ಕಾಂಗ್ರೆಸ್ ಸಕ್ರಿಯ, ಜೆಡಿಎಸ್ ಶಾಸಕರಿಗೆ ಆಕಾಂಕ್ಷಿಗಳ ತಲೆಬೇನೆ
ಮಧುಗಿರಿ
-ರಾಜೇಂದ್ರ ಎಂ.ಎನ್
ಏಕಶಿಲಾ ಬೆಟ್ಟದ ಖ್ಯಾತಿಯ ಮಧುಗಿರಿ ತಾಲ್ಲೂಕಿನಲ್ಲಿ ಬೇಸಿಗೆಯ ಕಾವು ಮೆಲ್ಲನೆ ಹೆಚ್ಚಾಗುತ್ತಿದೆ. ಇದರ ಜೊತೆಯಲ್ಲೇ ರಾಜಕೀಯ ಚಟುವಟಿಕೆಗಳೂ ಕ್ರಿಯಾಶೀಲಗೊಂಡಿವೆ. ಆದರೆ ಈ ಕ್ಷೇತ್ರದಲ್ಲಿ ರಾಜಕೀಯ ಕೆಸರೆರಚಾಟ, ಪರ ವಿರೋಧದ ವಾಗ್ದಾಳಿಗಳು ಕಂಡುಬರುತಿಲ್ಲ. ಚಳಿಗಾಲದ ಕೂಲ್ ಗೆ ತಕ್ಕಂತೆ ರಾಜಕೀಯವೂ ಕೂಲ್ ಆಗಿದ್ದು ಚುನಾವಣೆಯ ದಿನಗಳು ಹತ್ತಿರ ಬಂದಂತೆ ಈ ವಿದ್ಯಮಾನಗಳು ಬಿರುಸು ಪಡೆಯಲಿವೆ.
ಮಧುಗಿರಿ ವಿಧಾನಸಭಾ ಕ್ಷೇತ್ರವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಕ್ಷೇತ್ರದಲ್ಲಿ ಒಟ್ಟು 248 ಮತಗಟ್ಟೆಗಳಿವೆ. 95,661 ಪುರುಷ, 94,551 ಮಹಿಳೆಯರು ಹಾಗೂ ಇತರೆ 02 ಸೇರಿದಂತೆ ಒಟ್ಟು 1,90,214 ಮತದಾರರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತಮ್ಮ ಮತವನ್ನು ದಾನ ಮಾಡುವ ಕಾರ್ಯದಲ್ಲಿ ಪಾಲ್ಗೊಳ್ಳುವವರಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಅಭ್ಯರ್ಥಿ ಯಾರೆಂಬುದು ಈಗಾಗಲೇ ಬಹುತೇಕ ನಿಶ್ಚಯ. ಆದರೆ ಬಿಜೆಪಿ ಪಕ್ಷದಲ್ಲಿ ಅಭ್ಯರ್ಥಿ ಯಾರೆಂಬ ಗೊಂದಲವಿರುವುದರಿAದ ಆ ಪಕ್ಷದ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇಲ್ಲದಿದ್ದರಿಂದ ಕಾಂಗ್ರೆಸ್ ಮತಗಳೆಲ್ಲಾ ಬಿಜೆಪಿ ಪಾಲಾಗಿದ್ದವು. ಅದೇ ಹಾದಿಯಲ್ಲಿ ಹೋದ ಕೆಲ ಮತದಾರರು ವಾಪಸ್ ತಮ್ಮ ತಮ್ಮ ಮಾತೃ ಪಕ್ಷಗಳಿಗೆ ಇನ್ನೂ ಹಿಂದಿರುಗಿಲ್ಲ ಹಾಗೂ ಬಿಜೆಪಿ ಪರವಾಗಿ ಮತ ಚಲಾಯಿಸಿದ ಕೆಲ ಮತದಾರರು ಮತ್ತೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುತ್ತಾರೋ ಇಲ್ಲವೋ ಎಂಬ ಅನುಮಾನ ಮತ್ತು ಗೊಂದಲ ಪಕ್ಷದ ಮುಖಂಡರಲ್ಲಿ ಕಾರ್ಯಕರ್ತರಲ್ಲಿ ಕಾಡುತ್ತಲೆ ಇದೆ.
ಕಳೆದೆರಡು ವಿಧಾನಸಭಾ ಚುನಾವಣೆಯಲ್ಲಿ ಮೊದಲು ಕೆ.ಎನ್.ರಾಜಣ್ಣ ಆಯ್ಕೆಯಾದರೆ ನಂತರ ಎಂ.ವಿ.ವೀರಭದ್ರಯ್ಯ ಶಾಸಕರುಗಳಾಗಿ ಆಯ್ಕೆಯಾಗಿದ್ದರು. ಬಿಜೆಪಿ ಮೂರನೇ ಸ್ಥಾನದಲ್ಲಿ ತೃಪ್ತಿ ಪಟ್ಟುಕೊಂಡಿತ್ತು. ಇತ್ತೀಚಿನ ದಿನಮಾನಗಳಲ್ಲಿ ರಾಜಣ್ಣನವರ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳನ್ನು ಜನರು ಮೆಲಕು ಹಾಕುತ್ತಿದ್ದಾರೆ.
ಹಾಲಿ ಶಾಸಕ ಎಂ.ವಿ.ವೀರಭದ್ರಯ್ಯ ಸಹ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ.ಗಳ ಅನುದಾನ ತಂದಿದ್ದೇನೆAದು ಸಭೆ ಸಮಾರಂಭಗಳಲ್ಲಿ ಹೇಳುತ್ತಿದ್ದಾರೆ. ರಾಜಣ್ಣನವರ ಅವಧಿಯಲ್ಲಿನ ಹಲವಾರು ಕಾಮಗಾರಿಗಳು ಸಹ ಇದರೊಳಗೆ ಸೇರಿವೆ.. ಬಿಜೆಪಿ ಪಕ್ಷದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಲವಾರು ಯೋಜನೆಗಳನ್ನು ಮುಂದಿಟ್ಟುಕೊಂಡು ವಿಜಯ ಸಂಕಲ್ಪ ಯಾತ್ರೆಯೇನೋ ನಡೆಯುತ್ತಿದೆ.
ಆದರೆ ಕ್ಷೇತ್ರದ ಅಭ್ಯರ್ಥಿ ಯಾರೆಂದೂ ಇನ್ನೂ ನಿಗೂಢವಾಗಿದೆ. ಕ್ಷೇತ್ರದಲ್ಲಿ ಭೀಮನಕುಂಟೆ ಹನುಮಂತೇಗೌಡ, ಮಧು ಚ್ಯಾರಿಟೆಬಲ್ನ ಜೆಡಿ ಪಾಳ್ಯದ ಮಧು ಹಾಗೂ ಇವರಿಬ್ಬರಿಗೂ ಮೊದಲು ಮಧುಗಿರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂದು ಗುರುತಿಸಿಕೊಂಡು ಪಕ್ಷದ ಬಲವರ್ಧನೆಗೆ ತೊಡಗಿದ್ದ ಸುರಕ್ಷಾ ಮಂಜುನಾಥ್ ರವರ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ.
ಹಾಲಿ ಅಧಿಕಾರಿಯೊಬ್ಬರು ಕ್ಷೇತ್ರದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕ್ಷೇತ್ರದಲ್ಲಿ ತಮ್ಮ ಬಂಧು-ಬಳಗ -ಮಿತ್ರರಿರುವ ಕಡೆ ಓಡಾಡುತ್ತಿದ್ದು, ಬಿಜೆಪಿಯಿಂದ ಟಿಕೆಟ್ ತರುವ ಪ್ರಯತ್ನ ನಡೆಸುತ್ತಿದ್ದೇನೆಂದು ಪುಕಾರುಗಳನ್ನು ಹರಿಯ ಬಿಡುತ್ತಿದ್ದಾರೆ. ಆದರೆ ಉನ್ನತ ಮೂಲಗಳ ಪ್ರಕಾರ ಆ ಅಧಿಕಾರಿ ಮೇಲಿರುವ ಅಪಾದನೆಗಳು, ಮೊಕದ್ದಮೆಗಳನ್ನು ಪರಿಗಣಿಸಿರುವ ಪಕ್ಷಗಳು ಅವರನ್ನು ಪಕ್ಷದ ಕಛೇರಿಯ ಬಾಗಿಲ ಬಳಿಯೂ ಸುಳಿದಾಡಲು ಅವಕಾಶ ನೀಡುತ್ತಿಲ್ಲವೆಂಬುದೂ ಕೂಡ ಗುಟ್ಟಾಗೇನೂ ಉಳಿದಿಲ್ಲ.
ಅದರಲ್ಲೂ ಕೆಲವು ಗ್ರಾಮ ಮತ್ತು ಪಟ್ಟಣದಲ್ಲಿನ ದೇವಸ್ಥಾನದ ಜೀರ್ಣೋದ್ದಾರಕ್ಕೆಂದು ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದು, ಈಗ ದೇವಸ್ಥಾನದ ಸಮಿತಿಯವರು ದೂರವಾಣಿ ಮೂಲಕ ಸಂಪರ್ಕಿಸಿದರೆ ನೀವು ಕರೆ ಮಾಡಿದ ವ್ಯಕ್ತಿ ನಿಮ್ಮ ಕರೆಗಳಿಗೆ ಉತ್ತರಿಸುತ್ತಿಲ್ಲವೆಂಬ ಸಿದ್ದ ಉತ್ತರ ಬರುತ್ತಿದೆ..! ಈ ರೀತಿಯ ವ್ಯಕ್ತಿತ್ವ ಮನಗಂಡು ಜೆಡಿಎಸ್ ಪಕ್ಷದವರು ಟಿಕೆಟ್ ನೀಡುವುದನ್ನು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದ್ದು, ಇಂತಹವರುಗಳಿAದ ಕ್ಷೇತ್ರದ ಅಭಿವೃದ್ಧಿ ಸಾಧ್ಯವೇ ಎಂಬುದು ಮತದಾರರ ಪ್ರಶ್ನೆಯಾಗಿದೆ.
ಕೆಲ ತಿಂಗಳ ಹಿಂದೆ ಈ ಬಾರಿ ಜೆಡಿಎಸ್ ಅಭ್ಯರ್ಥಿ ಇವರೆ ಎನ್ನುವಂತಾಗಿತ್ತು. ಇವರ ಈ ಮಾತು ಗಳಿಂದಾಗಿಯೆ ಹಾಲಿ ಶಾಸಕ ಎಂ.ವಿ.ವೀರಭದ್ರಯ್ಯನವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ ವಿದ್ಯಮಾನವೂ ನಡೆಯಿತು. ಆದರೆ ನಂತರದ ದಿನಗಳಲ್ಲಿ ಹಾಲಿ ಶಾಸಕರೆ ಜೆಡಿಎಸ್ ಅಭ್ಯರ್ಥಿ ಎಂದು ಪಕ್ಷದ ಮುಖಂಡರು ಘೋಷಿಸಿದರು. ಆದರೂ ಇದರ ಬೆನ್ನಲ್ಲಿಯೇ ಅಧಿಕಾರಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಜೆಡಿಎಸ್, ಬಿಜೆಪಿಯ ಮತದಾರರಲ್ಲಿ ಗೊಂದಲ ಮೂಡಿಸಿದೆ.
ಇತ್ತೀಚೆಗೆ ಕ್ಷೇತ್ರದ ಜನರು ಸಹ ತಮ್ಮ ಕುಟುಂಬ ವರ್ಗಗಳಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಮೂರೂ ಪಕ್ಷಗಳ ರಾಜಕೀಯ ನಾಯಕರು ಹಾಗೂ ಮುಖಂಡರುಗಳಿಗೆ ಆಹ್ವಾನ ನೀಡುವ ಪರಿಪಾಠವನ್ನು ಬೆಳೆಸಿಕೊಂಡು, ಮತದಾನದ ಗೌಪ್ಯತೆಯನ್ನು ಕಾಪಾಡಿ ಕೊಳ್ಳುವ ಮೂಲಕ ಯಾರಿಗೂ ರಾಜಕೀಯವಾಗಿ ನಿಷ್ಟ್ಟುರವಾಗುವುದು ಬೇಡವೆಂಬುದನ್ನು ತೋರಿಸುತ್ತಿದ್ದಾರೆ.
ಚುನಾವಣಾ ಪ್ರಕ್ರಿಯೆ ಮುನ್ನೆಲೆಗೆ ಬಂದಾಗ ಹಾಲಿ ಶಾಸಕರ ವಿರುದ್ಧ ವಿರೋಧ ಹೆಚ್ಚಾಗುವುದು ಸಾಮಾನ್ಯ. ಇಲ್ಲಿನ ಶಾಸಕರು ಕಳೆದ ಚುನಾವಣೆಯಲ್ಲಿ ಜನರಿಗೆ ನೀಡಿದ ಕೆಲ ಭರವಸೆಗಳನ್ನು ಈಡೇರಿಸಿಲ್ಲ ಎಂಬ ಆಪಾದನೆಗಳೂ ಇವೆ. ಈಗಾಗಲೇ ಕೆಲ ಪಕ್ಷಗಳು ಬುಕಿಂಗ್ ಕಾರ್ಯಗಳನ್ನು ಆರಂಭಿಸಿದ್ದು, ಕೆಲ ಜಾತಿಗಳ ಮುಖಂಡರುಗಳಿಗೆ ನೀವು ಇರುವ ಪಕ್ಷಗಳಲ್ಲಿಯೇ ಇದ್ದು ಕೊಂಡು ಅಲ್ಲಿಂದಲೇ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಆ ಪಕ್ಷಗಳ ಏಜೆಂಟರುಗಳು ಚುನಾವಣಾ ವಿಚಾರವಾಗಿ ಟೋಕನ್ ಆಡ್ವಾನ್ಸ್ಗಳನ್ನು ನೀಡುತ್ತಿದ್ದಾರೆಂಬ ವದಂತಿಗಳು ಹೆಚ್ಚಿವೆ.
ಕ್ಷೇತ್ರದ ಗಂಧ ಗಾಳಿ ಗೊತ್ತಿಲ್ಲದವರು, ಜನರ ಕಷ್ಟಗಳಿಗೆ ಸಮಸ್ಯೆಗಳಿಗೆ ಸ್ಪಂದಿಸದವರು ನಾನೆ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಾ ಸಭೆ ಸಮಾರಂಭಗಳಲ್ಲಿ ಜನರು ನೀಡಿದ ಹಾರ ತುರಾಯಿಗಳನ್ನು ಸ್ವೀಕರಿಸಿ, ಕಾರ್ಯಕ್ರಮ ಮುಗಿಯುವವರೆವಿಗೂ ಕೊರಳಿಗೆ ಹಾರ ಹಾಕಿಕೊಂಡೆ ಕುಳಿತು, ಟೊಳ್ಳು ಭರವಸೆಗಳ ಭಾಷಣ ಮಾಡುತ್ತಾ ಚುನಾವಣೆಯ ದಿನಾಂಕಕ್ಕಾಗಿ ಹಾತೊರೆಯುತ್ತಿದ್ದಾರೆ.
ಕಳೆದ ಚುನಾವಣೆಗಿಂತ ಈ ಬಾರಿ ನಡೆಯಲಿರುವ ಚುನಾವಣೆಯಲ್ಲಿ ಕೆ.ಎನ್.ರಾಜಣ್ಣ ಭಿನ್ನ ರೀತಿಯಲ್ಲಿ ಕಂಡು ಬರುತ್ತಿದ್ದಾರೆ. ಕ್ಷೇತ್ರದಲ್ಲಿ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು, ಆಯೋಜಿಸಿರುವ ಸಭೆ ಸಮಾರಂಭಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಜತೆಗೆ ಪಕ್ಷದ ಕಾರ್ಯಕ್ರಮಗಳು, ಸಭೆಗಳು ಹೆಚ್ಚು ಹೆಚ್ಚಾಗಿ ನಡೆಯುತ್ತಿದ್ದು ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್ ಘಟಕಗಳು, ಸಾಮಾಜಿಕ ಜಾಲ ತಾಣಗಳು ಸಕ್ರಿಯವಾಗಿವೆ.
ತಮ್ಮ ಪಕ್ಷದ ನಾಯಕರ ಜತೆ ಕೆಲ ಮುಖಂಡರುಗಳನ್ನು ಕಂಡರೆ ಸಾಕು ಮತದಾರರು ಹೌಹಾರುತ್ತಿದ್ದಾರೆ. ಜೆಡಿಎಸ್ ಪಕ್ಷದವರು ಕಳೆದ ಚುನಾವಣೆಯಲ್ಲಿ ಗೆಲುವಿಗಾಗಿ ಹೂಡಿದ್ದ ತಂತ್ರಗಳು ಫಲಿಸಿದ್ದವು. ಆದರೆ ಈ ಬಾರಿಯ ಚುನಾವಣೆಯಲ್ಲಿ ಆ ಮುಖಂಡರು ಗಳು ಮತ್ತೊಮ್ಮೆ ಆ ಜನರ ಬಳಿ ಹೋಗಲು ಬೇರೊಂದು ತಂತ್ರಗಾರಿಕೆಗಾಗಿ ಮೊರೆ ಹೋಗುತ್ತಿದ್ದಾರೆ.
ಬಿಎಸ್ಪಿ, ಆಮ್ಆದ್ಮಿ, ಕೆಆರ್ಎಸ್, ಕೆಕೆಪಿ ಪಕ್ಷಗಳಿಂದ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸುವರೆಂದು ತಿಳಿದು ಬಂದಿದೆ. ಸಂಕ್ರಾಂತಿ ಹಬ್ಬಕ್ಕೆ ಸೂರ್ಯ ತನ್ನ ಪಥ ಬದಲಾಯಿಸಿದಂತೆ, ಕ್ಷೇತ್ರದ ಜನರೂ ತಮ್ಮ ನಾಯಕನನ್ನು ಬದಲಿಸುತ್ತಾರೆಯೆ? ಅಥವಾ ಮುಂದುವರೆಸುತ್ತಾರೆಯೆ ಎಂಬುದನ್ನು ಕಾದು ನೋಡಬೇಕಾಗಿದೆ.
