ದಾವಣಗೆರೆ:
ಟಿವಿ, ಸಿನಿಮಾ ಹಾವಳಿಯಿಂದ ಪ್ರಸ್ತುತ ದಿನಗಳಲ್ಲಿ ರಂಗಭೂಮಿಯ ಬಗ್ಗೆ ಜನರಲ್ಲಿ ಆಸಕ್ತಿ ಕ್ಷೀಣಿಸುತ್ತಿದೆ ಎಂದು ಹಿರಿಯ ರಂಗಕರ್ಮಿ ಬಾ.ಮ.ಬಸವರಾಜಯ್ಯ ವಿಷಾಧ ವ್ಯಕ್ತಪಡಿಸಿದರು.
ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಮಂಗಳವಾರ ಸಂಜೆ ಆರಂಭಗೊಂಡ ಶಿವಮೊಗ್ಗ ರಂಗಾಯಣದ ಮೂರು ದಿನಗಳ ರಂಗೇತೇರು ಪ್ರದರ್ಶನವನ್ನು ಡೋಲು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಮಾತನಾಡಿದರು.
ಶಿಕ್ಷಣದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಪರಿಚಯ ಮಾಡಕೊಡದಿರುವುದು ಸಹ ರಂಗಭೂಮಿಯ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗಲು ಕಾರಣವಾಗಿದೆ. ಹೀಗಾಗಿ ಶಾಲಾ-ಕಾಲೇಜು ಪಠ್ಯಕ್ರಮದಲ್ಲಿ ರಂಗಭೂಮಿ ಕುರಿತು ವಿಷಯ ಅಳವಡಿಸುವ ಕೆಲಸವನ್ನು ಸರ್ಕಾರ ಮಾಡುವ ಮೂಲಕ ರಂಗಭೂಮಿಯ ಪುನಶ್ಚೇತನಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಒಂದು ಕಾಲದಲ್ಲಿ ದಾವಣಗೆರೆಯು ವೃತ್ತಿ ರಂಗಭೂಮಿ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ ಊರು. ಈ ಹಿಂದೆ ಇಲ್ಲಿ ಏಕಕಾಲದಲ್ಲಿ 2-3 ಕಂಪನಿ ನಾಟಕಗಳು ಪ್ರದರ್ಶನಗೊಂಡ ನಿದರ್ಶನಗಳಿವೆ. ಆದರೆ, ಇದೀಗ ಹಂತ-ಹಂತವಾಗಿ ಜನರಲ್ಲಿ ರಂಗಭೂಮಿ ಕುರಿತು ಆಸಕ್ತಿ ಕಡಿಮೆಯಾಗಿರುವುದನ್ನು ನೋಡುತ್ತಿದ್ದೇವೆ. ದಾವಣಗೆರೆಯಲ್ಲಿ ರಂಗಭೂಮಿಯ ಗತವೈಭವ ಮರಳಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳನ್ನು ನಡೆಸಬೇಕಾದ ಅವಶ್ಯಕತೆ ಇದೆ ಎಂದು ಆಶಯ ವ್ಯಕ್ತಪಡಿಸಿದರು.
ಕರ್ನಾಟಕ ರಂಗ ಸಮಾಜದ ಸದಸ್ಯ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ರಂಗಾಯಣದ ರೂವಾರಿ ಬಿ.ವಿ.ಕಾರಂತರು ಸಮಗ್ರ ರಂಗಭೂಮಿಯ ಕನಸುಗಾರರಾಗಿದ್ದಾರೆ. ಕಾರಂತರಿಗೆ ರಂಗಭೂಮಿಯ ಬಗ್ಗೆ ಸಂಪೂರ್ಣ ಪರಿಚಯವಿತ್ತು. ಟೀಕೆಗಳ ನಡುವೆಯೂ ಮೈಸೂರು ರಂಗಾಯಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಅವರಲಿದೆ ಸಲ್ಲಲಿದೆ. ರಂಗ ಕಲೆಯನ್ನು ಜನರ ಬಳಿಗೆ ಕೊಂಡೊಯ್ಯುವ ಕನಸು ಕಂಡಿದ್ದ ಬಿ.ವಿ.ಕಾರಂತರು, ಪ್ರತಿ ಜಿಲ್ಲೆಯಲ್ಲೂ ರಂಗಾಯಣ ಸ್ಥಾಪನೆಯಾಗಬೇಕೆಂದು ಆಶಿಸಿದ್ದರು. ಅದರಂತೆ ಪ್ರಸ್ತುತ ಮೈಸೂರು, ಶಿವಮೊಗ್ಗ, ಧಾರವಾಡ ಮತ್ತು ಕಲಬುರ್ಗಿಯಲ್ಲಿ ರಂಗಾಯಣ ಕಾರ್ಯ ನಿರ್ವಹಿಸುತ್ತಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರ ಮಂಗಳೂರು ಹಾಗೂ ಬೆಂಗಳೂರಿಗೆ ರಂಗಾಯಣ ಘೋಷಿಸಿದೆ. ದಾವಣಗೆರೆಗೆ ವೃತ್ತಿ ರಂಗಭೂಮಿ ತರಬೇತಿ ಕೇಂದ್ರವನ್ನೂ ಮಂಜೂರು ಮಾಡಿದೆ. ಹಾಲಿ ಸರ್ಕಾರ ಅದನ್ನು ಕಾರ್ಯಗತಗೊಳಿಸುವ ಮೂಲಕ ರಂಗಭೂಮಿಗೆ ಪ್ರೋತ್ಸಾಹ ನೀಡಬೇಕೆಂದು ಆಗ್ರಹಿಸಿದರು.
ಡಾ.ಎಂ.ಗಣೇಶ್ ನಿರ್ದೇಶನದ ಆಷಾಡದ ಒಂದು ದಿನ ನಾಟಕವನ್ನು ಶಿವಮೊಗ್ಗ ರಂಗಾಯಣ ತಂಡದ ಕಲಾವಿದರು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ರಂಗ ಸಂಘಟಕ ಎಸ್.ಎಸ್.ಸಿದ್ಧರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ