ಬೆಂಗಳೂರು:
ಭದ್ರಾವತಿಯಲ್ಲಿ ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಲಿಮಿಟೆಡ್ (ವಿಐಎಸ್ಎಲ್) ಉಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಮತ್ತು ನೌಕರರ ಹಿತಾಸಕ್ತಿಗಳನ್ನು ರಕ್ಷಿಸಲಾಗುವುದು ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಭಾನುವಾರ ಹೇಳಿದರು.
ಕುಮಾರಸ್ವಾಮಿ ಅವರು ಭಾನುವಾರ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್ಎಐಎಲ್) ಅಧಿಕಾರಿಗಳೊಂದಿಗೆ ಸ್ಟೀಲ್ ಪ್ಲಾಂಟ್ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೈಸೂರು ಮಹಾರಾಜರ ದೂರದೃಷ್ಟಿಯಿಂದ ಸರ್ ಎಂ ವಿಶ್ವೇಶ್ವರಯ್ಯನವರು ಈ ಸ್ಥಾವರವನ್ನು ಸ್ಥಾಪಿಸಿದರು. ನಾನು ಅದರ ಪ್ರಸ್ತುತ ಸ್ಥಿತಿಯನ್ನು ನೋಡಿದೆ. ಸಂಸದ ಬಿ ವೈ ರಾಘವೇಂದ್ರ ಹಾಗೂ ಭದ್ರಾವತಿ ಮಾಜಿ ಶಾಸಕ ದಿವಂಗತ ಅಪ್ಪಾಜಿಗೌಡ ಈ ಉಕ್ಕಿನ ಸ್ಥಾವರವನ್ನು ಮುಚ್ಚದಂತೆ ಹೋರಾಟ ನಡೆಸಿದ್ದರು. ಪ್ರತಿಯೊಬ್ಬರೂ ಅದನ್ನು ಉಳಿಸಲು ಬಯಸುತ್ತಾರೆ. ಸ್ಥಾವರವನ್ನು ಪುನರುಜ್ಜೀವನಗೊಳಿಸಲು ಸಂಬಂಧಿಸಿದವರಿಂದ ಎಲ್ಲಾ ಅಗತ್ಯ ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಎಂದು ಹೇಳಿದರು.
ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಕೆಲವು ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಬಯಸುವುದಿಲ್ಲ. ನಾನು ಸಚಿವ ಸ್ಥಾನವನ್ನು ವಹಿಸಿಕೊಂಡಾಗ, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಐದು ಉಕ್ಕಿನ ಕಾರ್ಖಾನೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಹೀಗಾಗಿ ಮಾಹಿತಿ ಸಂಗ್ರಹಿಸಲು ಇಲ್ಲಿಗೆ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ವಿಶ್ವೇಶ್ವರಯ್ಯ ಐರನ್ ಅ್ಯಂಡ್ ಸ್ಟೀಲ್ ಲಿಮಿಟೆಡ್ ಪುನಶ್ಚೇತನಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸ್ಥಾವರವನ್ನು 1998 ರಲ್ಲಿ ಎಸ್ಎಐಎಲ್ ನೊಂದಿಗೆ ವಿಲೀನಗೊಳಿಸಲಾಯಿತು. ಪ್ರಧಾನಿಯವರ ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮ ನಿರ್ಭರ ಭಾರತ್’ ಉಪಕ್ರಮಗಳಿಗೆ ಅನುಗುಣವಾಗಿ ಮತ್ತು 2030 ರ ವೇಳೆಗೆ 300 ಮಿಲಿಯನ್ ಟನ್ ಉಕ್ಕು ಉತ್ಪಾದಿಸುವ ಗುರಿಯನ್ನು ಪೂರೈಸಲು, ನಾವು ಹಲವಾರು ಕಾರ್ಯಕ್ರಮಗಳನ್ನು ಆರಂಭಿಸಿದ್ದೇವೆಂದು ಹೇಳಿದರು.
ಸಂಸದ ರಾಘವೇಂದ್ರ ಮಾತನಾಡಿ, ಕಾರ್ಖಾನೆಯನ್ನು ಉಳಿಸಿ, ಐತಿಹಾಸಿಕ ವೈಭವ ಮರುಕಳಿಸಲು, ಸಾವಿರಾರು ಅವಲಂಬಿತ ಕುಟುಂಬಗಳಿಗೆ ಉತ್ತಮ ಜೀವನೋಪಾಯ ಒದಗಿಸಿ, ಕಾರ್ಮಿಕರ ಕುಂದುಕೊರತೆಗಳನ್ನು ಪರಿಹರಿಸುವವರೆಗೆ ನಾನು ವಿರಮಿಸುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಶಾರದ ಪೂರ್ಯನಾಯ್ಕ್, ಬಿ.ಕೆ.ಸಂಗಮೇಶ್, ಎಸ್ಎಐಎಲ್ ಅಧ್ಯಕ್ಷ ಅಮರೇಂದು ಪ್ರಕಾಶ್ ಉಪಸ್ಥಿತರಿದ್ದರು.
![](https://prajapragathi.com/wp-content/uploads/2024/07/visl-kumaraswamy.gif)