ಪಣಜಿ
ಗೋವಾದ ನೈಟ್ಕ್ಲಬ್ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 25 ಜನರು ಸಾವಿಗೆ ಕಾರಣರಾದ, ಅದರ ಮಾಲೀಕರಾದ ಇಬ್ಬರೂ ಸಹೋದರರು ಥೈಲ್ಯಾಂಡ್ನ ಫುಕೆಟ್ಗೆ ಪರಾರಿಯಾಗಿದ್ದಾರೆ. ನೈಟ್ಕ್ಲಬ್ನಲ್ಲಿ ಸಂಭವಿಸಿದ ಭಾರೀ ಬೆಂಕಿಯ ಕೆಲವೇ ಗಂಟೆಗಳ ನಂತರ ಇಬ್ಬರೂ ಪರಾರಿಯಾಗಿದ್ದಾರೆ. ನೈಟ್ಕ್ಲಬ್ ಮಾಲೀಕರಾದ ಸೌರಭ್ ಮತ್ತು ಗೌರವ್ ಲುತ್ರಾಗಾಗಿ ಅಂತಾರಾಷ್ಟ್ರೀಯ ಹುಡುಕಾಟವನ್ನು ಪ್ರಾರಂಭಿಸಿದ್ದೇವೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ. ಬೆಂಕಿ ದುರಂತದ ನಂತರ ಆ ಸಹೋದರರ ನಿವಾಸಗಳ ಮೇಲೆ ದಾಳಿ ಮಾಡಲು ದೆಹಲಿಗೆ ತಂಡವನ್ನು ಕಳುಹಿಸಲಾಗಿದೆ.
“ಸೌರಭ್ ಮತ್ತು ಗೌರವ್ ಲುತ್ರಾ ಇಬ್ಬರನ್ನೂ ಆದಷ್ಟು ಬೇಗ ಬಂಧಿಸಲು ಗೋವಾ ಪೊಲೀಸರು ಸಿಬಿಐನ ಇಂಟರ್ಪೋಲ್ ವಿಭಾಗದೊಂದಿಗೆ ಸಮನ್ವಯ ಸಾಧಿಸಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಣಜಿಯಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ನೈಟ್ಕ್ಲಬ್ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ 25 ಜನರು ಸಾವನ್ನಪ್ಪಿದ್ದರು. ಅವರ ವಿರುದ್ಧ ಎಫ್ಐಆರ್ ದಾಖಲಿಸಿದ ನಂತರ, ಗೋವಾ ಪೊಲೀಸರು ಅವರ ನಿವಾಸದಲ್ಲಿ ನೋಟಿಸ್ ಹಾಕಿದ್ದರು. ಡಿಸೆಂಬರ್ 7 ರಂದು ಗೋವಾ ಪೊಲೀಸರ ಕೋರಿಕೆಯ ಮೇರೆಗೆ ಇಬ್ಬರೂ ಮಾಲೀಕರು ದೇಶವನ್ನು ತೊರೆಯದಂತೆ ತಡೆಯಲು ಲುಕ್ ಔಟ್ ಸುತ್ತೋಲೆ (LOC) ಹೊರಡಿಸಲಾಗಿತ್ತು. ಆದರೆ, ಅವರು ಅಷ್ಟರಲ್ಲೇ ದೇಶ ಬಿಟ್ಟು ಪರಾರಿಯಾಗಿದ್ದರು.
ಆರೋಪಿ ಗೌರವ್ ಮತ್ತು ಸೌರಭ್ ಲೂತ್ರಾ ಅವರ ವಿಳಾಸಗಳ ಮೇಲೆ ದಾಳಿ ನಡೆಸಲು ಗೋವಾ ಪೊಲೀಸರು ತಕ್ಷಣ ದೆಹಲಿಗೆ ತಂಡವನ್ನು ಕಳುಹಿಸಿದ್ದಾರೆ. ಈಗಾಗಲೇ 25 ಮಂದಿ ಮೃತರ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.








