ತುಮಕೂರು : ಹೆಚ್ಚಿದ ಕಳ್ಳತನ : ಜನರಲ್ಲಿ ಆತಂಕ

 ತುಮಕೂರು :

      ತುಮಕೂರು ನಗರ ಹಾಗೂ ಹೊರವಲಯದಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು, ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ.

      ಸರ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದು, ಮಹಿಳೆಯರು ಬೆಳಗ್ಗೆ ಮತ್ತು ಸಂಜೆಯ ವೇಳೆ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಇತ್ತೀಚೆಗೆ ನಗರದಲ್ಲಿ ಒಂದೇ ದಿನ ಮೂರು ಕಡೆಗಳಲ್ಲಿ ಸರಗಳನ್ನು ಕಸಿದು ಪರಾರಿಯಾದ ಪ್ರಕರಣ ಆತಂಕ ಮೂಡಿಸಿದೆ.

     ನಗರದ ಮಂಡಿಪೇಟೆ, ಎಂ.ಜಿ.ರಸ್ತೆಯ ತಿರುವು, ಸ್ಟೇಡಿಯಂ ಪಕ್ಕದ ರಸ್ತೆಗಳಲ್ಲಿ ಸರ ಕದಿಯುವ ಪ್ರಕರಣಗಳು ವರದಿಯಾಗಿದ್ದು, ಕೆಲವರು ದೂರು ಕೊಡಲು ಮುಂದಾದರೆ ಮತ್ತೆ ಕೆಲವರು ಸರ ಕಳೆದುಕೊಂಡು ದೂರು ನೀಡಲು ಹಿಂಜರಿಯುತ್ತಿದ್ದಾರೆ. ಬೈಕ್‍ನಲ್ಲಿ ಇಬ್ಬರು ವ್ಯಕ್ತಿಗಳು ಚಲನವಲನ ಗಮನಿಸಿ ಮಹಿಳೆಯರ ಕೊರಳಿಗೆ ಕೈ ಹಾಕುವ ನಿಪುಣರಾಗಿದ್ದು, ಯಾವುದೇ ಸೂಚನೆಗಳಿಲ್ಲದೆ ಏಕಾಏಕಿ ಹಿಂಬಾಲಿಸುವ ಆಗಂತುಕರು ಮಹಿಳೆಯರ ಸರ ಕದ್ದು ಪರಾರಿಯಾಗುತ್ತಿದ್ದಾರೆ.

      ಹಣ ತರುವ ಹಾಗೂ ತೆಗೆದುಕೊಂಡು ಹೋಗುವ ವ್ಯಕ್ತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಒಂದು ಕಡೆ ಮಹಿಳೆಯರ ಸರಗಳಿಗೆ ಕೈ ಹಾಕುವ ಈ ಕಳ್ಳರು ಇನ್ನೊಂದೆಡೆ ಪರ್ಸ್‍ಗಳಲ್ಲಿ, ಬ್ಯಾಗ್‍ಗಳಲ್ಲಿ ಹಣ ಇಟ್ಟುಕೊಂಡು ಹೋಗುವವರನ್ನು ಹೊಂಚು ಹಾಕುತ್ತಾರೆ. ವ್ಯಾಪಾರಿಗಳನ್ನು ಹಿಂಬಾಲಿಸುತ್ತಾರೆ. ಮಂಡಿಪೇಟೆಯಲ್ಲಿ ಪಿಗ್ಮಿ ಹಣ ಸಂಗ್ರಹಿಸಿಕೊಂಡು ಹೋಗುತ್ತಿದ್ದ ಮಹಿಳೆಯಿಂದ ಒಂದು ಲಕ್ಷ ರೂ.ಗಳ ಬ್ಯಾಗ್‍ನ್ನು ಕಸಿದುಕೊಂಡಿದ್ದಾರೆ. ಇದೇ ರೀತಿ ಇನ್ನು ಹಲವು ಪ್ರಕರಣಗಳು ನಗರದಲ್ಲಿ ನಡೆದಿವೆ.

      ಬೈಕ್‍ನಲ್ಲಿ ಬರುವ ಕಳ್ಳ ಹೇಗೆ ಬರುತ್ತಾನೆಂಬುದೇ ತಿಳಿಯುವುದಿಲ್ಲ. ಕಳ್ಳತನ ಮಾಡಿಕೊಂಡು ಹೋಗುವಾಗ ಯಾರ ಕೈಗೆ ಸಿಗುವುದೂ ಇಲ್ಲ. ಈ ಹಿನ್ನೆಲೆಯಲ್ಲಿ ನಗರದ ಜನತೆ ಯಾವುದೇ ವಹಿವಾಟು ನಡೆಸುವಾಗ , ಹಣ ತೆಗೆದುಕೊಂಡು ಹೋಗುವಾಗ ಎಚ್ಚರಿಕೆಯಿಂದ ಇರುವ ಅಗತ್ಯವಿದೆ.

      ಕಳೆದ ಡಿಸೆಂಬರ್ 21 ರಂದು ಸ್ಟೇಡಿಯಂ ರಸ್ತೆಯ ನಿವಾಸಿ ಮಹಿಳೆಯೊಬ್ಬರು ವಾಯುವಿಹಾರಕ್ಕೆ ಬೆಳಗ್ಗೆ ತೆರಳಿದ್ದಾಗ 62 ಗ್ರಾಂ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕದ್ದು ವ್ಯಕ್ತಿಯೊಬ್ಬ ಪರಾರಿಯಾಗಿದ್ದಾನೆ. ಮುಂಜಾನೆ ವಾಯು ವಿಹಾರಕ್ಕೆ ತೆರಳುವ ಮಹಿಳೆಯರು ಬೆಲೆ ಬಾಳುವ ಆಭರಣ ಅಥವಾ ಸರ ಧರಿಸಬಾರದೆಂದು ಈಗಾಗಲೇ ಸಾಕಷ್ಟು ಎಚ್ಚರಿಕೆ ನೀಡಲಾಗಿದೆ. ಮುಂಜಾನೆ ವೇಳೆ, ರಾತ್ರಿವೇಳೆ ಆಯ್ದ ಸ್ಥಳಗಳಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಮಾಡುವ ಅಗತ್ಯವಿದೆ. ಪೊಲೀಸರು ವಾಹನದಲ್ಲಿ ಸಂಚರಿಸುತ್ತಿದ್ದರೆ ಭಯಭೀತಿ ಇರುತ್ತದೆ ಎಂಬುದು ಸಾರ್ವಜನಿಕರ ಅನಿಸಿಕೆ.

ಕಳ್ಳತನ ನಿಯಂತ್ರಿಸಲು ಸೂಕ್ತಕ್ರಮ ಕೈಗೊಳ್ಳಿ :

       ನಗರದಲ್ಲಿ ಸರಗಳ್ಳತನ ಹಾಗೂ ಹಗಲು ದರೋಡೆ ಪ್ರಕರಣಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ತುರ್ತಾಗಿ ಅಪರಾಧ ಪ್ರಕರಣಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ಅವರು ತುಮಕೂರು ಮಹಾನಗರಪಾಲಿಕೆಯಲ್ಲಿ ಪೊಲೀಸ್ ಇಲಾಖೆ, ಮಹಾನಗರಪಾಲಿಕೆ ಮತ್ತು ಸ್ಮಾರ್ಟ್‍ಸಿಟಿ ಇವರ ಜೊತೆ ಸಭೆ ನಡೆಸಿ, ತುಮಕೂರು ನಗರದ ಟ್ರಾಫಿಕ್ ಸಮಸ್ಯೆಗೆ ಸಂಬಂಧಿಸಿದಂತೆ, ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.
ಅವರು ಉತ್ತಮ ಗುಣಮಟ್ಟದ ಸಿಗ್ನಲ್‍ಗಳ ಅಳವಡಿಸುವಂತೆ ಜನದಟ್ಟಣೆಯ ಪ್ರದೇಶಗಳಲ್ಲಿ ಸ್ಮಾರ್ಟ್ ಪೋಲ್‍ಗಳನ್ನು ಅಳವಡಿಸಿ ಕಳ್ಳರ ಹಾವಳಿಯನ್ನು ನಿಯಂತ್ರಿಸಬೇಕಾಗಿದೆ.

      ತುಮಕೂರು ನಗರದಲ್ಲಿ ವಾಹನ ಸಂಚಾರ ಸುಗಮವಾಗಿ ಸಾಗಲು ಲಕ್ಕಪ್ಪ ಸರ್ಕಲ್ ಮತ್ತು ಬಿ.ಜಿ.ಎಸ್. ಸರ್ಕಲ್‍ನಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

      ತುಮಕೂರು ನಗರದ ಹೊರ ವರ್ತುಲ ರಸ್ತೆಯಲ್ಲಿ ಅಪಘಾತ ವಲಯಗಳಿದ್ದು, ಅಲ್ಲಿಗೆ ಹಂಪ್‍ಗಳನ್ನು ಹಾಕಲು ಸೂಚನೆ ನೀಡಿದರು ಮತ್ತು ಎಲ್ಲಿ ಸಿಗ್ನಲ್ ಲೈಟ್‍ನ ಅವಶ್ಯಕತೆ ಇದೆಯೋ ಅಂತಹ ಕಡೇ ಸಿಗ್ನಲ್ ಲೈಟ್ ಅಳವಡಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು. ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳ ಗುರುತಿಸುವಂತೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಿದರು.

      ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಉದೇಶ. ಟಿ.ಜೆ, ಮಹಾನಗರಪಾಲಿಕೆ ಆಯುಕ್ತರಾದ ರೇಣುಕಾ, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ರಂಗಸ್ವಾಮಿ, ಡಿ.ವೈ.ಎಸ್.ಪಿ ತಿಪ್ಪೇಸ್ವಾಮಿ, ವೃತ್ತ ನಿರೀಕ್ಷಕರಾದ ನವೀನ್, ಸಬ್‍ಇನ್ಸ್‍ಪೆಕ್ಟರ್ ಶಿವಕುಮಾರ್, ಶ್ರೀನಿವಾಸ್, ಕಾರ್ಯನಿರ್ವಾಹಕ ಇಂಜಿನಿಯರಾದ ಆಶಾ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಂಪತ್, ಅಶ್ವಿನ್ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link