ತುಮಕೂರು : ಅಟಲ್ ಭೂಜಲ್ ಯೋಜನೆಗೆ 6 ತಾಲ್ಲೂಕುಗಳು ಆಯ್ಕೆ

  ತುಮಕೂರು : 

      ಅಟಲ್ ಭೂಜಲ್ ಯೋಜನೆಯಡಿಯಲ್ಲಿ ತುಮಕೂರು ಜಿಲ್ಲೆಯ 6 ತಾಲ್ಲೂಕುಗಳು ಸೇರ್ಪಡೆಯಾಗಿವೆ ಎಂದು ಸಂಸದರು ಹಾಗೂ ಕೇಂದ್ರ ಜಲಶಕ್ತಿ ಕನ್ಸಲ್ಟೇಟೀವ್ ಸದಸ್ಯ ಜಿ.ಎಸ್.ಬಸವರಾಜು ತಿಳಿಸಿದರು.

      ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಪ್ರತಿಯೊಂದು ಗ್ರಾಮದ ವಾಟರ್ ಬಜೆಟ್, ವಾಟರ್ ಆಡಿಟ್ ಮತ್ತು ವಾಟರ್ ಸ್ಟ್ರಾಟಜಿ ಸಿದ್ಧಪಡಿಸಲು ದೇಶದ 7 ರಾಜ್ಯಗಳಲ್ಲಿ ಪ್ರಾಯೋಗಿಕ ಯೋಜನೆ ಆರಂಭಿಸಿದೆ. ಇದರಲ್ಲಿ ನಮ್ಮ ರಾಜ್ಯವೂ ಸೇರ್ಪಡೆಯಾಗಿದೆ. ತುಮಕೂರು ಜಿಲ್ಲೆಯ ತುಮಕೂರು ನಗರ, ಶಿರಾ, ಮಧುಗಿರಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ತಾಲ್ಲೂಕುಗಳು ಈ ಯೋಜನೆಯಡಿಯಲ್ಲಿ ಸೇರ್ಪಡೆಯಾಗಿವೆ ಎಂದರು.

   ನಗರ ಜಲಶಕ್ತಿ :

      ನಗರ ಜಲಶಕ್ತಿ ಯೋಜನೆಯಡಿಯಲ್ಲಿ ತುಮಕೂರು ನಗರ ಆಯ್ಕೆಯಾಗಿದ್ದು, ಈ ಯೋಜನೆಯಡಿ 60 ಕೋಟಿ ರೂ.ಗಳ ವೆಚ್ಚದಲ್ಲಿ ಮುಂದೆ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು.

      ಕೇಂದ್ರ ಸರ್ಕಾರವು ಈ ಯೋಜನೆಗೆ 10 ನಗರಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿದೆ. ಅವುಗಳಲ್ಲಿ ತುಮಕೂರು ಮಹಾನಗರ ಪಾಲಿಕೆಯೂ ಒಂದಾಗಿದೆ. 60 ಕೋಟಿ ರೂ.ಗಳಿಂದ 200 ಕೋಟಿ ರೂ.ಗಳವರೆಗೂ ಖರ್ಚು ಮಾಡುವ ಅವಕಾಶವಿದ್ದು, ಇದರಿಂದಾಗಿ ಅಂತರ್ಜಲ ವೃದ್ಧಿಯಾಗಲಿದೆ ಎಂದರು.

ಜಲಜೀವನ್ ಮಿಷನ್ :

      ಪ್ರತಿಯೊಂದು ಮನೆಗೂ 2024 ರ ಒಳಗೆ ನಲ್ಲಿ ನೀರು ಸಂಪರ್ಕ ಕಲ್ಪಿಸುವುದು ಕೇಂದ್ರ ಸರ್ಕಾರದ ಉದ್ದೇಶ. ಅದಕ್ಕಾಗಿ ಜಲಜೀವನ ಮಿಷನ್ ಜಾರಿಗೆ ತಂದಿದ್ದು, 2023ರ ಒಳಗೆ ಕರ್ನಾಟಕ ರಾಜ್ಯದಲ್ಲಿ ಈ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕಿದೆ ಎಂದರು. ಈ ಯೋಜನೆಯಡಿಯಲ್ಲಿ ಮನೆ ಮನೆಗೂ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗುವುದು. ಪ್ರತಿಯೊಬ್ಬರಿಗೆ ಒಂದು ದಿನಕ್ಕೆ 65 ಲೀಟರ್‍ನಂತೆ ನೀರು ಸರಬರಾಜು ಮಾಡಲಾಗುವುದು ಎಂದರು.

      ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಿಗೆ ಮಾ.31ರ ಒಳಗೆ ದೇಶದ ಪ್ರತಿಯೊಂದು ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಿಗೆ ನಲ್ಲಿ ನೀರು ಸಂಪರ್ಕಕಲ್ಪಿಸಲು ಕೇಂದ್ರ ಸರ್ಕಾರ ಆಂದೋಲನ ರೂಪಿಸಿದೆ. ಅದರಂತೆ ನಮ್ಮ ಜಿಲ್ಲೆಯಲ್ಲಿಯೂ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದರು.

ರಾಷ್ಟ್ರೀಯ ನದಿ ಜೋಡಣೆ:

      ಕೇಂದ್ರ ಸರ್ಕಾರದ ನದಿ ಜೋಡಣೆ ವ್ಯಾಪ್ತಿಗೆ ಭದ್ರಾ ಮೇಲ್ದಂಡೆ ಯೋಜನೆ ಸೇರ್ಪಡೆಗೆ ಇನ್ ಪ್ರಿನ್ಸಿಪಲ್ ಅಪ್ರೂವಲ್ ಆಗಿದೆ. ಬೇಡ್ತಿ-ವರದಾ ಡಿಪಿಆರ್ ಸಿದ್ಧಪಡಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಹೇಮಾವತಿ-ನೇತ್ರಾವತಿ ಲಿಂಕ್ ಯೋಜನೆಗೆ ಬದಲಾಗಿ ಎತ್ತಿನಹೊಳೆ ಯೋಜನೆ ಸೇರ್ಪಡೆಗೆ ಚಾಲನೆ ನೀಡಬೇಕಿದೆ. ಕೇಂದ್ರದ ಇತರೆ ನದಿ ಜೋಡಣೆ ಯೋಜನೆಗಳಿಂದ ರಾಜ್ಯದ ಪಾಲಿನ ನದಿ ನೀರು ಬಳಕೆಯ ಯೋಜನೆಗೆ ಇದು ಅನುಕೂಲವಾಗಲಿದೆ ಎಂದರು. ರಾಜ್ಯದ ನದಿ ಜೋಡಣೆ ಯೋಜನೆಗೆ ಡಿಪಿಆರ್ ಮಾಡಲು ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ ಎಂದರು.

      ಕೇಂದ್ರ ಸರ್ಕಾರ 2016 ರಲ್ಲಿಯೇ ದೇಶದ ಎಲ್ಲಾ ಜಿಲ್ಲೆಗಳ ಡಿಸ್ಟ್ರಿಕ್ಟ್ ಇರಿಗೇಷನ್ ಪ್ಲಾನ್ ಮತ್ತು ರಾಜ್ಯಗಳ ಸ್ಟೇಟ್ ಇರಿಗೇಷನ್ ಪ್ಲಾನ್ ಮಾಡಿದೆ. ಈ ಯೋಜನೆಯ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿದೆ ಎಂದರು.

      ತುಮಕೂರು ಜಿಲ್ಲಾ ದಿಶಾ ಸಮಿತಿ ನಿರ್ಣಯದ ಮೇರೆಗೆ ಜಿಲ್ಲೆಯನ್ನು ಸಮಗ್ರ ನೀರಾವರಿ ಪೈಲಟ್ ಯೋಜನೆಯಾಗಿ ತೆಗೆದುಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈ ಯೋಜನೆಯ ನೋಡಲ್ ಆಫೀಸರ್ ಆಗಿ ಕೆ.ಜೈಪ್ರಕಾಶ್ ಇರಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಜಲಶಕ್ತಿ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಸಂಬಂಧಿಸಿದ ಇಲಾಖಾಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಈ ಎಲ್ಲಾ ಯೋಜನೆಗಳು ಸಮರ್ಪಕವಾಗಿ ಜಾರಿಯಾದಲ್ಲಿ ನಮ್ಮ ರಾಜ್ಯ ಜಲಶಕ್ತಿಯಲ್ಲಿ ಕ್ರಾಂತಿ ಮಾಡಲಿದೆ ಎಂದರು.

      ಪತ್ರಿಕಾ ಗೋಷ್ಠಿಯಲ್ಲಿ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಇತರರಿದ್ದರು.

ಊರಿಗೊಂದು ಕೆರೆ :
      ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಊರಿಗೊಂದು ಕೆರೆ – ಆ ಕೆರೆಗೆ ನದಿ ನೀರು ಪರಿಕಲ್ಪನೆ ಯೋಜನೆಗೆ ಡಿಪಿಆರ್ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೊಳಿ ಆದೇಶ ನೀಡಿದ್ದಾರೆ. ಕಾವೇರಿ ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಕೆ.ಜೈಪ್ರಕಾಶ್ ಅವರನ್ನು ನೋಡಲ್ ಆಫೀಸರ್ ಆಗಿ ನೇಮಕ ಮಾಡಿದ್ದಾರೆ. ಈ ಯೋಜನೆ ಪರಮಶಿವಯ್ಯನವರ ಕನಸಾಗಿದ್ದು, ಬಹು ದಿನಗಳ ಬೇಡಿಕೆ ಈಡೇರಿದಂತಾಗುತ್ತದೆ.

-ಜಿ.ಎಸ್.ಬಸವರಾಜು, ಸಂಸದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link