ಕೊರಟಗೆರೆ
ಲಾಕ್ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟ ನಿಷೇಧವಿದ್ದರೂ ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಟದ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಅಬಕಾರಿ ಇನ್ಸ್ಪೆಕ್ಟರ್ ರಾಮಮೂರ್ತಿ ನೇತೃತ್ವದ ತಂಡ ಭಾನುವಾರ ಮದ್ಯದ ಅಂಗಡಿಗಳನ್ನು ತೆರೆದು ದಾಸ್ತಾನು ಪರಿಶೀಲನೆ ನಡೆಸಿದರು.
ಕೊರಟಗೆರೆ ಪಟ್ಟಣ-5, ಐ.ಕೆ.ಕಾಲನಿ-2, ಮಾವತ್ತೂರು-1, ಕೋಳಾಲ-1, ದೊಡ್ಡಸಾಗ್ಗೆರೆ-1, ಬಿ.ಡಿ.ಪುರ-1, ಭೈರೇನಹಳ್ಳಿ-2, ಹೊಳವನಹಳ್ಳಿ-2, ವಡ್ಡಗೆರೆ-1, ತುಂಬಾಡಿ-1, ಜಂಪೇನಹಳ್ಳಿ-1, ತೋವಿನಕೆರೆ-2 ವೈನ್ಶಾಪ್ ಮತ್ತು ಬಾರ್ನಲ್ಲಿನ ಮದ್ಯದ ದಾಸ್ತಾನು ಹಾಗೂ ಮಾರಾಟದ ಬಗ್ಗೆ ಪರಿಶೀಲನೆ ಮಾಡಿ ಅಂಗಡಿ ಮಾಲೀಕರ ಸಮಕ್ಷಮ ಮತ್ತೆ ಸೀಲ್ ಮಾಡಲಾಗಿದೆ.
ಕೊರಟಗೆರೆ ಅಬಕಾರಿ ಇನ್ಸ್ಪೆಕ್ಟರ್ ರಾಮಮೂರ್ತಿ ಮಾತನಾಡಿ, ಮದ್ಯದ ಅಂಗಡಿಗಳ ಪರಿಶೀಲನೆ ವೇಳೆ ದಾಸ್ತಾನಿನಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಸರಕಾರದ ಆದೇಶ ಮತ್ತು ಸೂಚನೆಯನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಕೊರಟಗೆರೆ ಪಟ್ಟಣ ಮತ್ತು ತಾಲ್ಲೂಕಿನ ಗ್ರಾಮೀಣ ಪ್ರದೇಶದ 20 ಅಂಗಡಿಗಳಿಗೆ ಬೀಗ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.
ಕೊರಟಗೆರೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಒಟ್ಟು 20 ಮದ್ಯದ ಅಂಗಡಿಗಳಿವೆ. 15 ವೈನ್ಶಾಪ್ ಮತ್ತು ಎಂಎಸ್ಐಎಲ್ ಮದ್ಯದ ಅಂಗಡಿಗಳನ್ನು ಸರಕಾರದ ಆದೇಶದಂತೆ ಮೇ 4 ರಿಂದ ಪ್ರತಿನಿತ್ಯ ಮುಂಜಾನೆ 9 ರಿಂದ ಸಂಜೆ 7 ಗಂಟೆವರೆಗೆ ಮದ್ಯ ಮಾರಾಟ ಆಗಲಿದೆ. ಗ್ರಾಹಕರು 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಮದ್ಯ ಖರೀದಿಸಬೇಕು ಎಂದು ಸೂಚನೆ ನೀಡಿದರು.
ಕೊರಟಗೆರೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಮದ್ಯದ ಅಂಗಡಿಗಳ ಸೀಲ್ ತೆಗೆದು ಶನಿವಾರ ಮತ್ತು ಭಾನುವಾರ ಎರಡು ದಿನವು ಪರಿಶೀಲನೆ ನಡೆಸಿ ಮತ್ತೆ ಸೀಲ್ ಹಾಕಲಾಗಿದೆ. ಪರಿಶೀಲನೆ ವೇಳೆ ಅಬಕಾರಿ ಸಬ್ಇನ್ಸ್ಪೆಕ್ಟರ್ ಅರುಣಕುಮಾರ್, ವೈಷ್ಣವಿಕುಲಕರ್ಣಿ, ಅಬಕಾರಿ ಆರಕ್ಷಕರಾದ ರಂಗಧಾಮಯ್ಯ, ಮಂಜುಳ, ಮಂಜುನಾಥ, ಅಮಿತ್, ವೈದ್ಯನಾಥ, ನೇತೃತ್ವದ ತಂಡ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
