ತಿಪಟೂರು :
ತಾಲ್ಲೂಕಿನಲ್ಲಿ ಕೊರೊನಾ ಲಸಿಕೆಯನ್ನು ಪಡೆಯಲು ನಗರದ ಮಿನಿ ವಿದಾನಸೌಧದ ಆವರಣದಲ್ಲಿ ಜಾತ್ರೆಯಂತೆ ಜನ ಸೇರುತ್ತಿದ್ದು, ಸರದಿಯನ್ನೇನೊ ನಿಲ್ಲಿಸುತ್ತಿದ್ದಾರೆ. ಆದರೆ ಜನರು ಯಾವುದೆ ಅಂತರವನ್ನು ಪಾಲಿಸುತ್ತಿಲ್ಲ ತಾಲ್ಲೂಕು ಆಡಳಿತವು ಸಹ ಈ ನಿಟ್ಟಿನಲ್ಲಿ ಎಡವುತ್ತಿದೆ.
ನಗರದ ಮಿನಿ ವಿಧಾನಸೌದದಲ್ಲಿ ಜೂ. 24 ರಂದು ಕೊರೊನಾ ಲಸಿಕೆ ದೊರೆಯುತ್ತದೆ ಎಂದು ನೆನ್ನೆಯೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ನಿನ್ನೆ ಬೆಳಗಿನ ಜಾವ 5 ಗಂಟೆಯಿಂದಲೇ ಲಸಿಕೆಗಾಗಿ ಜನರು ಸರದಿಯಲ್ಲಿ ನಿಲ್ಲಲಾರಂಭಿಸಿದರು. ಈ ಸರದಿಯನ್ನು ನಿಲ್ಲಿಸಲು ಆರಕ್ಷಕ ಇಲಾಖೆಯ ಸಹಕಾರದೊಂದಿಗೆ ತಾಲ್ಲೂಕು ಆಡಳಿತ ಸೂಕ್ತ ವ್ಯವಸ್ಥೆಯನ್ನು ಮಾಡಿತ್ತು. ಆದರೆ ಇಲ್ಲಿ ಯಾವುದೆ ಅಂತರ ಇರಲಿಲ್ಲ ಜೊತೆಗೆ ಕೆಲವರು ಮಾಸ್ಕ್ ಸಹ ಹಾಕದೆ ಇದ್ದದ್ದು ಕಂಡು ಬಂದಿತು. ಮುಖ್ಯವಾಗಿ ದೈಹಿಕ ಅಂತರ ಇಲ್ಲದೆ ಇದ್ದರಿಂದ ಯಾರಾದರೂ ಒಬ್ಬರು ರೋಗಿ ಇದ್ದರು ಸಹ ಇನ್ನಿತರರಿಗೆ ಹರಡುವ ಅಪಾಯವನ್ನು ಅಲ್ಲಗಳೆಯುವಂತಿಲ್ಲ.
ನಗರದ ಮಿನಿ ವಿಧಾನಸೌಧದಲ್ಲಿ ನಿನ್ನೆ ಸುಮಾರು 1900 ಜನರಿಗೆ ಲಸಿಕೆಯನ್ನು ವಿತರಿಸಲಾಗಿದೆ, ಒಂದೇ ಕಡೆ ಇಷ್ಟೊಂದು ಜನರನ್ನು ಸೇರಿಸುವ ಬದಲು ಬೂತ್ ಮಟ್ಟದಲ್ಲಿ ಏಕೆ ಲಸಿಕೆಯನ್ನು ಕೊಡುತ್ತಿಲ್ಲವೆಂದು ಜನರು ಮಾತನಾಡಿಕೊಳ್ಳುತ್ತಿದ್ದು, ಆ ಸರದಿಯಲ್ಲಿ ಲಸಿಕೆ ತೆಗೆದುಕೊಳ್ಳಲು ಹೋಗಿ ಎಲ್ಲಿ ಕೊರೊನಾ ವಕ್ಕರಿಸುತ್ತದೆಂದು ಕೆಲವು ಜನರು ಮುಂದೆ ಬರುತ್ತಿಲ್ಲ.
ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಒಂದು ಸಂದೇಶ ಹರಿದಾಡುತ್ತಿದ್ದು ಜನರ ಮತವನ್ನು ಹಾಕಿಸುವಾಗ ಜನಪ್ರತಿನಿಧಿಗಳು ಮತಕೇಂದ್ರಕ್ಕೆ ತೆರಳಲು ವಾಹನದ ವ್ಯವಸ್ಥೆಯನ್ನು ಮಾಡುತ್ತಾರೆ, ಆದರೆ ಲಸಿಕೆಯನ್ನು ಹಾಕಿಸಿ ಎಂದರೆ ದೂರ ಓಡುತ್ತಾರೆ ಎಂದು ಜನರು ಜನ ಪ್ರತಿನಿಧಿಗಳನ್ನು ಲೇವಡಿ ಮಾಡುತ್ತಿದ್ದಾರೆ.
ಈಗಾಗಲೇ ಬಹಳಷ್ಟು ಜನರು ಲಸಿಕೆ ಪಡೆದಿದ್ದಾರೆ. ಇನ್ನು ಜುಲೈ 1 ರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆಯ ಮೇರೆಗೆ ಲಸಿಕೆಯನ್ನು ಹಾಕಲಾಗುವುದೆಂದು ಸರ್ಕಾರ ತಿಳಿಸಿದೆ. ಈಗಲಾದರು ತಾಲ್ಲೂಕು ಆಡಳಿತ ಬೂತ್ ಮಟ್ಟದಲ್ಲಿ ಉಳಿದವರಿಗೆ ಲಸಿಕೆ ಹಾಕುವ ಅಭಿಯಾನವನ್ನು ಹಾಕಿಕೊಂಡು ಉಳಿದಿರುವ ಜನರಿಗೆ ಲಸಿಕೆಯನ್ನು ಹಾಕುವಂತಾಗಬೇಕು.
ಸರದಿಯಲ್ಲಿ ಕಾಣದ ಮುಸ್ಲಿಂ ಬಾಂಧವರು: ಸರ್ಕಾರದ ಯಾವುದೇ ಯೋಜನೆಯಾದರು ಮುಂದೆ ನಿಂತು ಸೌಲಭ್ಯ ಪಡೆಯುವ ಮುಸ್ಲಿಂ ಬಾಂದವರು ಏಕೋ ಏನೋ ಕೊರೊನಾ ಲಸಿಕಾ ಅಭಿಯಾನ ಆರಂಭವಾದಗಿನಿಂದ ಕೆಲವರನ್ನು ಬಿಟ್ಟರೆ, ಯಾರು ಸಹ ಲಸಿಕೆಯನ್ನು ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ. ಕೊರೊನಾ ಲಸಿಕೆ ತೆಗೆದುಕೊಂಡರೆ ಏನಾಗುತ್ತೊ ಎಂಬ ಭಯ ಕಾಡುತ್ತಿದೆಯೊ ಇಲ್ಲ ಲಸಿಕೆಯಿಂದ ಏನೂ ಪ್ರಯೋಜನವಿಲ್ಲ ಲಸಿಕೆ ತೆಗೆದುಕೊಂಡರೂ ಕೊರೊನ ಬಂದವರನ್ನು ನಾವು ನೋಡಿದ್ದೇವೆ ಎಂಬ ತಾತ್ಸಾರದಿಂದ ಲಸಿಕೆ ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲವೊ ಗೊತ್ತಿಲ್ಲ. ಆದರೆ ಅವರ ಆರೋಗ್ಯದ ದೃಷ್ಠಿಯಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ಲಸಿಕೆ ತೆಗೆದುಕೊಳ್ಳುವಂತೆ ಅವರ ಮನವೊಲಿಸಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
