ತುರುವೇಕೆರೆ
ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ವಿದ್ಯುತ್ ಕಾಯಿದೆ ತಿದ್ದುಪಡಿ ಹಾಗು ಖಾಸಗೀಕರಣ ಮಾಡಲು ಹೊರಟಿರುವ ಕ್ರಮವನ್ನು ಖಂಡಿಸಿ ತಾಲ್ಲೂಕು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘ, ಸಂಸ್ಥೆಗಳ ಒಕ್ಕೂಟದಿಂದ ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಬೆಸ್ಕಾಂ ಕಚೇರಿ ಆವರಣದಲ್ಲಿ ನೌಕರರು ಕಪ್ಪು ಪಟ್ಟಿ ಧರಿಸಿ ಸೋಮವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಾನಾಯಕ್ ಮಾತನಾಡಿ, ಬೆಸ್ಕಾಂ ನೌಕರರಿಗೆ ಮಾರಕವಾಗಲಿರುವ 2003ರ ವಿದ್ಯುತ್ ಕಾಯಿದೆ ತಿದ್ದಪಡಿಯನ್ನು ಮಾಡಬಾರದು ಹಾಗು ಕೇಂದ್ರ ಸರ್ಕಾರ ನೂತವಾಗಿ 2020ರ ವಿದ್ಯುತ್ ಕಾಯಿದೆಗೆ ತಿದ್ದುಪಡಿ ತರಲು ಮುಂದಾಗಿರುವ ಕ್ರಮವನ್ನು ದೇಶದಾದ್ಯಂತ ನೌಕರರು ಒಕ್ಕೊರಲಿನಿಂದ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಬೆಸ್ಕಾಂ ಎ.ಇ ಕೃಷ್ಣಪೂಜಾರಿ ಮಾತನಾಡಿ, ಕೇಂದ್ರ ಸರ್ಕಾರ ದೇಶದಾದ್ಯಂತ ವಿದ್ಯುತ್ ಹಾಗು ವಿದ್ಯುತ್ ಸರಬರಾಜು ಕಂಪನಿಗಳ ಖಾಸಗೀಕರಣ ನೀತಿ ನೌಕರರ ಮತ್ತು ರೈತರುಗಳಿಗೆ ಮಾರಕವಾಗಿದೆ. ಈ ಖಾಸಗೀಕರಣದಿಂದ ಬೆಸ್ಕಾಂ ನೌಕರರ, ಸಿಬ್ಬಂದಿಗಳ ಹಾಗು ರೈತರ ಹಿತ ಕಾಪಾಡಲು ಈ ಯೋಜನೆ ಮಾರಕವಾಗಿದೆ. ಜೊತೆಗೆ ರೈತರಿಗೆ 10 ಎಚ್.ಪಿ ವರೆಗೆ ಸಹಾಯಧನದ ಮೂಲಕ ಉಚಿತ ಕರೆಂಟ್ ನೀಡುವುದು ಹೊಸ ಕಾಯಿದೆಯಿಂದ ಸಾಧವಾಗುವುದಿಲ್ಲ. ಕ್ರಾಸ್ ಸಹಾಯಧನದ ಮೂಲಕ ಭಾಗ್ಯಜ್ಯೋತಿ ಕುಟೀರ ಯೋಜನೆಯಡಿ ಬಡವರಿಗೆ ಈಗಾಗಲೇ ನೀಡಲಾಗುತ್ತಿರುವ 40 ಯುನಿಟ್ ವರೆಗಿನ ಉಚಿತ ವಿದ್ಯುತ್ ನೀಡುವುದು ಈ ಹೊಸ ಯೋಜನೆಯಿಂದ ಸಾದ್ಯವಾಗುವುದಿಲ್ಲವೆಂದರು.
ವಿದ್ಯುತ್ ಪ್ರಸರಣ ನಿಗಮದ ನೌಕರರರು ಮತ್ತು ಸಿಬ್ಬಂದಿಗಳು ಕಚೇರಿ ಮುಂಭಾಗ ಕಪ್ಪಪಟ್ಟಿ ಧರಿಸಿ ಕಾಯಿದೆಯನ್ನು ಹಿಂಪಡೆಯುವಂತೆ ಘೋಷಣೆ ಕೂಗಿದರು.ಪ್ರತಿಭಟನೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಭೈರಪ್ಪ, ಕಾರ್ಯದರ್ಶಿ ಲೋಕೇಶ್, ಬೆಸ್ಕಾಂ ಎ.ಇ.ಗಳಾದ ಸೋಮಶೇಖರ್, ಸುನಿಲ್, ಉಮೇಶ್ವರಯ್ಯ, ಗಿರೀಶ್ಕುಮಾರ್, ಕಾಂತರಾಜು, ಮೃತ್ಯುಂಜಯಪ್ಪ, ರಾಜೀವ್, ಧರಣೇಶ್, ಪ್ರಕಾಶ್ ಸೇರಿದಂತೆ ಅಧಿಕಾರಿವರ್ಗ ಹಾಗೂ ನೌಕರರ ವರ್ಗ ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
