ಬ್ಯಾಡಗಿ:
ಮುಖ್ಯರಸ್ತೆ (ಗಜೇಂದ್ರಗಡ-ಸೊರಬ ಹೆದ್ದಾರಿ-136) ಅಗಲೀಕರಣಕ್ಕೆ ಆಗ್ರಹಿಸಿ, ಮತ್ತು ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ ಗುರುವಾರ ಪಟ್ಟಣದ ವಿವಿಧ ಸಂಘಟನೆಗಳು ಸುಮಾರು 4 ತಾಸಿಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದರು.
ಅ.24 ರಂದು ಬುಧವಾರ ಸಂಜೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ನೇತೃತ್ವದಲ್ಲಿ ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ಕರೆದಿದ್ದ ಫಲಪ್ರದ ಕಾಣದ ಹಿನ್ನಲೆಯಲ್ಲಿ ಪೂರ್ವ ನಿಗದಿಯಂತೆ ಗುರುವಾರ ಮುಖ್ಯರಸ್ತೆ ಅಗಲೀಕರಣ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.. ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಹಳೇ ಪುರಸಭೆವರೆಗೂ ಸಾಗಿ ಬಂತು ಬಳಿಕ ರಸ್ತೆ ಮದ್ಯದಲ್ಲಿಯೇ ಕುಳಿತು ನೂರಾರು ಪ್ರತಿಭಟನಾಕಾರರು ಧರಣಿ ನಡೆಸಲಾರಂಭಿಸಿದರು. ಇದರಿಂದ ಸುಮಾರು ನಾಲ್ಕು ತಾಸಿಗೂ ಹೆಚ್ಚು ಕಾಲ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತ ಗೊಂಡಿತ್ತು.. ಪ್ರತಿಭಟನೆ ವೇಳೆ ಸ್ಥಳೀಯ ಶಾಸಕರು ಸೇರಿದಂತೆ ಜಿಲ್ಲಾಡಳಿತ, ಲೋಕೋಪಯೋಗಿ ಹಾಗೂ ಇನ್ನಿತರರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಅಧಿಕಾರಿಗಳಿಗೆ ಘೇರಾವ್: ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಹಶೀಲ್ದಾರ ಸೇರಿದಂತೆ, ಪಿಡಬ್ಲ್ಯೂಡಿ ಅಧಿಕಾರಿಗಳು ಪ್ರತಿಭಟನಕಾರರು ಸಮಾಧಾನ ಪಡಿಸಲು ಮುಂದಾದರು, ಆದರೆ ಇದಕ್ಕೆ ಜಗ್ಗದ ಅವರು ಅಧಿಕಾರಿಗಳಿಗೆ ಘೇರಾವ್ ಹಾಕಿದ ಘಟನೆ ನಡೆಯಿತು. ನಿಮ್ಮ ತಪ್ಪಿನಿಂದ ಇಂದು ಮುಖ್ಯರಸ್ತೆ ಅಗಲೀಕರಣವಾಗದೇ ಕುಳಿತಿದೆ, ಈಗಾಗಲೇ 4 ಜನರು ದುರ್ಮರಣವನ್ನಿಪ್ಪಿದ್ದಾರೆ, ನಿತ್ಯವು ಜನರು ಪರದಾಡುತ್ತಿರುವುದು ತಮ್ಮ ಕಣ್ಣಿಗೆ ಕಾಣುತ್ತಿಲ್ಲವೇ, ಎಷ್ಟು ಪ್ರತಿಭಟನೆ, ಮನವಿಗಳನ್ನು ಕೊಡಬೇಕು ಇದೀಗ ಬುದ್ಧಿ ಹೇಳಲು ಬಂದಿರುವ ತಮಗೆ ನಾಚಿಕೆ ಇಲ್ಲವೇ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ರಸ್ತೆಯಲ್ಲಿ ಓಡಾಡಿ ಗೊತ್ತಾಗುತ್ತೆ: ಈ ಸಂದರ್ಭದಲ್ಲಿ ಮಾತನಾಡಿದ ಅಗಲೀಕರಣ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಮುಖ್ಯರಸ್ತೆ ಅಗಲೀಕರಣಕ್ಕಾಗಿ ಕಳೆದ 10 ವರ್ಷಗಳಿಂದ ನಡೆಯುತ್ತಿದೆ, ಇನ್ನೂ ಎಷ್ಟು ಹೋರಾಟ ಮಾಡಬೇಕು..? ವಿಷಯಾಧಾರಿತ ಹೋರಾಟಕ್ಕೆ ಸ್ಪಂದಿಸದೇ ಇರುವ ಅಧಿಕಾರಿಗಳಿಂದ ಇನ್ನೇನು ಬಯಸಲು ಸಾಧ್ಯ ತಾವು ಕುಳಿತಂತಹ ಏ.ಸಿ.ರೂಂ ಬಿಟ್ಟು ಮುಖ್ಯರಸ್ತೆಯಲ್ಲಿ ಓಡಾಡಿ ನಮ್ಮ ಏನು ಎಂಬುದು ಅರ್ಥವಾಗಲಿದೆ, ಅದರ ಬದಲಾಗಿ ಹೋರಾಟಗಾರರನ್ನು ಬೆದರಿಸುವ ತಂತ್ರಗಾರಿಕೆ ನಡೆಯುತ್ತಿರುವುದು ಎಷ್ಟರಮಟ್ಟಿಗೆ ಸರಿ..? ಅಗಲೀಕರಣ ಮಾಡದಿದ್ದರೆ ಮುಖ್ಯರಸ್ತೆಯಲ್ಲಿ ಅಹೋರಾತ್ರಿ ಆ ಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.
ಜಿಲ್ಲಾಧಿಕಾರಿಗಳು ನಾಪತ್ತೆ: ಲೈಂಗಿಕ ಅಲ್ಪ ಸಂಖ್ಯಾತರ ಸಂಘದ ಜಿಲ್ಲಾಧ್ಯಕ್ಷೆ ಕೆ.ಸಿ.ಅಕ್ಷತಾ ಮಾತನಾಡಿ, ಅಗಲೀಕರಣ ಮಾಡಿಯೇ ತಿರುತ್ತವೇ ಎಂದು ಮಾನ್ಯ ಜಿಲ್ಲಾಧಿಕಾರಿಗಳು ಎರಡು ವರ್ಷಗಳ ಹಿಂದೆ ರಸ್ತೆಯ ಎರಡು ಬದಿಯಲ್ಲಿ 105 ಅಡಿಗೆ ಅಗಲಕ್ಕೆ ಗುರ್ತು ಮಾಡಿದ್ದು ಹೋಗಿದ್ದರು, ನಮಗೂ ಸಹ ಅಗಲೀ ಕರಣವಾಯಿತು ಎಂಬ ಭಾವನೆ ಮೂಡಿತ್ತು, ಆದರೆ ಗುರ್ತು ಮಾಡಿ ಹೋದವರು ಇಂದಿಗೂ ಪತ್ತೆಯಾಗಿಲ್ಲ ಅಷ್ಟೇ ಏಕೆ ಸೌಜನ್ಯಕ್ಕೂ ಪಟ್ಟಣಕ್ಕೆ ಭೇಟಿ ನೀಡಿಲ್ಲ ಜಿಲ್ಲಾಧಿಕಾರಿಗಳು ಯಾವುದೇ ಕ್ರಮಕ್ಕೂ ಮುಂದಾಗದಿರುವುದನ್ನು ಗಮನಿಸಿದರೆ ಒತ್ತಡಕ್ಕೆ ಮಣಿದಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.
ಕಾರಣ ಕೊಡಬೇಡಿ: ವರ್ತಕ ಎಸ್.ಆರ್.ಪಾಟೀಲ ಮಾತನಾಡಿ, ಮುಖ್ಯರಸ್ತೆ ಅಗಲೀಕರಣ ಬಹುದಿನದ ಕನಸಾಗಿದ್ದು ವಾಹನ ಸಂಚಾರ ದುಸ್ತರವಾಗಿದೆ, ಸಾರ್ವಜನಿಕರ ನೋವನ್ನು ಸರ್ಕಾರಗಳು ಅಥ್ರ್ಯಸಿಕೊಳ್ಳಬೇಕು, ಅಗಲೀಕರಣದಿಂದ ಯಾರಿಗೂ ನೋವಾಗುವುದನ್ನು ಬಯಸುವುದಿಲ್ಲ ಆದರೆ, ಮುಖ್ಯರಸ್ತೆಯಲ್ಲಿರುವ ಕಟ್ಟಡ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವ ಮೂಲಕ ಅಗಲೀಕರಣಕ್ಕೆ ಮುಂದಾಗುವಂತೆ ಮನವಿ ಮಾಡಿದರು.
ಸಾರ್ವಜನಿಕರೇ ಅಗಲೀಕರಣಕ್ಕೆ ಮುಂದಾಗುವ ಕಾಲ ದೂರವಿಲ್ಲ: ಕಾಂಗ್ರೆಸ್ ಯುವ ಮುಖಂಡ ಬಾಲಚಂದ್ರ ಪಾಟೀಲ ಮಾತನಾಡಿ, ಅಂತರಾಷ್ಟ್ರೀಯ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ರಸ್ತೆ ಅಗಲೀಕರಣ ಅವಶ್ಯವಿದೆ, ಜನಪ್ರತಿನಿಧಿಗಳು ಅಧಿಕಾರಿಗಳು ಯಾವುದೇ ಸಬೂಬು ಹೇಳದೆ ಅಗಲೀಕರಣಕ್ಕೆ ಮುಂದಾಗಬೇಕಿದೆ. ಇದೇ ರೀತಿ ವಿಳಂಬ ಧೋರಣೆ ಮುಂದುವರೆದಲ್ಲಿ ಸಾರ್ವಜನಿಕರೇ ಜೆಸಿಬಿ ಬಳಸಿ ರಸ್ತೆ ಅಗಲೀಕರಣಕ್ಕೆ ಮುಂದಾಗುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.
ನ.2 ರಂದು ಬ್ಯಾಡಗಿಯಲ್ಲಿ ತುರ್ತು ಸಭೆ:ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ, ಪ್ರತಿಭಟನಾಕಾರರನ್ನು ಸಮಾಧಾನಪಡಿಸುವಲ್ಲಿ ಸಫಲರಾದರು. ಮುಖ್ಯರಸ್ತೆ ಅಗಲೀಕರಣ ಕುರಿತಂತೆ ನ.2 ರಂದು ಜಿಲ್ಲಾಧಿಕಾರಿ, ಮುಖ್ಯ ಅಭಿಯಂತರ ಸೇರಿದಂತೆ ಇನ್ನಿತರ ಅಧಿಕಾರಿಗಳ ತುರ್ತು ಸಭೆಯನ್ನು ಕರೆಯಲಿದ್ದೇವೆ ಅಗಲೀಕರಣ ಮಾಡುವ ಕುರಿತಂತೆ ಚರ್ಚಿಸಿ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದರು ಬಳಿಕ ಪ್ರತಿಭಟನಕಾರರು ಮನವಿಯೊಂದನ್ನು ಉಪವಿಭಾಗಾಧಿಕಾರಿಗೆ ಸಲ್ಲಿಸಿ ಪ್ರತಿಭಟನೆಯಿಂದ ಹಿಂದೆ ಸರಿದರು.
ಇಂದು ನಡೆದ ಪ್ರತಿಭಟನೆಗಳ ನ್ಯಾಯವಾದಿಗಳ ಸಂಘ, ಅಂಗವಿಕಲರ ಸಂಘ, ವರ್ತಕರ ಸಂಘ, ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ ಬಣ) ಕರುನಾಡು ಮಹಿಳಾ ಸಂಘ, ಜಯ ಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ), ಹಮಾಲರ ಸಂಘ, ಉತ್ತರ ಕರ್ನಾಟಕ ರಾಜ್ಯ ರೈತ ಸಂಘ. ಆಟೋ ಮಾಲೀಕರ ಸಂಘ ಸೇರಿದಂತೆ ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
