ಡಿಸೆಂಬರ್ 31ರಂದು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅಂದು ಕರ್ನಾಟಕ ಬಂದ್ಗೆ ಕರೆ ನೀಡಿರುವುದು ಬೇಸರದ ವಿಚಾರ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರಿನ ಡಿಆರ್ಸಿ ಚಿತ್ರಮಂದಿರದಲ್ಲಿ ಬಡವ ರಾಸ್ಕಲ್ ಸಿನಿಮಾ ವೀಕ್ಷಣೆ ಮಾಡಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಶಿವಣ್ಣ, ನಾವು ಯಾವಾಗಲೂ ಕನ್ನಡದ ಪರ.
ಹೋರಾಟ ಉತ್ತಮ ರೀತಿಯಲ್ಲಿ ಆಗಬೇಕೆಂಬುದು ನಮ್ಮ ಉದ್ದೇಶ. ಆದರೆ, ಡಿ.31 ಕ್ಕೆ ಬಂದ್ಗೆ ಕರೆ ನೀಡಿರೋದು ನಿಜಕ್ಕೂ ಬೇಸರದ ವಿಚಾರವಾಗಿದೆ. ಅಂದು ಮೂರು ಕನ್ನಡದ ಸಿನಿಮಾಗಳು ಬಿಡುಗಡೆ ಆಗುತ್ತಿವೆ.
ಇಂತಹ ವೇಳೆಯಲ್ಲಿ ಬಂದ್ಗೆ ಕರೆ ನೀಡಿರುವುದು ಕನ್ನಡಕ್ಕೆ ದ್ರೋಹ ಮಾಡಿದ ಹಾಗೆ ಎಂದರು. ಸರ್ಕಾರ ಉತ್ತಮವಾಗಿ ಸ್ಪಂದನೆ ಮಾಡುತ್ತಿದೆ. ಸಮಸ್ಯೆ ಇದ್ದಾಗ ಅದನ್ನು ಬುದ್ಧಿವಂತಿಕೆಯಿಂದ ಬಗೆಹರಿಸಿಕೊಳ್ಳಬೇಕೆಂದು ಇದೇ ಸಂದರ್ಭದಲ್ಲಿ ಹೇಳಿದರು.
ಸಿನಿಮಾ ಬಗ್ಗೆ ಮಾತನಾಡಿದ ಶಿವಣ್ಣ ಬಡವ ರಾಸ್ಕಲ್ ಸಿನಿಮಾದಲ್ಲಿ ಧನಂಜಯ್ ಉತ್ತಮವಾಗಿ ನಟಿಸಿದ್ದಾರೆ. ನನಗೆ ಧನಂಜಯ್ ಪರ್ಫಾಮೆನ್ಸ್ ತುಂಬಾ ಇಷ್ಟ ಆಯ್ತು. ಫಸ್ಟ್ ಪ್ರೊಡಕ್ಷನ್ನಲ್ಲಿ ಧನಂಜಯ್ ಅದ್ಧೂರಿಯಾಗಿ ಮಾಡಿದ್ದಾರೆ. ಒಂದು ಸಣ್ಣ ವಿಷಯವನ್ನು ವಿಭಿನ್ನವಾಗಿ, ಹಾಸ್ಯ, ಕ್ಯೂರಿಯಾಸಿಟಿ ಮೂಲಕ ಹೇಳಲು ಹೊರಟಿದ್ದಾರೆ.
ಶಂಕರ್ ಗುರು ಉತ್ತಮ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಎಲ್ಲ ಪಾತ್ರಗಳಿಗೂ ಜೀವ ತುಂಬಿದ್ದಾರೆ ಎಂದು ಹೇಳಿದರು. ಚಿತ್ರ ವೀಕ್ಷಣೆ ವೇಳೆ ಅಭಿಮಾನಿಗಳ ಸೆಲ್ಫಿಗೆ ಶಿವಣ್ಣ ಪೋಸ್ ಕೊಟ್ಟರು.
ಬಂದ್ ಯಾಕೆ?
ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡಾಟ ಹಿನ್ನೆಲೆಯಲ್ಲಿ ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ಕನ್ನಡಪರ ಹೋರಾಟದ ಸಂಘಟನೆಗಳು ಬಂದ್ಗೆ ಕರೆ ನೀಡಿವೆ. ಬಂದ್ಗೆ ಕೇವಲ ನೈತಿಕ ಬೆಂಬಲ ನೀಡಲು ಚಲನಚಿತ್ರ ವಾಣಿಜ್ಯ ಮಂಡಳಿ ಒಪ್ಪಿಗೆ ಸೂಚಿಸಿದೆ. ಆದರೆ, ಡಿ.31 ರಂದು 3 ಕನ್ನಡದ ಸಿನಿಮಾಗಳು ಬಿಡುಗಡೆಯಾಗಲಿವೆ.
ಲವ್ ಯು ರಚ್ಚು, ಅರ್ಜುನ್ ಗೌಡ ಹಾಗೂ ಹುಟ್ಟು ಹಬ್ಬದ ಶುಭಾಶಯಗಳು ಸಿನಿಮಾಗಳು ಬಿಡುಗಡೆ ಆಗಲಿವೆ. ಹೀಗಾಗೀ ನೈತಿಕ ಬೆಂಬಲ ಮಾತ್ರ ನೀಡಲು ಫಿಲ್ಮ್ ಚೇಂಬರ್ ತೀರ್ಮಾನ ಮಾಡಿದೆ. ಇದಕ್ಕೂ ಮುನ್ನ ಸಂಪೂರ್ಣ ಬಂದ್ಗೆ ವಾಣಿಜ್ಯ ಮಂಡಳಿ ಕೂಡ ನಿರ್ಧರಿಸಿತ್ತು. ಇದೀಗ ನಿಲುವು ಬದಲಿಸಿದ ಫಿಲ್ಮ್ ಚೇಂಬರ್ ನಿರ್ಧಾರಕ್ಕೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಸಂಪೂರ್ಣ ಬೆಂಬಲ ನೀಡುವಂತೆ ಒತ್ತಾಯ ಮಾಡಿದ್ದು, ಇಂದು ಫಿಲ್ಮ್ ಚೇಂಬರ್ ಕಚೇರಿ ಮುಂದೆ ಪ್ರತಿಭಟನೆ ಮಾಡುವ ಸಾಧ್ಯತೆ ಇದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಮಧ್ಯಾಹ್ನ 11.30ಕ್ಕೆ ಫಿಲ್ಮ್ ಚೇಂಬರ್ ಎದುರು ಪ್ರತಿಭಟನೆ ನಡೆಯಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ