ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಹೊಸಕೆರೆ ಗ್ರಾಮದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ 31 ನೆ ಶಾಖೆಯು ಲೋಕಾರ್ಪಣೆಗೊಳ್ಳಲಿದೆ. ರೈತರು, ಸಹಕಾರಿಗಳು, ಜನಪ್ರತಿನಿಧಿಗಳು ಹೆಚ್ಚು ಹೆಚ್ಚಾಗಿ ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಮಾಜಿ. ಜಿ.ಪಂ. ಉಪಾಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ ಮಾತನಾಡಿ, ಈ ಹಿಂದೆ ನಮ್ಮ ಹೋಬಳಿಯ ರೈತರು ಹಣದ ವಹಿವಾಟಿಗಾಗಿ ಮಧುಗಿರಿಗೆ ಬರಬೇಕಾಗಿತ್ತು. ಅವರ ಅಲೆದಾಟ ತಪ್ಪಿಸುವ ದೃಷ್ಟಿಯಿಂದ ಕೆ.ಎನ್.ಆರ್ ಕಾಳಜಿಯಿಂದಾಗಿ ನಮ್ಮ ಹೋಬಳಿಯಲ್ಲಿ ಶಾಖೆ ಉದ್ಘಾಟನೆ ಆಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸೇರಿದಂತೆ ಮತ್ತಿತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಬಂದ್ರೇಹಳ್ಳಿ ಪಾಪಣ್ಣ ಮಾತನಾಡಿ, ರಾಜಣ್ಣನವರಿಂದ ಅನೇಕ ಸವಲತ್ತುಗಳನ್ನು ಪಡೆದುಕೊಂಡವರು ಹಾಗೂ ಜನಪ್ರತಿನಿಧಿಗಳು ಬಹಳಷ್ಟು ಮಂದಿ ಇದ್ದಾರೆ. ಆದರೆ ಗ್ರಾಪಂ, ತಾಪಂ, ಜಿ.ಪಂನಲ್ಲಿನ ಅನುದಾನದ ಕಾಮಗಾರಿಗಳನ್ನು ನಮ್ಮ ಪಕ್ಷದ ಜನಪ್ರತಿನಿಧಿಗಳು ಬೇರೆಯವರಿಗೆ ನೀಡುತ್ತಿರುವುದು ಯಾವ ನ್ಯಾಯ? ಈ ರೀತಿ ನಡೆದರೆ ಪಕ್ಷ ಹೇಗೆ ಸಂಘಟನೆ ಆಗುತ್ತದೆ ಎಂದು ಸಭೆಯಲ್ಲಿದ್ದವರನ್ನು ಪ್ರಶ್ನಿಸಿದರು.
ಪೂರ್ವಭಾವಿ ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ಎಂ.ಬಿ.ಮರಿಯಣ್ಣ, ತುಮುಲ್ ಮಾಜಿ ಅಧ್ಯಕ್ಷ ನಾಗೇಶ್ ಬಾಬು, ಮುಖಂಡರಾದ ಎಸ್.ಆರ್.ರಾಜಗೋಪಾಲ್, ಪಿ.ಸಿ.ಕೃಷ್ಣರೆಡ್ಡಿ, ಶೆಟ್ಟಿಹಳ್ಳಿ ಗಂಗಣ್ಣ, ಅದ್ದೂರಿಗೌಡ, ಮೂಡ್ಲ್ಲಗಿರೀಶ್, ರಂಗಮ್ಮ, ಪಾಪೀರಣ್ಣ, ಎನ್.ಎಸ್.ಯೂ.ಐ ತಾಲ್ಲೂಕು ಅಧ್ಯಕ್ಷ ಚಂದ್ರಕಾಂತ್, ಗಂಗರಾಜು, ಕಮ್ಮನಕೋಟೆ ಹನುಮಂತರಾಯಪ್ಪ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
