ಸೊಸೆ ಮೇಲೆ ಕಣ್ಣು ಹಾಕಿದ ಮಾವನ ಬಂಧನ …..!

ಬೆಂಗಳೂರು

     ಅತ್ತೆ-ಮಾವ ಎಂದರೆ ದೇವರಿಗೆ ಸಮ. ಅದರಲ್ಲೂ ಹೆಣ್ಮಕ್ಕಳಿಗೆ ಮಾವ ಎಂದರೆ ತಂದೆಗೆ ಸಮ, ಆದರೆ ಈ ಸುದ್ದಿ ಇದಕ್ಕೆ ವಿರುದ್ಧವಾಗಿದೆ. ಸೊಸೆಯನ್ನು ಮಗಳಂತೆ ನೋಡಬೇಕಾದ ಮಾವನೇ ಮಂಚಕ್ಕೆ ಕರೆದಿರುವ  ಘಟನೆ ನೆಲಮಂಗಲದ ಹೊರವಲಯದಲ್ಲಿ ನಡೆದಿದೆ. ನಿವೃತ್ತ ಡಿವೈಎಸ್ಪಿಯವರ ಪುತ್ರಿ ಅನಿತಾ ಎಂಬವವರು ತನ್ನ ಅತ್ತೆ ಮನೆಯಲ್ಲಿ ನೀಡುತ್ತಿದ್ದ ಕಿರುಕುಳದ ಬಗ್ಗೆ ಪೊಲೀಸ್​​​ ಠಾಣೆಯಲ್ಲಿ ದೂರು ನೀಡಿದ್ದಾರೆ.

     ಅನಿತಾ ಅವರು ಗಂಡ ಡಾ.ಗೋವರ್ಧನ್ ಮತ್ತು ಮಾವ ಪ್ರೊಫೆಸರ್ ನಾಗರಾಜು ವಿರುದ್ಧ ವರದಕ್ಷಿಣೆ ಕಿರುಕುಳ, ಅಶ್ಲೀಲ ಹೇಳಿಕೆಗಳು ಮತ್ತು ದೈಹಿಕ ದೌರ್ಜನ್ಯದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನವೆಂಬರ್ 2, 2023 ರಂದು ಅನಿತಾ ಅವರು ಗೋವರ್ಧನ್​​ ಎಂಬುವವರನ್ನು ಮದುವೆಯಾಗಿದ್ದಾರೆ. ಭಾರೀ ಅದ್ಧೂರಿಯಲ್ಲಿ ಮದುವೆ ಮಾಡಲಾಯಿತು. ಅನಿತಾ ಅವರ ತಂದೆ ಮದುವೆಗಾಗಿ ಚಿನ್ನ, ಬೆಳ್ಳಿ ಮತ್ತು ಇತರ ಖರ್ಚುಗಳಿಗಾಗಿ ಸುಮಾರು 25 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಮದುವೆಯಾದ ಕೇವಲ 15 ದಿನಗಳ ನಂತರ ಪತಿಯ ಕಿರುಕುಳ ಶುರುವಾಗಿದೆ. ಗೋವರ್ಧನ್  ಅನಿತಾ ಅವರ ತಂದೆಯ ಆಸ್ತಿ ಮತ್ತು ಬಾಡಿಗೆ ಆದಾಯದಲ್ಲಿ ಪಾಲು ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಅನಿತಾ ಆರೋಪಿಸಿದ್ದಾರೆ.

    ಪತಿ ತನ್ನ ತಂದೆಯ ಆಸ್ತಿ ಹಾಗೂ ಹಣ ತರುವಂತೆ ಕಿರುಕುಳ ನೀಡುತ್ತಿದ್ದರು. ತಂದೆಯ ಆಸ್ತಿ, ಹಣ ತಂದರೆ, ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದನ್ನು ಬಿಟ್ಟು ಸ್ವಂತ ನರ್ಸಿಂಗ್ ಹೋಂ ಪ್ರಾರಂಭಿಸಬಹುದು ಎಂಬುದು ಗೋವರ್ಧನ್ ಅವರ ಆಸೆಯಾಗಿತ್ತು. ಇದರ ಜತೆಗೆ ಮಾವನ ಲೈಂಗಿಕ ಬೇಡಿಕೆಯ ಬಗ್ಗೆಯೂ ಅನಿತಾ ಹೇಳಿದ್ದಾರೆ. 

    ಅನಿತಾ ಅವರು ಮಾವನ ಬಗ್ಗೆಯೂ ಗಂಭೀರ ಆರೋಪವನ್ನು ಮಾಡಿದ್ದಾರೆ. ಎಫ್‌ಐಆರ್ ಪ್ರಕಾರ , ಮಾವ ನಾಗರಾಜು ಅವರು ಅಶ್ಲೀಲವಾಗಿ ಮಾತನಾಡುತ್ತಿದ್ದರು ಎಂದು ಹೇಳಿದ್ದಾರೆ. ಇದು ಮಾತ್ರವಲ್ಲದೆ ದೈಹಿಕವಾಗಿ ಕಿರುಕುಳ ನೀಡಿದ್ದಾರೆ. “ನಿಮ್ಮ ಮದುವೆಯಾಗಿ ಕೆಲವು ತಿಂಗಳು ಕಳೆದಿವೆ. ಯಾಕೆ ಇನ್ನು ಮಕ್ಕಳು ಮಾಡಿಕೊಂಡಿಲ್ಲ, ಸರಿಯಾಗಿ ಸಂಸಾರ ಮಾಡುತ್ತಿಲ್ಲವೇ, ಇಲ್ಲದಿದ್ದರೆ, ನಾನು ಬರುತ್ತೇನೆ. ಮಾಡರ್ನ್ ಹುಡುಗಿಯಂತೆ ಅರ್ಧ ಬಟ್ಟೆ ಧರಿಸಿ ನನ್ನ ಮುಂದೆ ಬಾ” ಎಂದು ಅಸಭ್ಯವಾಗಿ ಮಾತನಾಡಿದ್ದಾರೆ.

    ಈ ಬಗ್ಗೆ ಗಂಡ ಹಾಗೂ ಅತ್ತೆ ಬಳಿ ಹೇಳಿದ್ರೆ, ಇದು ಮನೆಯ ವಿಷಯ, ನೀನೇ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಗಂಡನ ಮನೆಯವರ ಆರ್ಥಿಕ ಮತ್ತು ದೈಹಿಕ ಕಿರುಕುಳದಿಂದ ಬೇಸತ್ತ ಅನಿತಾ ನೆಲಮಂಗಲ ಪೊಲೀಸ್​​ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೀಗ ಪೊಲೀಸರು ಪತಿ, ಮಾವ ಮತ್ತು ಅತ್ತೆಯ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. 

Recent Articles

spot_img

Related Stories

Share via
Copy link