ದಾಂಡೇಲಿ:
60 ವರ್ಷದ ದಿವ್ಯಾಂಗ ದಲಿತ ಮಹಿಳೆಗೆ ಲೈಂಗಿಕ ದೌರ್ಜನ್ಯವೆಸಗಿ ದರೋಡೆ ಮಾಡಿದ ಆರೋಪಿಗೆ ಪೊಲೀಸರು ಗುಂಡಿಕ್ಕಿ ಬಂಧಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಫೈರೋಜ್ ಯಾಸಿನ್ ಯರಗಟ್ಟಿ (23) ಎಂದು ಗುರುತಿಸಲಾಗಿದೆ. ಅಧಿಕಾರಿಗಳ ಮೇಲೆ ದಾಳಿ ಮಾಡಿ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವುದಾಗಿ ತಿಳಿದುಬಂದಿದೆ.
ಜೂನ್ 12ರಂದು ಮಹಿಳೆ ತನ್ನ ಸಂಬಂಧಿಕರ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆಯನ್ನು ಅಪಹರಿಸಿ, ಹಲ್ಲೆ ನಡೆಸಲಾಗಿತ್ತು. ಬಳಿಕ ಆಕೆ ದಾಂಡೇಲಿ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ, ಪೊಲೀಸರು ಸುಮಾರು 100 ಶಂಕಿತರ ಫೋಟೋಗಳನ್ನು ತೋರಿಸಿದಾಗ ಯರಗಟ್ಟಿ ಅಪರಾಧಿ ಎಂದು ಗುರುತಿಸಿದ್ದಾರೆ.
ದಾಂಡೇಲಿಯ ಬೈಲ್ಪಾರ್ ನಿವಾಸಿ ಫೈರೋಜ್ ಯರಗಟ್ಟಿ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಆತನ ವಿರುದ್ಧ ಅಕ್ರಮ ಮದ್ಯ ವ್ಯಾಪಾರ, ಗಾಂಜಾ ಮಾರಾಟ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ನಿಂದನೆ ಸೇರಿದಂತೆ ಸಾಕಷ್ಟು ಆರೋಪಗಳಿವೆ. ಆತ ಚಾಲಕನಾಗಿದ್ದು, ಮರಳು ಸಾಗಾಟಗಾರನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಈತನ ಬಂಧನಕ್ಕಾಗಿ ಡಿಎಸ್ ಪಿ ಶಿವಾನಂದ ಮದರಖಂಡಿ ನೇತೃತ್ವದಲ್ಲಿ ಪೊಲೀಸ್ ತಂಡವೊಂದನ್ನು ರಚಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ದಾಂಡೇಲಿ-ಯಲ್ಲಾಪುರ ಹೆದ್ದಾರಿಯ ಕುಳಗಿ ರಸ್ತೆಯ ಬಳಿ ಯರಗಟ್ಟಿಯನ್ನು ಪತ್ತೆ ಮಾಡಿದ್ದಾರೆ. ಕೂಡಲೇ ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಸಮೀಪದ ಅರಣ್ಯಕ್ಕೆ ಓಡಿಹೋಗಿ ಕಲ್ಲು ಮತ್ತು ಚಾಕುವಿನಿಂದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಪೊಲೀಸ್ ಅಧಿಕಾರಿಗಳಾದ ಕೃಷ್ಣಪ್ಪ ಅವರಿಗೆ ಕಲ್ಲು ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿದರೆ, ಇಮ್ರಾನ್ ಅವರ ಕೈಗೆ ಚಾಕುವಿನಿಂದ ಗಾಯವಾಗಿದೆ. ಎಸ್ಐ ಕಿರಣ್ ಅವರಿಗೂ ಚಾಕುವಿನಿಂದ ಇರಿಯಲು ಆರೋಪಿ ಯತ್ನಿಸಿದ್ದಾನೆ. ಎರಡು ಬಾರಿ ಎಚ್ಚರಿಕೆ ನೀಡಿದ ಎಸ್ಐ ಕಿರಣ್, ಕೊನೆಗೆ ಯರಗಟ್ಟಿಯ ಎಡಗಾಲಿನ ಮೊಣಕಾಲಿನ ಕೆಳಗೆ ಗುಂಡು ಹಾರಿಸಿದರು. ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಗಳನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಅಧಿಕಾರಿಗಳನ್ನು ಭೇಟಿ ಮಾಡಿದರು.