ತಿಪಟೂರು
ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ, ಪದವೀಧರರು ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವರಿಗೆ ಪರ್ಯಾಯ ಮಾರ್ಗಗಳನ್ನು ಹುಡಕುವುದರ ಜೊತೆಗೆ, ಶಿಕ್ಷಕರ, ಉಪನ್ಯಾಸಕರ ಸಮಸ್ಯೆಗಳಿಗೆ ಪರಿಹರಿಸುವುದಾಗಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ರಾಷ್ಟ್ರೀಯ ಕಾಂಗ್ರೆಸ್ನ ಅಭ್ಯರ್ಥಿ ರಮೇಶ್ಬಾಬು ತಿಳಿಸಿದರು.
ನಗರದ ವಿದ್ಯಾನಗರದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಶಿಕ್ಷಣವೇ ಮುಖ್ಯ, ಇಂದು ಶಿಕ್ಷಣ ಕ್ಷೇತ್ರವು ಹಲವಾರು ಸಮಸ್ಯೆಗಳಿಂದ ಕೂಡಿದೆ ಮತ್ತು ಪ್ರತಿವರ್ಷವು ಪದವಿಯನ್ನು ಪಡೆದವರಲ್ಲಿ ಕೇವಲ ಶೇಕಡ 2ರಷ್ಟು ಮಾತ್ರ ಸರ್ಕಾರಿ ಉದ್ಯೋಗಗಳು ಸಿಗುತ್ತಿವೆ. ಈಗಾಗಲೇ ಸರ್ಕಾರದಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ ಮತ್ತು ಕೊರೊನಾ ನೆಪ ಹೇಳಿಕೊಂಡು ಯಾವುದೇ ನೇಮಕಾತಿಯನ್ನು ಮಾಡಿಕೊಳ್ಳುತ್ತಿಲ್ಲ ಹಾಗೂ ನೇಮಕಾತಿಯನ್ನು ತಡೆಹಿಡಿಯಲಾಗಿದೆ.
ಇಂತಹ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರು ಮತ್ತು ಗುತ್ತಿಗೆ ಕಾರ್ಮಿಕರಿಗೆ ಸಂಬಳವನ್ನು ನೀಡುತ್ತಿಲ್ಲ ಹಾಗೂ ಈ ಬಾರಿ ಯಾವುದೇ ವಿದ್ಯಾರ್ಥಿ ವೇತನವನ್ನು ನೀಡುತ್ತಿಲ್ಲ. ಖಾಸಗೀ ಶಿಕ್ಷಣ ಸಂಸ್ಥೆಗಳು ಮತ್ತು ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಸಹ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ದೇಶದಲ್ಲಿ ಮಾನವ ಸಂಪನ್ಮೂಲ ಅಭಿವೃಧ್ಧಿಯಾಗಬೇಕು, ಮಾನವ ಸಂಪನ್ಮೂಲ ಅಭಿವೃದ್ಧಿಯಾಗಬೇಕಾದರೆ ದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳಿರಬಾರದು ನಾನು ಆನಿಟ್ಟಿನಲ್ಲಿ ಕೆಲಸಮಾಡುತ್ತೇನೆ ಆದ್ದರಿಂದ ನನಗೆ ನಿಮ್ಮ ಅಮೂಲ್ಯವಾದ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಬೇಕೆಂದು ವಿನಂತಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್.ಕಾಂತರಾಜು ಮಾತನಾಡಿ, ನಮ್ಮ ಕಾರ್ಯಕರ್ತರುಗಳು ಪದವೀದರ ಮತದಾರರ ಮನೆಮನೆಗೆ ತೆರಳಿ ರಮೇಶ್ಬಾಬುರವರಿಗೆ ಹೆಚ್ಚಿನ ಮತವನ್ನು ಹಾಕಿಸಬೇಕು. ಇವರು ನಮ್ಮ ಉಪವಿಭಾಗಕ್ಕೆ ಸೇರಿದ ಪಕ್ಕದ ತಾಲ್ಲೂಕಾದ ಚಿಕ್ಕನಾಯಕನಹಳ್ಳಿಯವರು ಆದ್ದರಿಂದ ನಮಗೆ ಬೇಕೆಂದಾಗ ಸಿಗುತ್ತಾರೆ ಮತ್ತು ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾರೆ ಹಾಗೂ ಇವರು ತಿಪಟೂರಿನಲೇ ಪದವಿಯನ್ನು ಪಡೆದು, ವಕೀಲವೃತ್ತಿಯನ್ನು ಸಹ ಇಲ್ಲೇ ಮಾಡಿದ್ದಾರೆ ಆದ್ದರಿಂದ ಕಾರ್ಯಕರ್ತರು ಇವರಬಗ್ಗೆ ಪ್ರಚಾರಮಾಡಿ ಪ್ರಥಮ ಪ್ರಾಶಸ್ತ್ಯದ ಮತವನ್ನು ಹಾಕಿಸಬೇಕೆಂದು ಕಾರ್ಯಕರ್ತರಿಗೆ ಕರೆನೀಡಿದರು.
ಸಭೆಯಲ್ಲಿ ತಾ.ಪಂ ಅಧ್ಯಕ್ಷ ಶಿವಸ್ವಾಮಿ, ಸದಸ್ಯರಾದ ರವಿಕುಮಾರ್, ಎನ್.ಎಂ.ಸುರೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
