ರಾಷ್ಟ್ರಪತಿ ಭವನಕ್ಕೆ ಇಲ್ಲದ ಶಿಷ್ಟಾಚಾರ ಶಿಕ್ಷಣ ಸಚಿವರಿಗೆ ಏಕೆ..?

ಬೆಂಗಳೂರು

     ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಈ ಬಾರಿ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ಪ್ರಕಟಿಸದೇ ಇರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ಕೊರೋನಾ ನಡುವೆಯೇ ಕೇಂದ್ರ ಸರ್ಕಾರ ರಾಜ್ಯದ ಮೂವರು ಒಳಗೊಂಡಂತೆ 47 ಜನರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿತು.

     ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಎಲ್ಲಾ ಶಿಕ್ಷಕರಿಗೆ ಪ್ರಶಸ್ತಿ ಪ್ರಕಟಿಸಿ, ಶಿಕ್ಷಕ ಸಮುದಾಯವನ್ನುದ್ದೇಶಿಸಿ ಮಾತನಾಡಿದರು. ಆದರೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ನೇತೃತ್ವದಲ್ಲಿ ಈ ಬಾರಿ ಪ್ರಶಸ್ತಿ ಪ್ರಕಟಿಸದೇ ಇರುವುದರಿಂದ ಶಿಕ್ಷಕ ಸಮುದಾಯ ತೀವ್ರ ನಿರಾಸೆ ಅನುಭವಿಸುವಂತಾಗಿದೆ.

     ಮತ್ತೊಂದೆಡೆ ರಾಜ್ಯದಲ್ಲಿ ಇಂದು ಶಿಕ್ಷಕರ ದಿನದ ಸಂಭ್ರಮವೇ ಕಂಡು ಬರಲಿಲ್ಲ. ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಸಮಾರಂಭ ನಡೆಯುವ ಕುರಿತಂತೆಯೇ ಸೂಕ್ತಮಾಹಿತಿ ಇರಲಿಲ್ಲ.ಇಂದು ಬೆಳಿಗ್ಗೆ ಸಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನದ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಇದೇ ಕಾರಣದಿಂದ ಈ ಬಾರಿ ಶಿಕ್ಷಕರ ದಿನ ಆಚರಿಸುತ್ತಿಲ್ಲ ಎಂದು ಹೇಳಿಕೊಂಡಿದ್ದರು. ಇದೇ ಸಮಯಕ್ಕೆ ಸರಿಯಾಗಿ ದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದರು. ದೆಹಲಿಯ ರಾಷ್ಟ್ರಪತಿ ಭವನಕ್ಕೆ ಇಲ್ಲದ ಶಿಷ್ಟಾಚಾರ ಸುರೇಶ್ ಕುಮಾರ್ ಅವರಿಗೆ ಏಕೆ ಎನ್ನುವ ಚರ್ಚೆ ಶಿಕ್ಷಕ ಸಮುದಾಯದಲ್ಲಿತ್ತು.

     ಬಳಿಕ ಶಿಕ್ಷಕರ ಸದನದಲ್ಲಿ ಸಮಾರಂಭದಲ್ಲಿ ಪಾಲ್ಗೊಂಡ ಸುರೇಶ್ ಕುಮಾರ್, ಶಿಕ್ಷಣದ ಮಹತ್ವದ ಬಗ್ಗೆ ಭಾಷಣ ಮಾಡಿದರು. ಆದರೆ ಪ್ರಶಸ್ತಿ ಬಗ್ಗೆ ಚಕಾರ ಎತ್ತಲಿಲ್ಲ. ಕೊರೋನಾ ಸಂಕಷ್ಟದ ನಡುವೆಯೂ ಶಿಕ್ಷಕರು ಜೀವಕೈಯಲ್ಲಿ ಹಿಡಿದುಕೊಂಡು ಕೊರೋನಾ ಸೇನಾನಿಗಳಾಗಿ ಕಾರ್ಯನರ್ವಹಿಸುತ್ತಿದ್ದಾರೆ. ಕೊರೋನಾ ಕುರಿತ ಅಂಕಿ ಅಂಶಗಳನ್ನು ರಾಜ್ಯಾದ್ಯಂತ ಸಂಗ್ರಹಿಸುತ್ತಿದ್ದಾರೆ.ಮತ್ತೊಂದೆಡೆ ಸರ್ಕಾರದ ವಿದ್ಯಾಗಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತೆರಳಿ ಮಕ್ಕಳಿಗೆ ಪಾಠ ಪ್ರವಚನಮಾಡುತ್ತಿದ್ದಾರೆ. ಸಮರ ಕಾಲದಲ್ಲಿ ಸೇನಾನಿಗಳಂತೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ಸಮುದಾಯಕ್ಕೆ ಸಚಿವರ ವರ್ತನೆ ತೀವ್ರ ಬೇಸರ ತರಿಸಿದೆ.

     ಶಿಕ್ಷಕರ ಸದನದಲ್ಲಿ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಹಲವು ಶಿಕ್ಷಕರು ಸಚಿವರ ಧೋರಣೆ ವಿರುದ್ಧ ಪರೋಕ್ಷವಾಗಿ ತಮ್ಮ ಅಸಹನೆ ವ್ಯಕ್ತಪಡಿಸಿದರು.ಇದಕ್ಕೂ ಮುನ್ನ ಶಿಕ್ಷಕರ ದಿನದಂದು ಸಚಿವರಿಗೆ ಪ್ರತಿಭಟನೆಯ ಬಿಸಿಯೂ ಸಹ ತಟ್ಟಿತು. ಕೊರೋನಾದಿಂದ ಸಂಕಷ್ಟದಲ್ಲಿರುವ ಖಾಸಗಿ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಸುರೇಶ್ ಕುಮಾರ್ ಮನೆಯ ಮುಂದೆ ಶಿಕ್ಷಕರು ಪ್ರತಿಭಟನೆ ನಡೆಸಿದರು.

       ಕೊರೋನಾ ಸೋಂಕಿನ ಭೀತಿಯಿಂದಾಗಿ ಲಾಕ್ ಡೌನ್ ಘೋಷಣೆಯಾಗಿ ಶಾಲಾ-ಕಾಲೇಜು ಮುಚ್ಚಿದ್ದರಿಂದ ಖಾಸಗಿ ಶಾಲಾ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಚಿವ ಸುರೇಶ್ ಕುಮಾರ್ ಮನೆಯ ಮುಂದೆ ನೆರೆದಿರುವ ಶಿಕ್ಷಕರು ಕೊರೋನಾ ಸಂಕಷ್ಟದಿಂದ ಶಾಲಾ-ಕಾಲೇಜುಗಳು ಕಳೆದ 6 ತಿಂಗಳಿನಿಂದ ಮುಚ್ಚಲ್ಪಟ್ಟಿವೆ. ಹೀಗಾಗಿ ಶಿಕ್ಷಕರಿಗೆ ಕೆಲಸವಿಲ್ಲದೇ, ಸಂಬಳ ವಿಲ್ಲದೇ ಜೀವನ ನಡೆಸುವುದು ಬಹಳ ಕಷ್ಟಕರವಾಗಿದೆ. ಈ ಹಿನ್ನಲೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿದರು.ಶಿಕ್ಷಕರ ದಿನದಂದು ಶಿಕ್ಷಕ ಸಮುದಾಯಕ್ಕೆ ಆತ್ಮ ಸ್ಥೈರ್ಯ ತುಂಬಬೇಕಾಗಿದ್ದ ಸುರೇಶ್ ಕುಮಾರ್, ತಾವೇ ಗೊಂದಲಕ್ಕೆ ಒಳಗಾಗಿ ಲಕ್ಷಾಂತರ ವಿದ್ಯಾರ್ಥಿಗಳು, ಕೋಟ್ಯಂತರ ಪಾಲಕರನ್ನು ಸಹ ಗೊಂದಲಕ್ಕೆ ದೂಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link