ಗುಬ್ಬಿ
ನಿವೃತ್ತ ನೌಕರರ ಸಂಘ ಕ್ರಿಯಾಶೀಲವಾಗಿದ್ದು ಹತ್ತು ಹಲವು ಸಮಾಜಮುಖಿ ಸೇವಾಕಾರ್ಯಗಳನ್ನು ಮಾಡುವ ಮೂಲಕ ಉತ್ತಮ ಸಂಘಟನೆಯಲ್ಲಿ ತೊಡಗಿರುವುದು ಅಭಿನಂದನಾರ್ಹವಾದುದೆಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ನಿವೃತ್ತ ನೌಕರರ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಂಘವು ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಸಂಘವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುವಂತೆ ಕರೆನೀಡಿದರು
ಸಂಘದ ಕಚೇರಿಯ ಮೇಲೆ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ನೂತನ ಕಟ್ಟಡಕ್ಕೆ ಆರ್ಥಿಕ ನೆರವು ನೀಡುವುದರ ಜೊತೆಗೆ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ ಅವರು, ನಿವೃತ್ತ ನೌಕರರು ತಮ್ಮ ಸೇವಾ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಇಂತಹವರಿಗೆ ಸಹಕಾರ ನೀಡುವುದು ಅತ್ಯವಶ್ಯಕವಾಗಿದ್ದು ಸಾಧ್ಯವಾದಷ್ಟು ನೆರವು ನೀಡುವುದಾಗಿ ತಿಳಿಸಿದರು. ನಿವೃತ್ತ ನೌಕರರು ಸಂಘಟಿತರಾಗಿ ತಮ್ಮ ಮೂಲ ಭೂತ ಸೌಲಭ್ಯಗಳನ್ನು ದೊರಕಿಸಿಕೊಳ್ಳುವತ್ತ ಮುಂದಾಗುವಂತೆ ತಿಳಿಸಿದರು.
ಸಾಹಿತಿ ಮತ್ತು ಪ್ರಾಚಾರ್ಯ ಹೆಚ್.ಕೆ.ನರಸಿಂಹಮೂರ್ತಿ ಮಾತನಾಡಿ, ನಿವೃತ್ತ ನೌಕರರು ಸಂಘಟಿತರಾಗಿ ತಮ್ಮ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳುವತ್ತ ಪ್ರಾಮಾಣಿಕ ಹೋರಾಟ ಮಾಡುತ್ತಿದ್ದು, ಇದರ ಜೊತೆಗೆ ಹಲವು ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಉತ್ತಮ ಕಾರ್ಯಗಳನ್ನು ಮಾಡುತ್ತಿರುವುದು ಅಭಿನಂದನಾರ್ಹವಾದುದೆಂದು ತಿಳಿಸಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ರಾಮಯ್ಯ ಮಾತನಾಡಿ, ನಿವೃತ್ತ ನೌಕರರ ಸಮಸ್ಯೆಗಳನ್ನು ಬಗೆಹರಿಸುವತ್ತ ಸಚಿವರು ಪ್ರಾಮಾಣಿಕ ಪ್ರಯತ್ನ ಮಾಡುವುದರ ಜೊತೆಗೆ ಸಂಘದ ಕಚೇರಿಯ ಮೇಲೆ ನಿರ್ಮಿಸಲು ಉದ್ದೇಶಿಸಿರುವ ಕಟ್ಟಡ ನಿರ್ಮಾಣಕ್ಕೆ 15 ಲಕ್ಷರೂ. ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿಕೊಂಡ ಅವರು, ಸಂಘವು ಕ್ರಿಯಾಶೀಲವಾಗಿದ್ದು ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಉತ್ತಮ ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿರುವುದಾಗಿ ತಿಳಿಸಿದರು.
ಇದೆ ಸಂದರ್ಭದಲ್ಲಿ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಮತ್ತು ಹಿರಿಯ ಸಾಹಿತಿ ಹೆಚ್.ಕೆ.ನರಸಿಂಹಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ರೇಣುಕಾಪ್ರಸಾದ್, ಉಪಾಧ್ಯಕ್ಷರುಗಳಾದ ಆರ್.ವೆಂಕಟೇಶಯ್ಯ, ಎಸ್.ವಿ.ವೆಂಕಟಗಿರಿ, ಗುರಪ್ಪ, ಬಿ.ರಾಮಯ್ಯ, ಆರ್.ಬಿ.ಜಯಣ್ಣ, ಜಿ.ಗೋವಿಂದಯ್ಯ, ವಿಶ್ವನಾಥ, ಚನ್ನಬಸವೇಗೌಡ, ಶ್ರೀನಿವಾಸಮೂರ್ತಿ, ಎನ್.ಮಹಾದೇವಪ್ಪ, ವಿಶ್ವನಾಥ್, ಜಿ.ಆರ್.ಅಪ್ಪಾಜಿ ಮುಂತಾದವರು ಭಾಗವಹಿಸಿದ್ದರು.
