ತುಮಕೂರು
ಮೇ 3 ರವರೆಗೆ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ಕಚೇರಿ ಸೇರಿದಂತೆ ತುಮಕೂರು ಜಿಲ್ಲೆಯ ಯಾವುದೇ ಪೊಲೀಸ್ ಠಾಣೆ, ವೃತ್ತ ಕಚೇರಿ ಮತ್ತು ಡಿವೈಎಸ್ಪಿ ಕಚೇರಿಗಳಲ್ಲಿ ತುರ್ತು ಪಾಸ್ಗಳಿಗಾಗಿ ಏಪ್ರಿಲ್ 17 ರಿಂದ ನೇರವಾಗಿ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ . ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸ್ವೀಕರಿಸಿ, ಪಾಸ್ಗಳನ್ನು ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಡಾ. ಕೋನಾ ವಂಶಿಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ಸರ್ಕಾರದ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಿರುವುದರಿಂದ ವಿನಾ ಕಾರಣ ಯಾವುದೇ ಪೊಲೀಸ್ ಠಾಣೆ, ಕಚೇರಿಗಳಿಗೆ ಹೋಗದೆ, ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ಅನುಮತಿಗಾಗಿ ಅರ್ಜಿ ಸಲ್ಲಿಸಿದಲ್ಲಿ, ಅದನ್ನು ಪರಿಶೀಲಿಸಿ ಪಾಸ್ಗಳನ್ನು ಅರ್ಜಿದಾರರ ವಾಟ್ಸ್ ಆಪ್/ ಇ-ಮೇಲ್ಗೆ ಆದಷ್ಟು ತುರ್ತಾಗಿ ಕಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಅನಿವಾರ್ಯ ಸಂದರ್ಭಗಳಲ್ಲಿ ಅಂದರೆ ತುರ್ತು ಚಿಕಿತ್ಸೆ, ರಕ್ತ ಸಂಬಂಧಿಗಳ ಅಂತ್ಯಕ್ರಿಯೆ, ಸ್ವಂತ ಮದುವೆ ಹಾಗೂ ಇತರೆ ಕಾರಣಗಳಿಗಾಗಿ ತುಮಕೂರು ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ತೆರಳಬೇಕಾದಲ್ಲಿ ಅದಕ್ಕೆ ಸಂಬಂಧಿಸಿದ ಪೂರ್ಣ ಮಾಹಿತಿ ಮತ್ತು ದಾಖಲೆಗಳ ನಕಲುಗಳೊಂದಿಗೆ 1)ಅರ್ಜಿದಾರರ ಹೆಸರು ಮತ್ತು ವಿಳಾಸ, 2) ಆಧಾರ್ ಸಂಖ್ಯೆ, 3)ಪ್ರಯಾಣಿಸುವ ವಾಹನದ ಸಂಖ್ಯೆ ಮತ್ತು ಪ್ರಯಾಣಿಕರ ಸಂಖ್ಯೆ, 4) ಪ್ರಯಾಣ ಮಾಡುವ ಸ್ಥಳ (ಎಲ್ಲಿಂದ ಎಲ್ಲಿಗೆ) ಮತ್ತು ದಿನಾಂಕ, 5)ಪ್ರಯಾಣದ ಉದ್ದೇಶದೊಂದಿಗೆ ಆನ್ ಲೈನ್ ಮೂಲಕವೇ ಅರ್ಜಿಯನ್ನು ಜsbಣಞಡಿ@ಞsಠಿ.gov.iಟಿ ಅಥವಾ ಜಛಿಡಿbಣಞಡಿ@ಞsಠಿ.gov.iಟಿ ಇಲ್ಲಿಗೆ ಇ-ಮೇಲ್ ಮಾಡಬೇಕು. ಅಥವಾ 9880030035 ಅಥವಾ 9480802900 ಈ ವಾಟ್ಸಾಪ್ ಸಂಖ್ಯೆಗಳಿಗೆ ಸಲ್ಲಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಸುಳ್ಳು ಮಾಹಿತಿ ಕೊಟ್ಟರೆ ಕ್ರಮ
ಒಂದು ವೇಳೆ ಯಾರಾದರೂ ಸುಳ್ಳು ಮಾಹಿತಿಗಳನ್ನು ನೀಡಿ ಪಾಸ್ಗಳಿಗೆ ಅರ್ಜಿ ಸಲ್ಲಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಸ್ಪಿ ವಂಶಿಕೃಷ್ಣ ಎಚ್ಚರಿಸಿದ್ದಾರೆ. ಜಿಲ್ಲೆಯ ಜನರು ಅನಿವಾರ್ಯ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ವಿನಾ ಕಾರಣ ಮನೆಗಳಿಂದ ಹೊರಕ್ಕೆ ಬರಬಾರದು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ