ತುಮಕೂರು
ಕುಡಿಯುವ ನೀರಿನ ಯೋಜನೆಗಾಗಿ ಮೇಲ್ಮಟ್ಟದ ನೀರಿನ ಸಂಗ್ರಹಾಗಾರ (ಓವರ್ ಹೆಡ್ ಟ್ಯಾಂಕ್) ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲು ತೊಡಗಿದಾಗ, ಸ್ಥಳೀಯರಿಂದ ಅಡ್ಡಿ ಎದುರಾಗಿ, ಕೊನೆಗೆ ಸ್ಥಳಕ್ಕೆ ಬಂದ ತುಮಕೂರು ಮಹಾನಗರ ಪಾಲಿಕೆ ಆಯುಕ್ತರು ಸದರಿ ಸ್ಥಳೀಯರಿಗೆ ಶುಕ್ರವಾರ ಬೆಳಗಿನವರೆಗೆ ಗಡುವು ಕೊಟ್ಟ ಘಟನೆ ಗುರುವಾರ ತುಮಕೂರು ನಗರದಲ್ಲಿ ನಡೆಯಿತು.
ನಗರದ ಕೋಟೆ ಆಂಜನೇಯ ಸ್ವಾಮಿ ವೃತ್ತದ ಸಮೀಪವಿರುವ ಕೋಡಿ ಬಸವಣ್ಣ ದೇವಾಲಯದ ಎದುರು ಭಾಗ ಮಹಾನಗರ ಪಾಲಿಕೆಗೆ ಸೇರಿದ ಜಾಗ ಇದ್ದು, ಅಲ್ಲಿ ಗುರುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1-45 ರವರೆಗೂ ಈ ಘಟನಾವಳಿಗಳು ಜರುಗಿದವು. ಇದು 5 ನೇ ವಾರ್ಡ್ ವ್ಯಾಪ್ತಿಗೆ ಒಳಪಡುತ್ತದೆ.
ತುಮಕೂರು ನಗರದಲ್ಲಿ ಈಗ “ದಿನದ 24 ಗಂಟೆಗಳು ಹಾಗೂ ವಾರದ ಏಳೂ ದಿನಗಳು” ಕುಡಿಯುವ ನೀರು ಪೂರೈಸುವ ಬೃಹತ್ ಯೋಜನೆಯ ಕಾಮಗಾರಿಯು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ ವತಿಯಿಂದ 198 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಅದರ ಭಾಗವಾಗಿ ಮಹಾನಗರ ಪಾಲಿಕೆಗೆ ಸೇರಿದ ಈ ಜಾಗದಲ್ಲಿ ಒಂದು ಮೇಲ್ಮಟ್ಟದ ನೀರಿನ ಸಂಗ್ರಹಾಗಾರ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಆ ಕಾಮಗಾರಿ ಆರಂಭಿಸಲು ಹೋದಾಗ ಈ ಬೆಳವಣಿಗೆ ಉಂಟಾಯಿತು.
ಬೆಳಗ್ಗೆ ಸುಮಾರು 10 ಗಂಟೆಯಲ್ಲಿ ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ನೀರು ಸರಬರಾಜು ಮಂಡಲಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಜೆಸಿಬಿ ಮೂಲಕ ಸದರಿ ಜಾಗವನ್ನು ಸಮತಟ್ಟುಗೊಳಿಸುವ ಕೆಲಸ ಆರಂಭಿಸಿದರು. ಆಗ ಅಲ್ಲಿನ ಕೆಲ ಮಾಂಸದ ಅಂಗಡಿಗಳವರು ಮತ್ತು ಅಕ್ಕಪಕ್ಕದ ನಿವಾಸಿಗಳಿಂದ ಪ್ರತಿರೋಧ ಉಂಟಾಯಿತು.
“ಇದು ಪಾಲಿಕೆಗೆ ಸೇರಿದ ಪುರಾತನವಾದ ಜಾಗ. ಈ ಜಾಗ ದೀರ್ಘಕಾಲದಿಂದ ಪಾಳುಬಿದ್ದಿದೆ. ಅಲ್ಲೀಗ ನೀರಿನ ಟ್ಯಾಂಕ್ ನಿರ್ಮಿಸಲಾಗುವುದು” ಎಂದು ಪಾಲಿಕೆ ಮತ್ತು ಮಂಡಲಿ ಅಧಿಕಾರಿಗಳು ಹೇಳಿದರು. ಆದರೆ ಸ್ಥಳೀಯರು “ಇಲ್ಲಿ ಮಾಂಸದ ಅಂಗಡಿ ವ್ಯಾಪಾರ ನಡೆಯುತ್ತಿದೆ. ನಮಗೆ ತೊಂದರೆ ಆಗುತ್ತದೆ” ಎಂದು ಹಾಗೂ “ಇದು ನಮಗೆ ಸೇರಿದ ಜಾಗ” ಎಂದು ಆಕ್ಷೇಪಿಸಿದರು. ಇದರಿಂದ ಕೆಲಕಾಲ ಅಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ಆಗ ಸ್ಥಳಕ್ಕೆ ತುಮಕೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿ, ಬಿಗಿ ಭದ್ರತೆ ಒದಗಿಸಿದರು. ಬಳಿಕ ಜೆಸಿಬಿ ಬಳಸಿ ಒಂದಿಷ್ಟು ಜಾಗವನ್ನು ಮಟ್ಟ ಮಾಡುವ, ಪೇದೆಗಳನ್ನು ತೆರವು ಮಾಡುವ ಕೆಲಸ ಆರಂಭವಾಯಿತು.
ಮಹಾನಗರ ಪಾಲಿಕೆಯ ಉಪ ಆಯುಕ್ತ (ಕಂದಾಯ) ಯೋಗಾನಂದ್, ಸಹಾಯಕ ಕಂದಾಯಾಧಿಕಾರಿ ನೀಲಲೋಚನ ಪ್ರಭು, ಕುಡಿಯುವ ನೀರಿನ ವಿಭಾಗದ ಇಂಜಿನಿಯರ್ ವಸಂತ್ ಸೇರಿದಂತೆ ಪಾಲಿಕೆಯ ವಿವಿಧ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಇದ್ದರು. ನೀರು ಪೂರೈಕೆ ಮಂಡಲಿಯ ಸಹಾಯಕ ಎಕ್ಸಿಕ್ಯುಟೀವ್ ಇಂಜಿನಿಯರ್ ಈರಣ್ಣ ಮತ್ತು ಸಿಬ್ಬಂದಿ ಹಾಜರಿದ್ದರು. 5 ನೇ ವಾರ್ಡ್ನ ಪಾಲಿಕೆ ಸದಸ್ಯ ಮಹೇಶ್ ಸ್ಥಳಕ್ಕೆ ಆಗಮಿಸಿದ್ದರು. ಇವರ ಸಮ್ಮುಖದಲ್ಲಿ ಕಾರ್ಯಾಚರಣೆ ಮುಂದುವರೆಯಿತು. ಬೆಸ್ಕಾಂ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ, ಸದರಿ ಸ್ಥಳದಲ್ಲಿದ್ದ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿ, ಕಾರ್ಯಾಚರಣೆಗೆ ಅನುವುಮಾಡಿಕೊಡಲಾಯಿತು.
ಈ ಮಧ್ಯ ಬೆಳಗಿನಿಂದ ಸದರಿ ಸ್ಥಳದ ಹಳೆಯ ಕಟ್ಟಡವೊಂದು ಖಾಲಿ ಇದ್ದು, ಮಧ್ಯಾಹ್ನದ ವೇಳೆಗೆ ಅಲ್ಲಿ ದಿಢೀರನೆ ಮಾಂಸ ನೇತಾಡತೊಡಗಿದ್ದು ಅಲ್ಲಿದ್ದವರನ್ನೇ ಚಕಿತಗೊಳಿಸಿತು.
ಮಧ್ಯಾಹ್ನ 1-15 ರ ಹೊತ್ತಿಗೆ ಮಹಾನಗರ ಪಾಲಿಕೆ ಆಯುಕ್ತ ಎಲ್.ಮಂಜುನಾಥ ಸ್ವಾಮಿ ಸ್ಥಳಕ್ಕೆ ಆಗಮಿಸಿ, ವೀಕ್ಷಿಸಿದರು. ಆಗ ಸ್ಥಳೀಯ ಮಾಂಸದ ಅಂಗಡಿಗಳವರು ಬಂದು ತಮಗೆ ಕಾಲಾವಕಾಶ ಕೊಡಬೇಕೆಂದು ಮನವಿ ಮಾಡಿಕೊಂಡರು. ಇದಕ್ಕೆ ಸುತಾರಾಂ ಒಪ್ಪದ ಆಯುಕ್ತರು “ನೋಡಿ, ಇದು ಕುಡಿಯುವ ನೀರಿನ ಕಾಮಗಾರಿ. ಇದಕ್ಕೆ ಯಾರೂ ಅಡ್ಡಿಪಡಿಸಬಾರದು. ನಗರಪಾಲಿಕೆಗೆ ಸೇರಿರುವ ಜಾಗದಲ್ಲಿ ಈ ಕಾಮಗಾರಿ ಆರಂಭಗೊಂಡಿದೆ. ಇದನ್ನು ಸ್ಥಗಿತಗೊಳಿಸಲು ಹಾಗೂ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ನೀವು ನಾಳೆ ಬೆಳಗ್ಗೆ 8 ಗಂಟೆಯೊಳಗೆ ತೆರವು ಮಾಡಿಕೊಳ್ಳಬೇಕು. ಬೆಳಗ್ಗೆ 10 ಗಂಟೆಯಿಂದ ಇಲ್ಲಿ ಕಾಮಗಾರಿ ಆರಂಭಗೊಳ್ಳುತ್ತದೆ” ಎಂದು ಖಡಕ್ ಆಗಿ ಗಡುವು ಕೊಟ್ಟು ನಿರ್ಗಮಿಸಿದರು. ಸ್ಥಳೀಯರು ಇದಕ್ಕೆ ಒಪ್ಪಿದರು. ಇದರೊಂದಿಗೆ ಅಲ್ಲಿದ್ದ ಬಿಗುವಿನ ವಾತಾವರಣ ತಣ್ಣಗಾಯಿತು.
ಪಾಲಿಕೆ ಆಯುಕ್ತರ ಸ್ಪಷ್ಟನೆ
ಈ ಸಂದಭರ್ದಲ್ಲಿ ಸ್ಥಳಕ್ಕಾಗಮಿಸಿದ್ದ ಪತ್ರಕರ್ತರ ಜೊತೆ ಮಾತನಾಡಿದ ಆಯುಕ್ತ ಎಲ್.ಮಂಜುನಾಥ ಸ್ವಾಮಿ “ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸುವ ಈ ಸ್ಥಳದಲ್ಲಿ ಕಸಾಯಿ ಖಾನೆ ಮಾಡಲು ಅವಕಾಶ ಕೊಡುವ ಪ್ರಮೇಯವೇ ಇಲ್ಲ. ಸುಸಜ್ಜಿತ ಕಸಾಯಿ ಖಾನೆಗಾಗಿಯೇ ಸ್ಮಾರ್ಟ್ಸಿಟಿ ಯೋಜನೆಯಲ್ಲಿ ವಿಶೇಷ ಪ್ರಸ್ತಾವನೆ ಇದ್ದು, ನಿಗದಿತ ಜಾಗದಲ್ಲಿ ಅದು ನಿರ್ಮಾಣಗೊಳ್ಳಲಿದೆ. ಅಲ್ಲದೆ ಈ ಜಾಗವು ದೀರ್ಘಕಾಲದಿಂದ ಪಾಳುಬಿದ್ದಿತ್ತೆಂಬ ಹಾಗೂ ಇಲ್ಲಿ ಏನೂ ಇರಲಿಲ್ಲವೆಂಬ ಸಂಗತಿ ನಮ್ಮ ಗಮನದಲ್ಲಿ ಇದೆ. ಟ್ಯಾಂಕ್ ನಿರ್ಮಾಣ ಕಾಮಗಾರಿ ಮುಂದುವರೆಯುವುದು” ಎಂದು ಸ್ಪಷ್ಟಪಡಿಸಿದರು.
7.5 ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕ್
“ಇಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಓ.ಎಚ್.ಟಿ. ನಿರ್ಮಾಣವಾಗುತ್ತಿದೆ. ಇದರಲ್ಲಿ 7.5 ಲಕ್ಷ ಲೀಟರ್ನಷ್ಟು ನೀರಿನ ಸಂಗ್ರಹ ಸಾಮರ್ಥ್ಯವಿರುತ್ತದೆ. ಸುತ್ತಲಿನ ಬಡಾವಣೆಗಳಿಗೆ ನೀರು ಸರಬರಾಜು ಮಾಡಲು ಇದರಿಂದ ಅನುಕೂಲ ಆಗಲಿದೆ” ಎಂದು ಸ್ಥಳದಲ್ಲಿದ್ದ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಯ ಸಹಾಯಕ ಎಕ್ಸಿಕ್ಯುಟೀವ್ ಇಂಜಿನಿಯರ್ ಈರಣ್ಣ ಪತ್ರಕರ್ತರಿಗೆ ತಿಳಿಸಿದರು.
ನೀರಿನ ಟ್ಯಾಂಕ್ ಆಗಲೇಬೇಕು
“ಸುತ್ತಮುತ್ತಲಿನ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದು ಪರಿಹಾರವಾಗಬೇಕೆಂದರೆ ಪಾಲಿಕೆಗೆ ಸೇರಿದ ಈ ಸ್ಥಳದಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಆಗಬೇಕು. ಇದು ಈ ವಾರ್ಡ್ ಜನತೆಯ ಆಶಯವಾಗಿದೆ” ಎಂದು 5 ನೇ ವಾರ್ಡ್ನ ಪಾಲಿಕೆ ಸದಸ್ಯ ಮಹೇಶ್ ಪ್ರತಿಕ್ರಿಯಿಸಿದರು.
5 ಎಕರೆ 20 ಗುಂಟೆ ಜಾಗ ಇದೆ
ಸ್ಥಳದಲ್ಲಿದ್ದ ಸಾರ್ವಜನಿಕ ಹೋರಾಟಗಾರ ಇಮ್ರಾನ್ ಪಾಷ ದಾಖಲೆಗಳನ್ನು ಪ್ರದರ್ಶಿಸುತ್ತ, “ಪಾಲಿಕೆಯ ದಾಖಲಾತಿಗಳ ಪ್ರಕಾರ ಇಲ್ಲಿ ಒಟ್ಟು 5 ಎಕರೆ 20 ಗುಂಟೆಯಷ್ಟು ಪಾಲಿಕೆಗೆ ಸೇರಿದ ಜಾಗ ಇದೆ. ಅದರಲ್ಲಿ ಈಗ ಉಪಯೋಗಿಸುತ್ತಿರುವ ಕಸಾಯಿಖಾನೆ ಜಾಗವು ಪಿಐಡಿ 8966 ರ ಪ್ರಕಾರ 76,800 ಚದರ ಅಡಿಗಳಷ್ಟು ಇದೆ. ಹಳೆಯ ಖಾತೆ ಸಂಖ್ಯೆ 167 ಮತ್ತು ಹೊಸ ಖಾತೆ ಸಂಖ್ಯೆ 114 ಪ್ರಕಾರ ಇದು ಪಾಲಿಕೆಯ ಸ್ವತ್ತು” ಎಂದು ಒತ್ತಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
