ಹುಳಿಯಾರು:
ಕೊಡಗು ನೆರೆ ಸಂತ್ರಸ್ಥರಿಗೆ ನೆರವಾಗುವ ನಿಟ್ಟಿನಲ್ಲಿ ಹುಳಿಯಾರಿನ ಜನತೆ ಒಂದು ಲಾರಿ ಲೋಡ್ ಪರಿಹಾರ ಸಾಮಗ್ರಿಗಳನ್ನು ಕಳುಹಸಿಕೊಟ್ಟಿರುವುದಕ್ಕೆ ಅಲ್ಲಿನ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಹುಳಿಯಾರು ಜನತೆಗೆ ಅಭಿನಂದಿಸಿದ್ದಾರೆ.
ಪರಿಹಾರ ಸಾಮಗ್ರಿ ಹೊತ್ತು ಬಂದ ಲಾರಿಯ ಬಳಿಗೆ ಶಾಸಕರು ಆಗಮಿಸಿದರಲ್ಲದೆ ಕೊಡಗು ಛಿದ್ರವಾಗಿದೆ, ಮಳೆಯ ಆರ್ಭಟಕ್ಕೆ ಇಲ್ಲಿನ ಜನ ತತ್ತರಿಸಿದ್ದಾರೆ. ರಾಜ್ಯದ ಜನ ಇವರ ನೆರವಿಗೆ ಧಾವಿಸುತ್ತಿರುವ ಪರಿ ನಿಜಕ್ಕೂ ಬೆರಗು ಮೂಡಿಸುತ್ತಿದೆ. ಕಣ್ಣುಮುಚ್ಚಿ ಬಿಡುವುದರೊಳಗೆ ಒಂದೊಂದು ಲೋಡ್ ಸಾಮಗ್ರಿಗಳು ಬರುತ್ತಿವೆ. ಇವುಗಳನ್ನು ಅರ್ಹರಿಗೆ ತಲುಪಿಸುವುದು ಸವಾಲಾಗಿದೆ ಎಂದರು.
ಹುಳಿಯಾರಿನಂತಹ ಹೋಬಳಿ ಕೇಂದ್ರದಿಂದ ಬರೋಬ್ಬರಿ ಒಂದು ಲೋಡ್ ಪರಿಹಾರ ಸಾಮಗ್ರಿ ಬಂದಿರುವುದು ಅಲ್ಲಿನ ಜನರ ಹೃದಯ ವೈಶಾಲ್ಯತೆಗೆ ಹಿಡಿದ ಕನ್ನಡಿಯಾಗಿದೆ. ಹುಳಿಯಾರಿನ ಸಹೃದಯಿಗಳಿಗೆ ಕೊಡಗು ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಅಲ್ಲದೆ ಜನರು ಕೊಟ್ಟ ಸಾಮಗ್ರಿಗಳನ್ನು ಅರ್ಹರಿಗೆ ತಲುಪಿಸುವ ಛಲ ಹಾಗೂ ಹುಮ್ಮಸ್ಸಿನಿಂದ ಬಂದಿರುವ ಯುವ ಪಡೆಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.
