ಬೆಂಗಳೂರು
ನಕಲಿ ದಾಖಲೆಗಳನ್ನು ಸೃಷ್ಠಿಸಿ ವಂಚಿಸಿರುವ ಆರೋಪದ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ದಾಳಿ ನಡೆಸುವ ಮಾಹಿತಿ ಗೊತ್ತಾದ ತಕ್ಷಣವೇ ಕ್ಲಬ್ ಉದಯ್ಗೌಡ ನಗರದಿಂದ ಪರಾರಿಯಾಗಿದ್ದಾರೆ.
ಗೋವಾ ಮತ್ತು ಶ್ರೀಲಂಕಾಗಳಲ್ಲಿ ಉದಯ್ಗೌಡ ಉದ್ಯಮ ನಡೆಸುತ್ತಿರುವ ಉದಯ್ಗೌಡ ಶೇಷಾದ್ರಿಪುರಂನ ಲಿಂಕ್ ರಸ್ತೆಯಲ್ಲಿರುವ ತಮ್ಮ ನಿವಾಸದ ಮೇಲೆ ಮಂಗಳವಾರ ಪೊಲೀಸರು ದಾಳಿ ನಡೆಸುವುದನ್ನು ಮೊದಲೇ ತಿಳಿದು ಶ್ರೀಲಂಕಾಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಪೊಲೀಸರ ದಾಳಿಯ ವೇಳೆ ಉದಯ್ ಒಡೆತನದ ಹಲವು ಕ್ಯಾಸಿನೋ ಹಾಗೂ ಇಸ್ಪಿಟ್ ಅಡ್ಡೆಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಅವುಗಳ ಪರಿಶೀಲನೆಯಲ್ಲಿ ಗೋವಾ ಮತ್ತು ಶ್ರೀಲಂಕಾಗಳಲ್ಲಿ ಉದಯ್ಗೌಡ ಉದ್ಯಮ ನಡೆಸುತ್ತಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ.
2017 ರಲ್ಲಿ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ವಂಚನೆ ಪ್ರಕರಣವೊಂದರಲ್ಲಿ ಉದಯ್ ಗೌಡ ಭಾಗಿಯಾಗಿದ್ದ. ನೀಲಗಿರಿ ಎಂಬ ಕಟ್ಟಡಕ್ಕೆ ಅಕ್ರಮ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರುವುದು. ಕಲೈಮಣಿ ಎಂಬುವರಿಗೆ ಸುಮಾರು 10 ಕೋಟಿ ಹಣ ವಂಚಿಸಿರುವುದು ಸೇರಿ ಹಲವು ಪ್ರಕರಣಗಳಲ್ಲಿ ಉದಯ್ಗೌಡ ಭಾಗಿಯಾಗಿರುವುದು ಪತ್ತೆಯಾಗಿದೆ.
ಈ ಕೇಸ್ಗೆ ಸಂಬಂಧಿಸಿದಂತೆ ಕೋರ್ಟ್ನಿಂದ ಅರೆಸ್ಟ್ ವಾರೆಂಟ್ ಪಡೆದಿರುವ ಕಬ್ಬನ್ಪಾರ್ಕ್ ಪೊಲೀಸರು ಉದಯ್ಗೌಡರನ್ನ ಬಂಧಿಸಲು ಮಂಗಳವಾರ ಮನೆ ಮೇಲೆ ದಾಳಿ ಮಾಡಿದ್ದರು. ವಿಚಾರಣೆಗೆ ಹಾಜರಾಗದೇ ವಿದೇಶಕ್ಕೆ ಹಾರಿರುವ ಉದಯ್ಗೌಡ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಇನ್ನು, ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಹಲವು ಕಿಂಗ್ಪಿನ್ಗಳು ಶಾಸಕರನ್ನ ಸಂಪರ್ಕಿಸುತ್ತಿದ್ದು,ಇದರಲ್ಲಿ ಉದಯ್ಗೌಡ ಕೂಡ ಭಾಗಿಯಾಗಿದ್ದಾನೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
