ಅದ್ದೂರಿ- ಆಡಂಬರದಿಂದ ಮದುವೆಯ ಸಾಂಸ್ಕ್ರತಿಕ ಸ್ವರೂಪಗಳೇ ಬದಲು :ಎಂ.ಸಿ.ಲಲಿತಾ

ತುಮಕೂರು :

   ಅದ್ದೂರಿ- ಆಡಂಬರದ ವಿವಾಹಗಳ ಸುಳಿಗೆ ಸಿಲುಕಿ ಮದುವೆಯ ಸಾಂಸ್ಕ್ರತಿಕ ಸ್ವರೂಪಗಳೇ ಬದಲಾಗುತ್ತಿವೆ, ಸರಳ ವಿವಾಹಗಳು ಮೂಲೆಗುಂಪಾಗುತ್ತಿವೆ ಎಂದು ಲೇಖಕಿ, ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷರಾದ ಎಂ.ಸಿ.ಲಲಿತಾ ಆತಂಕ ವ್ಯಕ್ತಪಡಿಸಿದರು.

   ಇಲ್ಲಿನ ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರವು ಆಯೋಜಿಸಿದ್ದ ಬದಲಾದ ಕಾಲಘಟ್ಟದಲ್ಲಿ ವರದಕ್ಷಿಣೆ ಪರಿಕಲ್ಪನೆ ಕುರಿತ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ಮದುವೆಗಳಿಗೆ ತನ್ನದೇ ಆದ ವಿಶೇಷತೆಗಳಿವೆ, ಸಾಂಸ್ಕೃತಿಕ ಆಚರಣೆಗಳಿವೆ, ಆದರೆ ಇಂದು ಅದ್ದೂರಿ ಆಡಂಬರಗಳ ಒಡ್ಡೋಲಗದಲ್ಲಿ ಈ ಎಲ್ಲ ಆಚರಣೆಗಳು ಮರೆಯಾಗುತ್ತಿವೆ. ವಿವಾಹದ ಸಾಂಸ್ಕ್ರತಿಕ ಸ್ವರೂಪವೇ ಬದಲಾಗುತ್ತಿದೆ ಎಂದು ವಿಷಾದಿಸಿದರು.

    ಈಗ ವರದಕ್ಷಿಣೆ ಎಂಬ ಹೆಸರು ಕಡಿಮೆಯಾಗಿರಬಹುದು. ಆದರೆ ಮದುವೆ ಖರ್ಚು ಎಷ್ಟಾಗುತ್ತಿದೆ. ಇದಕ್ಕಾಗಿ ಹೆಣ್ಣು ಹೆತ್ತವರು ಮಾಡುತ್ತಿರುವ ಸಾಲ ಎಷ್ಟು ಎಂಬುದನ್ನು ನಾವಿಂದು ಗಂಭೀರವಾಗಿ ಅವಲೋಕಿಸಬೇಕಿದೆ. ಶಾಸ್ತ್ರಗಳೇ ಇಲ್ಲದ ವಿವಾಹಗಳು ಆಧುನಿಕತೆಯ ಭರಾಟೆಗೆ ಸಿಲುಕಿವೆ. ಮುಹೂರ್ತಕ್ಕೂ ಮೊದಲ ದಿನವೇ ಆರತಕ್ಷತೆಗಳಾಗುತ್ತಿವೆ. ಯಥೆಶ್ಚವಾಗಿ ಸಿದ್ದಪಡಿಸುವ ತರಾವರಿ ಆಹಾರವನ್ನು ತಿನ್ನಲಾಗದೇ ಎಲೆಯಲ್ಲಿ ಬಿಟ್ಟುಹೋಗುತ್ತಿರುವ ಸನ್ನಿವೇಶಗಳನ್ನು ಕಾಣುತ್ತಿದ್ದೇವೆ. ಈ ಬಗ್ಗೆ ಇಂದಿನ ಜನ ಯೋಚಿಸಬೇಕಿದೆ, ಅದ್ದೂರಿ ಆಡಂಬರಗಳಿಗೆ ಕಡಿವಾಣ ಹಾಕಬೇಕಿದೆ ಎಂದರು.

   ಲೇಖಕಿ ಬಾ.ಹ. ರಮಾಕುಮಾರಿ ಮಾತನಾಡಿ ಬಹಳಷ್ಟು ಜನ ಮಾತನಾಡುವಾಗ ವರದಕ್ಷಿಣೆ ಸಮಸ್ಯೆ ಈಗ ಇಲ್ಲ ಎನ್ನುತ್ತಾರೆ. ಆದರೆ ವಿವಾಹದ ಖರ್ಚು ಲಕ್ಷ ಲಕ್ಷಗಳನ್ನು ದಾಟಿ ಹೋಗಿರುತ್ತದೆ. ಇದಕ್ಕಾಗಿ ಸಾಲ ಮಾಡುತ್ತಿದ್ದಾರೆ. ತೀರಿಸಲಾಗದೇ ಹೆಣಗಾಡುತ್ತಾರೆ. ಇದೆಲ್ಲವನ್ನೂ ಗಮನಿಸಿದಾಗ ವರದಕ್ಷಿಣೆಯ ಸ್ವರೂಪ ಬದಲಾಗಿದೆಯೇ ಹೊರತು ವರದಕ್ಷಿಣೆ ಈ ನಮ್ಮ ಸಮಾಜದಿಂದ ದೂರ ಹೋಗಿಲ್ಲ ಎಂಸದರು.

   ವಿವಾಹಕ್ಕೆ ತಗಲುವ ಈ ಖರ್ಚುಗಳನ್ನು ಭರಿಸಲಾಗದ ಜನರೂ ಇಂದು ನಮ್ಮ ಮಧ್ಯೆ ಇದ್ದಾರೆ. ಅದ್ದೂರಿ ವಿವಾಹಗಳು ಸಾಮೂಹಿಕ ಸನ್ನಿಯಾಗಿದ್ದು ಇದರ ಹಿಂದೆ ಬಿದ್ದ ಸಾಕಷ್ಟು ಕುಟುಂಬಗಳು ನರಕಯಾತನೆಯಲ್ಲಿ ಸಿಲುಕಿವೆ. ನಮಗೆ ಬೇಕಿರುವುದು ಆಡಂಬರದ ವಿವಾಹದ ಆಚರಣೆಗಳಲ್ಲ. ಅದರಾಚೆ ಇರುವ ಬದುಕು ಮುಖ್ಯ ಎಂಬುದನ್ನು ನಾವು ಮನಗಾಣಬೇಕು. ಈ ಬಗ್ಗೆ ವಿದ್ಯಾವಂತರು ಎಚ್ಚೆತ್ತು ಈ ಸಾಮಾಜಿಕ ಸಾಮೂಹಿಕ ಸನ್ನಿಗೆ ಕಡಿವಾಣ ಹಾಕಬೇಕಾಗಿದೆ ಎಂದರು.

   ಪ್ರಾಸ್ತಾವಿಕ ನುಡಿಗಳನ್ನಾಡಿದ ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿ ೧೯೯೨ ರಿಂದ ಕಾನೂನು ವಿದ್ಯಾರ್ಥಿಗಳಿಂದ ಅಸ್ಥಿತ್ವಕ್ಕೆ ಬಂದ ಈ ಸಾಮಾಜಿಕ ಚಿಂತನೆಯ ವೇದಿಕೆ ವರದಕ್ಷಿಣೆ ವಿರೋಧಿ ಮನೋಭಾವವನ್ನು ವಿದ್ಯಾರ್ಥಿ ಹಂತದಲ್ಲಿಯೇ ಮೂಡಿಸುವ ಸಲುವಾಗಿ ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಅರಿವು ಸಪ್ತಾಹ ಅಚರಿಸಿಕೊಂಡು ಬರುತ್ತಿದೆ. ಇದರ ಜೊತೆಗೆ ಸಾಂತ್ವನ ಕೇಂದ್ರದ ಮೂಲಕ ನೊಂದ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸುತ್ತಿದೆ.ಪ್ರತಿ ತಿಂಗಳು ಈ ವೇದಿಕೆಗೆ ೧೦ ರಿಂದ ೧೫ ಕೌಟುಂಬಿಕ ಸಮಸ್ಯೆ ಪ್ರಕರಣಗಳು ದಾಖಲಾಗಿ ಇಲ್ಲಿಯೇ ಸಾಕಷ್ಟು ಪ್ರಕರಣಗಳು ಸಮಾಲೋಚನೆಯ ಮೂಲಕ ಇತ್ಯರ್ಥಗೊಳ್ಳುತ್ತಿವೆ ಎಂದು ವಿವರಿಸಿದರು.

   ಪ್ರಬಂಧ ಸ್ಪರ್ಧೆ ತೀಪುಗಾರರಾದ ಲೇಖಕಿ ಸಿ.ಎಲ್. ಸುನಂದಮ್ಮ ಮಾತನಾಡಿ ವರದಕ್ಷಿಣೆ ವ್ಯಾಖ್ಯಾನ ಹಾಗೂ ಬದಲಾದ ಪರಿಸ್ಥಿತಿಯಲ್ಲಿ ವಿವಿಧ ಲೇಖಕರ ಅಭಿಪ್ರಾಯ ಬರಹಗಳನ್ನು ಅವಲೋಕಿಸಿ ಮಾತನಾಡಿದರು.ಸ್ಪರ್ಧಾ ವಿಜೇತರ ಪರವಾಗಿ ಪ್ರಥಮ ಬಹುಮಾನ ಪಡೆದ ಶಿರಾ ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ವೈ. ನರೇಶ್ ಬಾಬು, ದ್ವಿತೀಯ ಬಹುಮಾನ ಪಡೆದ ಕನ್ನಡ ಸಹ ಶಿಕ್ಷಕ ಟಿ. ನರೇಂದ್ರಬಾಬು, ತೃತೀಯ ಬಹುಮಾನ ಪಡೆದ ತೋವಿನಕೆರೆ ಗಿರಿಜಮ್ಮ ಮಾತನಾಡಿದರು.

   ವೇದಿಕೆ ಪದಾಧಿಕಾರಿಗಳಾದ ರಾಜೇಶ್ವರಿ ಚಂದ್ರಶೇಖರ್, ಟಿ.ಆರ್. ಅನಸೂಯ, ಗೀತಾ ನಾಗೇಶ್, ಸಾಂತ್ವನ ಕೇಂದ್ರದ ಪಾರ್ವತಮ್ಮ, ಯುವರಾಣಿ, ನೇತ್ರಾವತಿ ಇತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link