ಭೋಪಾಲ್:
ಸರ್ಕಾರಿ ಶಾಲೆಯೊಂದರಲ್ಲಿ ಇತ್ತೀಚೆಗೆ ನಡೆದ ಘಟನೆಯು ಅನೇಕರನ್ನು ಆಘಾತಕ್ಕೀಡು ಮಾಡಿದೆ. ಮಧ್ಯ ಪ್ರದೇಶದ ಭೋಪಾಲ್ನ ಮಹಾತ್ಮ ಗಾಂಧಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ, ಒಬ್ಬ ಮಹಿಳಾ ಶಿಕ್ಷಕಿ ಕುರ್ಚಿಯ ಮೇಲೆ ಕುಳಿತಿರುವುದನ್ನು ಮತ್ತು ವಿದ್ಯಾರ್ಥಿಯೊಬ್ಬ ಆಕೆಯ ಪಾದಗಳಿಗೆ ಮಸಾಜ್ ಮಾಡುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಘಟನೆಯ ದೃಶ್ಯವು ಚಿತ್ರೀಕರಣ ಗೊಳ್ಳುತ್ತಿದೆ ಎಂದು ತಿಳಿದ ಕೂಡಲೇ ಶಿಕ್ಷಕಿ ತನ್ನ ಪಾದವನ್ನು ಹಿಂತೆಗೆದುಕೊಂಡಳು. ಇಂತಹ ನಡವಳಿಕೆ ಸರಿಯಲ್ಲ ಎಂದು ಇತರ ಶಿಕ್ಷಕರು ಹೇಳಿದ್ದಾರೆ. ಇನ್ಸ್ಟಾಗ್ರಾಮ್ ವಿಡಿಯೊದಲ್ಲಿ, ಸರಿಯಾದ ಬೆಂಚುಗಳ ಕೊರತೆಯಿಂದಾಗಿ ಹಲವಾರು ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತಿರುವುದನ್ನು ತೋರಿಸಲಾಗಿದೆ. ಶಿಕ್ಷಕಿಯು ಕುರ್ಚಿಯ ಮೇಲೆ ಆರಾಮವಾಗಿ ಕುಳಿತುಕೊಂಡಿದ್ದಾಳೆ. ವಿದ್ಯಾರ್ಥಿ ತನ್ನ ಕಾಲುಗಳಿಗೆ ಮಸಾಜ್ ಮಾಡುವಾಗ ಅವಳು ಮತ್ತೊಂದು ಕುರ್ಚಿಯ ಮೇಲೆ ಕಾಲು ಇಟ್ಟಿದ್ದಾಳೆ. ಯಾರೋ ವಿಡಿಯೊ ರೆಕಾರ್ಡ್ ಮಾಡುತ್ತಿದ್ದಾರೆಂದು ಅರಿತುಕೊಂಡ ಕೂಡಲೇ ತನ್ನ ಕಾಲನ್ನು ಹಿಂದಕ್ಕೆ ತೆಗೆದುಕೊಂಡಿದ್ದಾಳೆ.
ವರದಿಯ ಪ್ರಕಾರ, ಇತರ ತರಗತಿಗಳ ಮಕ್ಕಳು ಮಧ್ಯಾಹ್ನ ಊಟದ ನಂತರ ಸದ್ದಿಲ್ಲದೆ ಓದುತ್ತಿದ್ದರು. ಆದರೆ 4ನೇ ತರಗತಿಯ ವಿದ್ಯಾರ್ಥಿಗಳು ಗದ್ದಲ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಬೆಂಚುಗಳ ಕೊರತೆಯಿದ್ದು, ನೆಲದ ಮೇಲೆ ಕುಳಿತುಕೊಳ್ಳಬೇಕಾದ ಪರಿಸ್ಥಿತಿಯಿದೆ. ಈ ಮಧ್ಯೆ, ಒಬ್ಬ ವಿದ್ಯಾರ್ಥಿ ಶಿಕ್ಷಕಿಯ ಪಾದಗಳಿಗೆ ಮಸಾಜ್ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೊ ವೈರಲ್ ಆದ ನಂತರ ತನ್ನ ಕಾಲು ಹೊಂಡಕ್ಕೆ ಸಿಲುಕಿ ನೋವುಂಟಾಗಿತ್ತು. ಹೀಗಾಗಿ ವಿದ್ಯಾರ್ಥಿ ತನಗೆ ಸಹಾಯ ಮಾಡುತ್ತಿದ್ದ ಎಂದು ಹೇಳಿದ್ದಾಳೆ.
ಆಕೆಯ ವಜಾ ಆಗ್ರಹಿಸಿ ಮತ್ತು ಪಿಂಚಣಿ ಸೇರಿದಂತೆ ಎಲ್ಲ ನಿವೃತ್ತಿ ಪ್ರಯೋಜನಗಳನ್ನು ನಿಲ್ಲಿಸಿ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಶಾಲೆಗಳಿರುವುದು ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು. ಇದು ಶಿಕ್ಷಕರನ್ನು ತೃಪ್ತಿಪಡಿಸಲು ಮತ್ತು ಖಾಸಗಿ ಸೇವಕರಾಗಿ ಸೇವೆ ಸಲ್ಲಿಸಲು ಅಲ್ಲ. ವಿದ್ಯಾರ್ಥಿಗಳು ಶಾಲಾ ಶುಲ್ಕವನ್ನು ಅಧ್ಯಯನಕ್ಕಾಗಿ ಪಾವತಿಸುತ್ತಾರೆ, ಕೆಲವು ಶಿಕ್ಷಕರಿಗೆ ಸೇವೆ ಸಲ್ಲಿಸಲು ಅಲ್ಲ ಎಂದು ಮತ್ತೊಬ್ಬ ಬಳಕೆದಾರರು ಹಂಚಿಕೊಂಡರು.
ಇದನ್ನು ಎರಡು ರೀತಿಯಲ್ಲಿ ನೋಡಬಹುದು. ವಿದ್ಯಾರ್ಥಿ ಅದನ್ನು ಸ್ವತಃ ಮಾಡಿದರೆ, ಅದು ತಪ್ಪಲ್ಲ ಸರಿ. ಆದರೆ ಶಿಕ್ಷಕರು ಹಾಗೆ ಮಾಡುವಂತೆ ಒತ್ತಾಯಿಸಿದರೆ. ಅದು ಖಂಡಿತವಾಗಿಯೂ ತಪ್ಪು ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. ನಮ್ಮ ಸ್ವಂತ ಮಕ್ಕಳನ್ನೇ ನಾವು ಈ ರೀತಿ ಮಾಡುವಂತೆ ಒತ್ತಾಯಿಸುವುದಿಲ್ಲ. ಅದರಲ್ಲಿ ಈ ಶಿಕ್ಷಕಿ ಮಾಡಿರುವುದು ಖಂಡಿತಾ ತಪ್ಪು ಎಂದು ಮತ್ತೊಬ್ಬರು ಹೇಳಿದರು. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು. ಅವಳು ಶಿಕ್ಷಕಿಯಾಗಲು ಅರ್ಹಳಲ್ಲ, ಅಧಿಕಾರದ ದುರುಪಯೋಗ ಎಂದು ಮತ್ತೊಬ್ಬರು ಹೇಳಿದರು.
ಕೈಯಲ್ಲಿ ಪುಸ್ತಕಗಳು ಮತ್ತು ಪೆನ್ನುಗಳನ್ನು ಹಿಡಿದುಕೊಂಡು ಕಲಿಯಬೇಕಾದ ಮಕ್ಕಳು ಇಂತಹ ಆಕ್ಷೇಪಾರ್ಹ ನಡವಳಿಕೆಯಲ್ಲಿ ತೊಡಗಿದ್ದರು. ಈ ವಿಷಯ ಜಿಲ್ಲಾ ಶಿಕ್ಷಣ ಅಧಿಕಾರಿ ಎನ್.ಕೆ. ಅಹಿರ್ವಾರ್ ಅವರನ್ನು ತಲುಪಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಶಿಕ್ಷಕರೊಬ್ಬರು ದೃಢಪಡಿಸಿದರು. ಶಿಕ್ಷಕಿ ಗಾಯಗೊಂಡಿರಬಹುದು ಮತ್ತು ವಿದ್ಯಾರ್ಥಿಗಳು ಅವರಿಗೆ ಸಹಾಯ ಮಾಡುತ್ತಿದ್ದರು ಎಂದು ತಮಗೆ ತಿಳಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. ಆದಾರೂ, ಈ ಘಟನೆಯ ಹಿಂದಿನ ಸತ್ಯವನ್ನು ನಿರ್ಧರಿಸಲು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.
