ದಾವಣಗೆರೆ:
ನೀರಿನ ಮೇಲಿನ ಗುಳ್ಳೆಯಂತಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಲೂಟಿ ಮಾಡುವುದೇ ಪ್ರಮುಖ ಗುರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಬ್ ಇನ್ಸಪೆಕ್ಟರ್, ತಹಸೀಲ್ದಾರ್, ಕಂದಾಯ ನಿರೀಕ್ಷಕ ಸೇರಿದಂತೆ ವಿವಿಧ ಹುದ್ದೆಗಳಿಗೆ ರೇಟ್ ಫೀಕ್ಸ್ ಮಾಡುವ ಮೂಲಕ ಕೋಟ್ಯಾಂತರ ರೂಪಾಯಿಯನ್ನು ಸರ್ಕಾರ ಲೂಟಿ ಮಾಡುತ್ತಿದೆ. ಇದಕ್ಕೆ ಈ ಸರ್ಕಾರದ ಶತ ದಿನಗಳ ಸಂಭ್ರಮಾಚರಣೆಯಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರನ್ನು ಕಾಣಲು ಹೊದದ್ದೇ ಸಾಕ್ಷಿಯಾಗಿದೆ ಎಂದು ದೂರಿದರು.
ಜನರಿಗೆ ವಿಶ್ವಾಸವಿಲ್ಲ:
ರಾಜ್ಯದ ಅಭಿವೃದ್ಧಿ ಮರೀಚಿಕೆಯಾಗಿದ್ದು, ಸಮ್ಮಿಶ್ರ ಸರ್ಕಾರದ ಬಗ್ಗೆ ಜನರಿಗೆ ಎಳ್ಳಷ್ಟೂ ವಿಶ್ವಾಸ ಇಲ್ಲವಾಗಿದೆ. ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಪರಸ್ಪರ ಮುಖ ನೋಡುವುದಿಲ್ಲ. ಹೀಗಾಗಿ ಇವರಿಬ್ಬರ ಮಧ್ಯೆ ಸರಿ ಇಲ್ಲದಿರುವುದು ಸ್ಪಷ್ಟವಾಗುತ್ತದೆ. ಜೆಡಿಎಸ್ ಪಕ್ಷವಂತೂ 100 ದಿನದ ಸಾಧನೆಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಸಾಧನೆಯೆಂಬಂತೆ ಬಿಂಬಿಸಿದ್ದು, ಕಾಂಗ್ರೆಸ್ಸಿನ ಪಾಲು ಇಲ್ಲವೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಹೆಚ್ಚುದಿನ ಭವಿಷ್ಯವಿಲ್ಲ:
100 ದಿನಗಳ ಆಳ್ವಿಕೆಯಲ್ಲಿ ಕುಮಾರಸ್ವಾಮಿ 50 ದಿನಗಳ ಕಾಲ ಮಠ, ಮಂದಿರ, ಮಸೀದಿ, ದರ್ಗಾಗೆ ಹೋಗುವುರಲ್ಲೇ ಕಾಲಹರಣ ಮಾಡಿದ್ದಾರೆ. ತಾನು ಜನರ ಆಶೀರ್ವಾದದಿಂದ ಅಲ್ಲ, ದೇವರ ದಯೆಯಿಂದ ಮುಖ್ಯಮಂತ್ರಿಯಾಗಿದ್ದೇನೆಂದು ಹೇಳುತ್ತಿದ್ದಾರೆ. ಮತ್ತೊಂದು ಕಡೆ ತಾವು ರಾಜಕೀಯದಿಂದಲೇ ನಿವೃತ್ತಿ ಹೊಂದುವುದಾಗಿ ಹೇಳಿದ್ದ ಸಿದ್ದರಾಮಯ್ಯನವರು ಜನಾಶೀರ್ವಾದದಿಂದ ಮತ್ತೊಮ್ಮೆ ಸಿಎಂ ಆಗುತ್ತೇನೆಂಬ ಹೇಳಿಕೆ ನೀಡುತ್ತಿರುವುದೇ ಸಮ್ಮಿಶ್ರ ಸರ್ಕಾರಕ್ಕೆ ಹೆಚ್ಚು ದಿನ ಭವಿಷ್ಯವಿಲ್ಲ ಎಂಬುದಕ್ಕೆ ಪುಷ್ಟೀಕರಣ ನೀಡಲಿದೆ ಎಂದು ಹೇದರು.
ತೀವ್ರ ಅಸಮಾಧಾನ:
ಕಾಂಗ್ರೆಸ್-ಜೆಡಿಎಸ್ ಪಕ್ಷಗಳಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದ್ದು, ಸಚಿವ ಸಂಪುಟ ವಿಸ್ತರಣೆ ನಂತರ ಇದು ಮತ್ತಷ್ಟು ತೀವ್ರಗೊಳ್ಳಲಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಮತ್ತೊಮ್ಮೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪರಂ, ಡಿಕೆಶಿ ಜೆಡಿಎಸ್ ವಕ್ತಾರರು:
ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಯಾವುದೇ ಸ್ಥಾನಮಾನ ನೀಡಿರಲಿಲ್ಲ. ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಡಿ.ಕೆ.ಶಿವಕುಮಾರಗೆ ಸಚಿವ ಸ್ಥಾನ ನೀಡಿರಲಿಲ್ಲ. ಆದರೆ, ದೇವೇಗೌಡರ ಆಶೀರ್ವಾದ, ಕುಮಾರಸ್ವಾಮಿ ಕೃಪೆಯಿಂದ ಇಬ್ಬರಿಗೂ ಸ್ಥಾನಮಾನ ಸಿಕ್ಕಿರುವ ಕಾರಣ ಅವರ ಋಣ ತೀರಿಸಲು ಜೆಡಿಎಸ್ ವಕ್ತಾರರಂತೆ ಹೇಳಿಕೆ ನೀಡುತ್ತಿದ್ದಾರೆ. ಹೊರಗೆ ಜೆಡಿಎಸ್ ಪರ ಬ್ಯಾಟಿಂಗ್ ಮಾಡುತ್ತಿದ್ದರು. ಇವರಿಬ್ಬರು ಒಳೊಳಗೆ ಜೆಡಿಎಸ್ ವಿರುದ್ಧ ಇದ್ದಾರೆಂದು ಟೀಕಿಸಿದರು.
ಆಗದ ಮುಸ್ಲಿಮರ ಅಭಿವೃದ್ಧಿ:
ಓಟು ಬ್ಯಾಂಕ್ ರಾಜಕಾರಣದಿಂದ ಕಾಂಗ್ರೆಸ್ಸಿನವರು ದೇಶ ಹಾಳು ಮಾಡಿದ್ದಾರೆ. ಅಲ್ಪಸಂಖ್ಯಾತರು ಇತ್ತೀಚೆಗೆ ಬಿಜೆಪಿ ಪರವಾಗಿದ್ದು. ಹೇಗಾದರೂ ಆ ಎಲ್ಲರನ್ನೂ ಬಿಜೆಪಿ ವಿರುದ್ಧ ಎತ್ತಿ ಕಟ್ಟಬೇಕೆಂಬ ಪಿತೂರಿಯನ್ನು ಕಾಂಗ್ರೆಸ್ ಮಾಡುತ್ತಿದೆ. ಸಾಚಾರ್ ಸಮಿತಿ ವರದಿ ಹೇಳಿರುವಂತೆ ಇನ್ನೂ ಮುಸ್ಲಿಮರ ಉದ್ಧಾರವಾಗಿಲ್ಲ. ಇದಕ್ಕೆ ಕಾಂಗ್ರೆಸ್ಸಿನ ಓಟು ಬ್ಯಾಂಕ್ ಗಿಮಿಕ್ಕೇ ಕಾರಣವಾಗಿದೆ. ಇದನ್ನು ಅಲ್ಪಸಂಖ್ಯಾತರು ಅರಿಯಬೇಕು ಎಂದರು.
ಋಣಮುಕ್ತ ಪ್ರತಿ ನೀಡಿ:
ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ಋಣಮುಕ್ತರನ್ನಾಗಿ ಮಾಡುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಮೊದಲು ಋಣಮುಕ್ತ ಕಾಯ್ದೆಯ ಪ್ರತಿಯನ್ನು ಬಿಡುಗಡೆ ಮಾಡಲಿ. ಮುಖ್ಯಮಂತ್ರಿಯಾಗಿ 24 ಗಂಟೆಯಲ್ಲೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದ ಕುಮಾರಸ್ವಾಮಿ 100 ದಿನ ಕಳೆದರೂ ನುಡಿದಂತೆ ನಡೆದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಜನಾದೇಶ ತಿರಸ್ಕರಿಸಿ, ಅಪವಿತ್ರ ಮೈತ್ರಿ ಮಾಡಿಕೊಂಡ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವು 3 ತಿಂಗಳಿನಿಂದಲೂ ಜನ ಮೆಚ್ಚುವಂಥಹ ಆಡಳಿತವನ್ನು ನೀಡುತ್ತಿಲ್ಲ. ಸಮ್ಮಿಶ್ರ ಸರ್ಕಾರ ಬಂದಾಗಿನಿಂದಲೂ ಸಿಎಂ ಕುಮಾರಸ್ವಾಮಿ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಸಹಕಾರಿ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿರುವ ರೈತರ 53 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಮೊದಲು ಹೇಳಿದ್ದರು. ಆದರೆ, ಬಜೆಟ್ನಲ್ಲಿ 6500 ಕೋಟಿ ಮಾತ್ರ ಸಾಲ ಮನ್ನಾಕ್ಕೆ ಮೀಸಲಿಟ್ಟು, ಈಗ 9500 ಕೋಟಿ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೂ, ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್ಗಳಿಂದ ನೋಟೀಸ್ ಬರುತ್ತಿವೆ. ರೈತರ ಆತ್ಮಹತ್ಯೆಯೂ ನಿಂತಿಲ್ಲ. ಸಾಲ ಮನ್ನಾ ವಿಚಾರದಲ್ಲಿ ಗೊಂದಲ ಮುಂದುವರಿಯುತ್ತಲೇ ಇವೆ. ಖಾಸಗಿ ಸಾಲ ಮನ್ನಾ ಮಾಡಲು ಸುಗ್ರೀವಾ ತರಲು ರಾಷ್ಟ್ರಪತಿ ಬಳಿ ಸಿಎಂ ಕುಮಾರಸ್ವಾಮಿ ಹೋಗುತ್ತಾರೆ. ಹೀಗೆ ರಾಷ್ಟ್ರಪತಿ ಬಳಿ ಹೋಗುವುದಕ್ಕೆ ಸಂವಿಧಾನದಲ್ಲೂ ಅವಕಾಶವಿಲ್ಲ ಎಂದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎ.ರವೀಂದ್ರನಾಥ, ವಿಧಾನಪರಿಷತ್ನ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಬಿಜೆಪಿ ಮುಖಂಡರುಗಳಾದ ರಾಜನಹಳ್ಳಿ ಶಿವಕುಮಾರ್, ಬಿ.ರಮೇಶ ನಾಯ್ಕ, ಕೆ.ಹೆಮಂತಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
