ಬೆಂಗಳೂರು
ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ವಿಚಾರ ಚರ್ಚೆ ಬಿಗಡಾಯಿಸುತ್ತಿರುವಂತೆ, ಡಿಸಿಎಂ ಡಿಕೆ ಶಿವಕುಮಾರ್ ಅವರ ಮನೆಗೆ ನಾಗಾ ಸಾಧುಗಳು ಭೇಟಿ ನೀಡಿದ್ದಾರೆ. ಡಿಕೆಶಿಯವರನ್ನು ನಾಗಾ ಸಾಧುಗಳು ಆಶೀರ್ವಾದ ಮಾಡಿದ್ದು, ಅವರ ಜೊತೆಗೆ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ನಿವಾಸದಲ್ಲಿ ರಾಜಕೀಯ ಚಟುವಟಿಗಳು ಗರಿಗೆದರಿದೆ. ಇದರ ನಡುವೆಯೇ ಡಿಕೆ ಶಿವಕುಮಾರ್ ಮನೆಗೆ ಹೋದ ನಾಗಾ ಸಾಧುಗಳು, ಡಿಕೆಶಿ ತಲೆ ಮೇಲೆ ಕೈಯಿಟ್ಟು ಆಶೀರ್ವಾದಿಸಿದ್ದಾರೆ. ʻಪವರ್ ಫೈಟ್ʼ ನಡುವೆ ಕಾಶಿಯಿಂದ ಬಂದ ನಾಗ ಸಾಧುಗಳ ಆಶೀರ್ವಾದ ಡಿಸಿಎಂ ಡಿಕೆಶಿ ಅವರಿಗೆ ದೊರೆತಿದೆ. ಮೀಡಿಯಾಗಳಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಾಧುಗಳು, ಶಿವಕುಮಾರ್ ಸಿಎಂ ಆಗಲೆಂದು ಆಶೀರ್ವಾದ ಮಾಡಿದ್ದೇವೆ. ಅವರು ಸಿಎಂ ಆಗ್ತಾರೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಹಲವು ಸಚಿವರು, ಶಾಸಕರು ಡಿಕೆ ಶಿವಕುಮಾರ್ ಅವರ ಭೇಟಿಯಾಗುತ್ತಲೇ ಇದ್ದಾರೆ. ಡಿಕೆಶಿ ಪರ ಇರುವ ಮತ್ತೊಂದು ಶಾಸಕರ ತಂಡ ದೆಹಲಿ ತೆರಳಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಡಿಕೆ ಶಿವಕುಮಾರ್ ಪರ ಲಾಬಿ ನಡೆಸಲು ಮಾಗಡಿ ಬಾಲಕೃಷ್ಣ ನೇತೃತ್ವದಲ್ಲಿ ಐವರು ಶಾಸಕರು ದೆಹಲಿಗೆ ತೆರಳಿದ್ದಾರೆ. ಕದಲೂರು ಉದಯ್ ಗೌಡ, ಶರತ್ ಬಚ್ಚೇಗೌಡ, ನಯನ ಮೋಟಮ್ಮ, ಇಕ್ಬಾಲ್ ಹುಸೇನ್ ಅವರ ತಂಡ ತಡರಾತ್ರಿ ದೆಹಲಿಗೆ ತೆರಳಿದೆ ಎಂದು ತಿಳಿದು ಬಂದಿದೆ.
ಕುರ್ಚಿ ಕಾದಾಟದ ನಡುವೆಯೇ ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಹಮ್ಮಿಕೊಂಡಿದ್ದ ಒಂದೇ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿದ್ದಾರೆ.ಮತ್ತೊಂದೆಡೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸಿಎಂ ಸ್ಥಾನದ ಚೆಂಡನ್ನು ರಾಹುಲ್ ಗಾಂಧಿ ಅವರ ಅಂಗಳಕ್ಕೆ ಹಾಕಿದ್ದಾರೆ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸದ್ಯಕ್ಕೆ ನನ್ನ ಹತ್ತಿರ ಹೇಳೋಕೆ ಏನೂ ಇಲ್ಲ ಎಂದಿದ್ದಾರೆ. ಯಾವ ವಿಚಾರದಲ್ಲೂ ನನಗೆ ಹೇಳೋಕೆ ಈಗ ಏನೂ ಇಲ್ಲ. ಸದ್ಯದ ಬೆಳವಣಿಗೆ ಬಗ್ಗೆ ನಾನು ಏನೂ ಹೇಳಲ್ಲ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಖರ್ಗೆ ಹೇಳಿದರು.
ಮೂಲಗಳ ಪ್ರಕಾರ, ಪ್ರಸ್ತುತ ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ನ. 26ರಂದು ಹಿಂತಿರುಗಲಿದ್ದು, ಅನಂತರ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ದೆಹಲಿಗೆ ಬುಲಾವ್ ನೀಡಿ ಈ ವಿಚಾರದ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.








