ಹಿಂದೂ ದೇವಾಲಯದಲ್ಲಿ ಕಿಂಗ್ ಚಾರ್ಲ್ಸ್, ರಾಣಿ ಕ್ಯಾಮಿಲ್ಲಾ ವಿಶೇಷ ಪೂಜೆ

ಲಂಡನ್: 

    ಮೂರನೇ ಕಿಂಗ್ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ  ಅವರು ಬುಧವಾರ ಲಂಡನ್‌ನಲ್ಲಿರುವ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರಕ್ಕೆ  ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. 30 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಯೂರೋಪಿನ ಮೊದಲ ಹಿಂದೂ ಶಿಲಾ ದೇವಾಲಯವಾದ  ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರಕ್ಕೆ ಅವರು ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸುತ್ತಿರುವ ಚಿತ್ರವನ್ನು ಮೂರನೇ ಕಿಂಗ್ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ಅವರ ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಅವರನ್ನು ದೇವಾಲಯದ ಭಕ್ತರು ಸ್ವಾಗತಿಸುತ್ತಿರುವುದು, ಪ್ರಾರ್ಥನೆಗಳಲ್ಲಿ ದಂಪತಿ ಭಾಗವಹಿಸಿರುವುದನ್ನು ಕಾಣಬಹುದು.

    30ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಲಂಡನ್‌ನಲ್ಲಿರುವ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರಕ್ಕೆ ಬುಧವಾರ ಮೂರನೇ ಕಿಂಗ್ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ಭೇಟಿ ನೀಡಿದರು. 1995ರಲ್ಲಿ ಉದ್ಘಾಟನೆಯಾದ ಯುರೋಪಿನ ಮೊದಲ ಸಾಂಪ್ರದಾಯಿಕ ಹಿಂದೂ ಶಿಲಾ ದೇವಾಲಯ ಇದಾಗಿದ್ದು, ಇದರ 30ನೇ ವಾರ್ಷಿಕೋತ್ಸವ ಆಚರಣೆಯಲ್ಲಿ ಕಿಂಗ್ ದಂಪತಿ ಪಾಲ್ಗೊಂಡರು. 

    ಬುಧವಾರ ಮುಂಜಾನೆ ಮೂರನೇ ಕಿಂಗ್ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ದೇವಾಲಯಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ದೇವಾಲಯದ ಆರಾಧಕರು ಮತ್ತು ಪ್ರತಿನಿಧಿಗಳನ್ನು ಭೇಟಿಯಾದರು ಎಂದು ರಾಜಮನೆತನದ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಅನೇಕರು ಇದಕ್ಕೆ ಕಾಮೆಂಟ್ ಕೂಡ ಮಾಡಿದ್ದಾರೆ. ಕ್ಯಾಮಿಲ್ಲಾ ಅವರನ್ನು ಕೆಲವು ನೆಟ್ಟಿಗರು ಸುಂದರ ರಾಣಿ ಎರಡನೇ ಎಲಿಜಬೆತ್ ಎಂದು ಕರೆದಿದ್ದಾರೆ.

    ದೇವಾಲಯಕ್ಕೆ ಆಗಮಿಸಿದ ಕಿಂಗ್ ಚಾರ್ಲ್ಸ್ ದಂಪತಿಯನ್ನು ಸಾಂಪ್ರದಾಯಿಕವಾಗಿ ಹಿಂದೂ ಸಂಸ್ಕೃತಿಯಂತೆ ಸ್ವಾಗತಿಸಲಾಯಿತು. ಮುಖ್ಯ ಅರ್ಚಕ ಸಾಧು ಯೋಗವಿವೇಕದಾಸ್ ಸ್ವಾಮಿ ನಾಡಚಾಡಿ ಅವರು ಶಾಂತಿ ಮತ್ತು ಸ್ನೇಹವನ್ನು ಸಂಕೇತಿಸುವ ಪವಿತ್ರ ದಾರ ಕಟ್ಟುವ ಮೂಲಕ ಕಿಂಗ್ ದಂಪತಿಯನ್ನು ಸ್ವಾಗತಿಸಿದರು. 76 ವರ್ಷದ ಕಿಂಗ್ ಚಾರ್ಲ್ಸ್ ದಂಪತಿ ದೇವಾಲಯದ ಮುಖ್ಯ ಸಂಕೀರ್ಣವನ್ನು ಪ್ರವೇಶಿಸುವ ಮೊದಲು ತಮ್ಮ ಪಾದರಕ್ಷೆಗಳನ್ನು ತೆಗೆದಿರಿಸಿದರು.

    ದೇವಾಲಯದ ಆವರಣದಲ್ಲಿ ಕಿಂಗ್ ದಂಪತಿಗೆ ಹೂವುಗಳು ಮತ್ತು ಮುತ್ತುಗಳ ಹಾರಗಳಿಂದ ಸ್ವಾಗತಿಸಲಾಯಿತು. ಭಗವಾನ್ ಸ್ವಾಮಿನಾರಾಯಣನ ಪ್ರತಿಮೆಯ ಮುಂದೆ ಆಗ್ನೇಯ ಲಂಡನ್‌ನ 11 ವರ್ಷದ ದೇವ್ ಪಟೇಲ್ ಹೂವಿನ ದಳಗಳನ್ನು ಅರ್ಪಿಸುತ್ತಿದ್ದಾಗ ಕಿಂಗ್ ಚಾರ್ಲ್ಸ್ ದಂಪತಿ ಅತ್ಯಂತ ಗೌರವದಿಂದ ನಿಂತು ಸಮಾರಂಭವನ್ನು ವೀಕ್ಷಿಸಿದರು. ಬಳಿಕ ಅವರು ಭಕ್ತರಿಗೆ ಶುಭಾಶಯಗಳನ್ನು ತಿಳಿಸಿದರು. ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಹಾರೈಸಿದರು.

    ಪಟೇಲ್ ಕುಟುಂಬವು ನಡೆಸಿದ ಭಗವಾನ್ ಸ್ವಾಮಿನಾರಾಯಣರ ಹದಿಹರೆಯದ ರೂಪವಾದ ಶ್ರೀ ನೀಲಕಂಠ ವರ್ಣಿ ಮಹಾರಾಜರ ಅಭಿಷೇಕ ಸಮಾರಂಭವನ್ನು ಕೂಡ ಕಿಂಗ್ ಚಾರ್ಲ್ಸ್ ದಂಪತಿ ವೀಕ್ಷಿಸಿದನು.

   ಕಿಂಗ್ ಚಾರ್ಲ್ಸ್ ದಂಪತಿಯನ್ನು ಸ್ವಾಗತಿಸಿದ ಸಾಧು ಯೋಗವಿವೇಕದಾಸ್ ಸ್ವಾಮಿ, ದೇವಾಲಯವನ್ನು ದೇವರ ಮನೆ ಎಂದು ಕರೆದು ಇದು ನಮ್ಮ ಮಹಾನ್ ರಾಷ್ಟ್ರದ ಧಾರ್ಮಿಕ, ಸಾಂಸ್ಕೃತಿಕ ಭೂದೃಶ್ಯದ ಅವಿಭಾಜ್ಯ ಅಂಗವಾಗಿದೆ. ಇದೆಲ್ಲವೂ ನಮ್ಮ ಆಧ್ಯಾತ್ಮಿಕ ನಾಯಕರಾದ ಪರಮಪೂಜ್ಯ ಮಹಾಂತ ಸ್ವಾಮಿ ಮಹಾರಾಜರ ಕರುಣೆ, ಗೌರವ, ಸಾಮರಸ್ಯ, ನಮ್ರತೆ, ಪ್ರಾಮಾಣಿಕತೆ ಮತ್ತು ಸಮಗ್ರತೆಯಂತಹ ಮೌಲ್ಯಗಳಿಂದ ಪ್ರೇರಿತವಾಗಿದೆ ಎಂದು ಹೇಳಿದರು.

   ಕಿಂಗ್ ಚಾರ್ಲ್ಸ್ ಅವರು 1996, 2007 ಮತ್ತು 2009ರಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ಅರ್ಚಕರು, ಅವರ ನಿರಂತರ ಸ್ನೇಹ ಮತ್ತು ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಭಾರತದಿಂದ ವಿಡಿಯೊ ಸಂದೇಶ ಕಳುಹಿಸಿದ ಮಹಾಂತ ಸ್ವಾಮಿ ಮಹಾರಾಜ್, ಕಿಂಗ್ ಚಾರ್ಲ್ಸ್ ದಂಪತಿಯ ಉತ್ತಮ ಆರೋಗ್ಯ ಮತ್ತು ಸಂತೋಷಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.

   ದೇವಾಲಯದ ಮುಖ್ಯ ಸಭೆ ಸಭಾಂಗಣದ ಒಳಗೆ, ಶಾಲಾ ಮಕ್ಕಳು ಅವರ ಗೌರವಾರ್ಥವಾಗಿ ‘ಶಾಂತಿ ಪಥ’ ಎಂಬ ಶೀರ್ಷಿಕೆಯ ವೈದಿಕ ಶಾಂತಿ ಪ್ರಾರ್ಥನೆಯನ್ನು ಪಠಿಸಲಾಯಿತು. ಅನಂತರ ಕಿಂಗ್ ಚಾರ್ಲ್ಸ್ ದಂಪತಿ ಯುಕೆಯ ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯ ಅಧ್ಯಕ್ಷ ಜಿತು ಪಟೇಲ್ ಅವರೊಂದಿಗೆ ದೇವಾಲಯವನ್ನು ಸುತ್ತಾಡಿದರು.ಕರಕುಶಲತೆಯಿಂದ ಕಂಗೊಳಿಸುತ್ತಿರುವ 10 ಮೀಟರ್ ಎತ್ತರದ ಕೇಂದ್ರ ಗುಮ್ಮಟವನ್ನು ಮೆಚ್ಚಿದ ಕಿಂಗ್ ಚಾರ್ಲ್ಸ್ ದಂಪತಿ ಹವೇಲಿ ಪ್ರವೇಶ ಮಂಟಪದಲ್ಲಿ ಮುಂದಿನ ವರ್ಷ ಫ್ರಾನ್ಸ್ ನಲ್ಲಿ ಉದ್ಘಾಟನೆಯಾಗಲಿರುವ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯ ಹೊಸ ಬಿಎಪಿಎಸ್ ಮಂದಿರದ ಮಾದರಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

Recent Articles

spot_img

Related Stories

Share via
Copy link