
ಬೆಂಗಳೂರು : ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಕಾರಿನಲ್ಲಿ ಹಾವು ಸೇರಿಕೊಂಡು ಕೆಲ ಹೊತ್ತು ಭಾನಗಡಿ ಸೃಷ್ಟಿಸಿತು.
ವಿಧಾನಸೌಧದ ಕೆಂಗೇಲ್ ಗೇಟ್ ಮುಂಭಾಗ ನಿಂತಿದ್ದ ಕೆ.ಎ-02, ಜಿ.ಎ-5001 ಕಾರಿನಲ್ಲಿ ಹಾವು ಸೇರಿಕೊಂಡಿತು. ರಸ್ತೆಯಲ್ಲಿ ಹರಿದಾಡುತ್ತಿದ್ದ ಹಾವು ಎ.ಎಸ್ ಪೊನ್ನಣ್ಣ ಅವರ ಕಾರು ಹತ್ತಿದ್ದನ್ನು ಅಲ್ಲಿ ನಿಂತಿದ್ದ ಮೂರ್ನಾಲ್ಕು ಮಂದಿ ಪೊಲೀಸರು ನೋಡಿದರು. ತಕ್ಷಣವೇ ಕಾರಿನ ಚಾಲಕನಿಗೆ ಮಾಹಿತಿ ನೀಡಿದರು. ಚಾಲಕ ವಾಹನದ ಬಾನೆಟ್ ತೆಗೆದು ಹಾವು ಹೊರಹೋಗುವಂತೆ ಮಾಡಲು ಹರಸಾಹಸ ಪಟ್ಟರು.
ಆದರೆ ಯಾರ ಕಣ್ಣಿಗೂ ಹಾವು ಕಾಣಿಸಿಕೊಳ್ಳಲಿಲ್ಲ. ಕೆಲವರು ಕಾರನ್ನು ಅಲುಗಾಡಿಸಿದರು. ಸ್ವಲ್ಪ ಹೊತ್ತಿನ ನಂತರ ಹಾವು ವಿಧಾನಸೌಧದ ಪಾರ್ಕ್ ಒಳಗೆ ಸರಿಯಿತು. ಶಾಸಕ ಪೊನ್ನಣ್ಣ ಅವರು ಮತ್ತೊಂದು ಕಾರಿನಲ್ಲಿ ತೆರಳಿದರು. ಹೀಗೆ ಸ್ವಲ್ಪ ಕಾಲ ಅಲ್ಲಿದ್ದವರು ಉರಗತಜ್ಞರಂತೆ ಸಲಹೆ ನೀಡುತ್ತಿದ್ದದ್ದು ಕಂಡು ಬಂತು.








