ಪೊಲೀಸರ ಸಹಕಾರದೊಂದಿಗೆ ರಸ್ತೆ ಒತ್ತುವರಿ ತೆರವು

ಹುಳಿಯಾರು : 

      ಕಳೆದ ವಾರ ಪಿಡಿಓ ಎಚ್ಚರಿಸಿ ಹೋಗಿದ್ದರೂ ರಸ್ತೆ ಒತ್ತುವರಿ ತೆರವು ಮಾಡದೆ ನಿರ್ಲಕ್ಷ್ಯಿಸಿದ್ದರಿಂದ ಪೊಲೀಸರ ಸಹಕಾರ ಪಡೆದು ಒತ್ತುವರಿ ತೆರವು ಮಾಡಿದ ಘಟನೆ ಹುಳಿಯಾರು ಹೋಬಳಿಯ ಕಂಪನಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.

      ರಾಷ್ಟ್ರೀಯ ಹೆದ್ದಾರಿ 234 ಯಿಂದ ಕುರಿಹಟ್ಟಿ, ತೋಟದ ಮನೆಗಳಿಗೆ ಓಡಾಡಲು ಕಂಪನಹಳ್ಳಿ ಗ್ರಾಮದೊಳಗಿನಿಂದ ಸಾರ್ವಜನಿಕ ರಸ್ತೆಯಿತ್ತು. ಅನೇಕ ದಶಕಗಳಿಂದ ಸಾರ್ವಜನಿಕ ಬಳಕೆಗಿದ್ದ ಈ ರಸ್ತೆಗೆ ಅಕ್ಕಪಕ್ಕದ ಮನೆಯವರು ಒತ್ತುವರಿ ಮಾಡಿ ಕಲ್ಲು, ಮುಳ್ಳು, ಗಿಡಗಳನ್ನು ಹಾಕಿ ಬಂದ್ ಮಾಡಿದ್ದರು.

ಇದರಿಂದ ಓಡಾಟಕ್ಕೆ ತೊಂದರೆಯಾಗುತ್ತಿದ್ದು 3-4 ಕಿ.ಮೀ. ಸುತ್ತಿ ಬರುವ ಅನಿವಾರ್ಯತೆ ಸೃಷ್ಠಿಯಾಗಿದೆ ಎಂದು ಹೈನುಗಾರರು, ಶಾಲಾ ವಿದ್ಯಾರ್ಥಿಗಳು, ತೋಟದಮನೆ ನಿವಾಸಿಗಳು ಗಾಣಧಾಳು ಪಂಚಾಯ್ತಿಗೆ ದೂರು ನೀಡಿ, ರಸ್ತೆ ಒತ್ತುವರಿ ತೆರವು ಮಾಡುವಂತೆ ಮನವಿ ಸಲ್ಲಿಸಿದ್ದರು.

      ಪರಿಣಾಮ ಗ್ರಾಪಂ ಪಿಡಿಓ ನಾರಾಯಣ್ ಅವರು ಕಳೆದ ವಾರ ಗ್ರಾಪಂ ಅಧ್ಯಕ್ಷೆಯ ಪತಿ ನಾಗರಾಜು ಹಾಗೂ ಗ್ರಾಪಂ ಸದಸ್ಯ ಪ್ರಕಾಶ್ ಅವರೊಂದಿಗೆ ಕಂಪನಹಳ್ಳಿಗೆ ಆಗಮಿಸಿ ಪರಿಶೀಲಿಸಿ 3-4 ದಿನ ಸಮಯಾವಕಾಶ ಕೊಟ್ಟು ಒತ್ತುವರಿ ತೆರವು ಮಾಡದಿದ್ದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

      ಗಡುವು ಕೊಟ್ಟು ವಾರ ಕಳೆದಿದ್ದರೂ ಒತ್ತುವರಿ ತೆರವು ಮಾಡದೆ ನಿರ್ಲಕ್ಷ್ಯಿಸಿದ್ದರಿಂದ ಶುಕ್ರವಾರ ಪೊಲೀಸರ ಸಹಕಾರ ಪಡೆದು ಒತ್ತುವರಿ ತೆರವಿಗೆ ಪಿಡಿಓ ಮುಂದಾದರು. ಈ ಸಂದರ್ಭದಲ್ಲಿ ಒತ್ತುವರಿದಾರರು ತೀರ್ವ ವಿರೋಧ ವ್ಯಕ್ತಪಡಿಸಿದರಲ್ಲದೆ ಒತ್ತುವರಿ ಜಾಗ ತಮ್ಮದೆಂದು ವಾದಿಸಿದರು.

      ಇದಕ್ಕೆ ಎಎಸ್‍ಐ ನಂಜೇಗೌಡ ಅವರು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿ, ಸುಮ್ಮನೆ ವಾದ ಮಾಡುವ ಬದಲು ನಿಮ್ಮ ನಿವೇಶದ ಪತ್ರ ತನ್ನಿ ಎಂದು ಗದರಿದರು. ಆಗ ಎಲ್ಲರೂ ತಮ್ಮ ತಮ್ಮ ಪತ್ರ ತಂದು ತೋರಿಸಿದಾಗ ಅದರಂತೆ ಅಳತೆ ಮಾಡಲಾಗಿ 3-4 ಅಡಿಗಳಿಂದ 10-12 ಅಡಿಗಳಷ್ಟು ಒತ್ತುವರಿ ಮಾಡಿರುವುದು ಸ್ಪಷ್ಟವಾಯಿತು. ಪತ್ರದಂತೆ ಅವರ ಜಾಗ ಗುರುತು ಮಾಡಿ ಉಳಿದ ಜಾಗದಲ್ಲಿದ್ದ ಕಲ್ಲು, ಮರ, ಹಿತ್ತಲು, ಮುಳ್ಳುಗಳನ್ನು ಪಂಚಾಯ್ತಿ ಸಿಬ್ಬಂದಿಗಳಿಂದ ತೆರವು ಮಾಡಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap