ಶಾಲೆಗಳಲ್ಲಿ ಎನ್.ಎಸ್.ಎಸ್ ಕಡ್ಡಾಯವಾಗಬೇಕಿದೆ :ಡಾ.ಜಿ. ಪರಮೇಶ್ವರ್

ಬೆಂಗಳೂರು:

              ಎಲ್ಲ ವಿದ್ಯಾರ್ಥಿಗಳು ಎನ್‍ಎಸ್‍ಎಸ್‍ನಲ್ಲಿ ತೊಡಗಿಕೊಳ್ಳಬೇಕೆಂಬ ಉದ್ದೇಶದಿಂದ ಶಾಲೆಗಳಲ್ಲಿ ಎನ್‍ಎಸ್‍ಎಸ್ ಅನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಯುವಜನ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ್ ಇಂದಿಲ್ಲಿ ಹೇಳಿದ್ದಾರೆ.

               ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಷ್ಟ್ರೀಯ ಸೇವಾ ಯೋಜನಾ ಕೋಶ ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಎನ್‍ಎಸ್‍ಎಸ್‍ಗೆ ಹೆಚ್ಚಾಗಿ ಬಡ ಮತ್ತು ಮಧ್ಯಮದ ವರ್ಗದ ವಿದ್ಯಾರ್ಥಿಗಳೇ ಸೇರುತ್ತಾರೆ. ಅನುಕೂಲಸ್ಥ ವಿದ್ಯಾರ್ಥಿಗಳು ಇದರಿಂದ ದೂರು ಉಳಿಯುತ್ತಿದ್ದಾರೆ. ಇವರು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಿದಾಗ ಸಂಸ್ಕಾರ, ಸಂಸ್ಕೃತಿ ನಡವಳಿಕೆಯ ಜ್ಞಾನವಿರಬೇಕು. ಹೀಗಾಗಿ ಎನ್‍ಎಸ್‍ಎಸ್ ಕಡ್ಡಾಯಗೊಳಿಸಿದರೆ ಎಲ್ಲರೂ ಪಾಲ್ಗೊಳ್ಳುವುದು ಕಡ್ಡಾಯವಾಗಲಿದೆ. ಹಿಂದೆ ಎನ್‍ಸಿಸಿ ಕಡ್ಡಾಯವಿತ್ತು. ಅದೇ ಮಾದರಿಯಲ್ಲಿ ಇದನ್ನೂ ಕಡ್ಡಾಯಗೊಳಿಸಿದರೆ ಉತ್ತಮ ಎಂದು ಅಭಿಪ್ರಾಯಪಟ್ಟರು.

               ಎನ್‍ಎಸ್‍ಎಸ್‍ನನ್ನು ಸಂಪೂರ್ಣ ಬದಲಿಸುವ ಅಗತ್ಯವಿದೆ. ಸಭೆಯಲ್ಲಿ ಯುವಕರಿಗೆ ಅನುಕೂಲವಾಗುವ ರೀತಿ ಕ್ರಿಯಾತ್ಮಕ ಸಲಹೆ ಬಂದಿದೆ. ಕಾನೂನು, ಸಂಸ್ಕೃತಿ, ಭವಿಷ್ಯ, ಕೌಶಲ್ಯಾಭಿವೃದ್ಧಿ, ಉದ್ಯೋಗದ ಬಗ್ಗೆ ಎನ್‍ಎಸ್‍ಎಸ್ ನಲ್ಲೇ ಅರಿವು ಮೂಡಿಸುವ ಬಗ್ಗೆ ಸಲಹೆ ಬಂದಿದೆ. ಎನ್‍ಎಸ್‍ಎಸ್‍ನನ್ನು ಬಲಿಷ್ಠಗೊಳಿಸಲು ಸಮಿತಿ ರಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

               ಕೊಡಗಿನ ಜನರ ನೆರವಿಗೆ ಮಂಗಳೂರು ಸೇರಿದಂತೆ ಹತ್ತಿರದ ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಧಾವಿಸಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಹಳೇ ವಿದ್ಯಾರ್ಥಿಗಳು ಕೂಡ ವಿವಿಧ ಭಾಗದಿಂದ ತೆರಳಿದ್ದಾರೆ. ಎಲ್ಲ ಕಾಲೇಜು ವಿದ್ಯಾರ್ಥಿಗಳ ಭಾಗವಹಿಸುವಿಕೆ ಬಗ್ಗೆ ವಿಶ್ವವಿದ್ಯಾಲಯ ಕುಲಪತಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಸಭೆಯಲ್ಲಿ ಅಪರ ಮುಖ್ಯಕಾರ್ಯದರ್ಶಿ ಡಾ.ರಜನೀಶ್ ಗೋಯೆಲ್, ರಾಜ್ಯ ಎನ್‍ಎಸ್‍ಎಸ್ ಅಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಇದ್ದರು.

Recent Articles

spot_img

Related Stories

Share via
Copy link