ಬೆಂಗಳೂರು:
ಕನಕಪುರ ರಸ್ತೆಯನ್ನು ಹೈ ಡೆನ್ಸಿಟಿ ಕಾರಿಡಾರ್ ಆಗಿ ಅಭಿವೃದ್ಧಿಪಡಿಸುವ ಯೋಜನೆಗೆ ನಾಗರೀಕರು ವಿರೋಧ ವ್ಯಕ್ತಪಡಿಸಿದ್ದು, ಭಾನುವಾರ ಪ್ರತಿಭಟನೆ ನಡೆಸಿದರು.ಕನಕಪುರ ರಸ್ತೆಯ ಅಪಾರ್ಟ್ಮೆಂಟ್ಗಳ ನಿವಾಸಿಗಳು ಯಕ್ಷಗಾನ ವೇಷಭೂಷಣಗಳನ್ನು ಧರಿಸಿ ಪ್ರತಿಭಟನೆ ನಡೆಸಿದರು.
ಕನಕಪುರ ರಸ್ತೆ ಅಪಾರ್ಟ್ಮೆಂಟ್ ಮೂವ್ಮೆಂಟ್ ಆಫ್ ಚೇಂಜ್ (KARAMOC) ಬ್ಯಾನರ್ ಅಡಿಯಲ್ಲಿ, 10 ಕ್ಕೂ ಹೆಚ್ಚು ಅಪಾರ್ಟ್ಮೆಂಟ್ಗಳಿಂದ ಮಕ್ಕಳು ಮತ್ತು ಹಿರಿಯ ನಾಗರಿಕರು ಸೇರಿದಂತೆ 100 ಕ್ಕೂ ಹೆಚ್ಚು ಪ್ರತಿಭಟನಾಕಾರರು ಯೋಜನೆಗೆ ವಿರೋಧ ವ್ಯಕ್ತಪಡಿಪಡಿಸಿದರು.
ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸುವ ವೇಳೆ ಮಹಾತ್ಮ ಗಾಂಧಿ ವೇಷಧಾರಿ ಗಮನ ಸೆಳೆದರು. ಇವರು ಕೂಡ ಧರಣಿಯಲ್ಲಿ ಪಾಲ್ಗೊಂಡು ಗಾಂಧಿಗಿರಿ ಕೈಗೊಂಡ ನಾಗರಿಕರಿಗೆ ಸಾಥ್ ನೀಡಿದರು.
ರಸ್ತೆಯ ಅಗಲವನ್ನು ಕುಗ್ಗಿಸದೆ ಸರಾಗ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಜತೆಗೆ ಪಾರ್ಕಿಂಗ್ ಪ್ರಸ್ತಾಪವನ್ನು ಕೈಬಿಡುವಂತೆ ಪಾಲಿಕೆ ಅಧಿಕಾರಿಗಳಿಗೆ ಆಗ್ರಹಿಸಿದರು. ಕಾರ್ ಶೋರೂಂಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಗೆ ದೊಡ್ಡ ಪಾರ್ಕಿಂಗ್ ಸ್ಥಳಗಳನ್ನು ನೀಡುವ ಸಲುವಾಗಿ ಕನಕಪುರ ರಸ್ತೆಯ ಅಗಲವನ್ನು ಕಡಿಮೆ ಮಾಡಲು ಬಿಬಿಎಂಪಿ ಮುಂದಾಗಿದೆ. ಇಲ್ಲಿ ವಾಹನಗಳ ಓಡಾಟ ತುಂಬಾ ಹೆಚ್ಚಿದ್ದು, ರಸ್ತೆಯ ಅಗಲವನ್ನು ಕುಗ್ಗಿಸಿದರೆ ಮತ್ತಷ್ಟು ಸಮಸ್ಯೆಯಾಗಲಿದೆ.
ಬಿಬಿಎಂಪಿಯ ಟ್ರಾಫಿಕ್ ಎಂಜಿನಿಯರಿಂಗ್ ಸೆಲ್ಗೆ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಿಗೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಗತ್ಯ ಇರುವಷ್ಟು ವಾಹನಗಳ ನಿಲುಗಡೆ ಪ್ರದೇಶ ಹೊಂದಿರದ ಕಾರ್ ಶೋರೂಂಗಳ ಸಹಿತ ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವವರನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದು ಕನಕಪುರದ ಚೇಂಜ್ ಮೇಕರ್ಸ್ ಮುಖ್ಯಸ್ಥ ಅಲೀಂ ಅವರು ಹೇಳಿದ್ದಾರೆ.
ಈ ರಸ್ತೆಯಲ್ಲಿ ಶೂನ್ಯ ನಿಲುಗಡೆ ಇರಬೇಕು. ವಾಹನ ನಿಲುಗಡೆಗೆ ಅವಕಾಶ ನೀಡಬಾರದು ಎಂದು ರಾಜ್ಯ ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳು ನಿಯಮ ಪಾಲಿಸುತ್ತಿಲ್ಲ. ವಾಣಿಜ್ಯ ಸಂಸ್ಥೆಗಳು ಅವರ ಗ್ರಾಹಕರ ವಾಹನಗಳ ನಿಲುಗಡೆಗೆ ಕಟ್ಟಡದ ನೆಲ ಮಹಡಿಯಲ್ಲಿ ಅಥವಾ ಬೇರೆ ಕಡೆ ವ್ಯವಸ್ಥೆ ಮಾಡಿಕೊಳ್ಳಬೇಕು. ಬಿಬಿಎಂಪಿ ಉಚಿತವಾಗಿ ವಾಹನ ನಿಲುಗಡೆ ಸೌಲಭ್ಯ ನೀಡಬಾರದು ಎಂದು ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ. ಮೊದಲೇ ವಾಹನದಟ್ಟಣೆ ಹೆಚ್ಚಿರುವ ಈ ರಸ್ತೆಯನ್ನು ಇನ್ನಷ್ಟು ಕಿರಿದು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕನಕಪುರ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬಾರದು. ವಾಹನ ಸಂಚಾರಕ್ಕೆ ಏಕರೂಪದ ಮೂರು ಪಥಗಳು ಇರಬೇಕು. ಕಾಲುದಾರಿಗಳಿಗೆ ಅವಕಾಶ ನೀಡಬೇಕು. ಪಾದಚಾರಿ ಮಾರ್ಗ ಒತ್ತುವರಿಯಾಗದಂತೆ ತಡೆಯಬೇಕು ಎಂದು ಆಗ್ರಹಿಸಿದರು.