ನವದೆಹಲಿ:
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದೆ .ಒಂದೇ ದಿನದಲ್ಲಿ ಬರೊಬ್ಬರಿ 601 ಮಂದಿಗೆ ಕೊರೋನಾ ವೈರಸ್ ಸೋಂಕು ಹರಡಿರುವುದು ಆತಂಕ ಮೂಡಿಸಿದ್ದು ಈ ಪೈಕಿ ಶೇ.60 ರಷ್ಟು ಪ್ರಕರಣಗಳು ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರದ್ದಾಗಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 3,072ಕ್ಕೆ ತಲುಪಿದೆ. ಒಟ್ಟಾರೆ ಸಂಖ್ಯೆಯ ಪೈಕಿ 1,023 ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾದವರಾಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಅಧಿಕಾರಿಗಳ ನಿರಂತರ ಶ್ರಮದಿಂದಾಗಿ ಮಸೀದಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಹಾಗೂ ಅವರ ಪ್ರಾಥಮಿಕ ಸಂಪರ್ಕಗಳೂ ಸೇರಿ ಒಟ್ಟಾರೆ 22,000 ಮಂದಿಯನ್ನು ಕ್ವಾರಂಟೈನ್ ನಲ್ಲಿರಿಸುವುದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ತಬ್ಲಿಘಿ ಸಂಬಂಧಿತ ಪ್ರಕರಣಗಳಿಂದ ತಗುಲಿರುವ ಸೋಂಕುಗಳು 17 ರಾಜ್ಯಗಳಲ್ಲಿ ವರದಿಯಾಗಿದ್ದು, ಶೇ.30 ರಷ್ಟು ಮಂದಿ ಒಂದೇ ಸ್ಥಳದವರಾಗಿದ್ದು, ಈ ವರೆಗೂ ಅದನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಈ ವರೆಗೂ 75,೦೦೦ ಪರೀಕ್ಷೆಗಳನ್ನು ನಡೆಸಲಾಗಿದ್ದು ದಿನವೊಂದಕ್ಕೆ 10,000 ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
