ಬೆಂಗಳೂರು
ರಾತ್ರಿ ಸಾಲದ ಬಾಧೆಯಿಂದ ನೊಂದ ವಿಪ್ರೋ ಕಂಪನಿಯ ಉದ್ಯೋಗಿಯೊಬ್ಬರು ಪಿಜಿ ಹಾಸ್ಟೆಲ್ನಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ತಮಿಳುನಾಡಿನ ಚೆನ್ನೈ ಮೂಲದ ಸೇತು ಕುಮಾರ್ (29) ಎಂದು ಗುರುತಿಸಲಾಗಿದೆ. ಎಂಸಿಎ ಪದವಿ ಮುಗಿಸಿ ವಿಪ್ರೋ ಕಂಪನಿ ಸೇರಿದ್ದ ಸೇತುಕುಮಾರ್ ಕೆಲವು ವರ್ಷಗಳಿಂದ ನಗರದಲ್ಲಿ ಉಳಿದುಕೊಂಡಿದ್ದರು.
ಸೋಮವಾರ ಕೆಲಸ ಮುಗಿಸಿಕೊಂಡು ಬಂದು ರಾತ್ರಿ 10.30ರ ವೇಳೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ನಿಲಾದ್ರಿ ನಗರದ ವಿನಾಯಕ ಪಿಜಿಯಲ್ಲಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೊದಲಿದ್ದ ಪಿಜಿಯನ್ನು ಬಿಟ್ಟು ಕಳೆದ ತಿಂಗಳಷ್ಟೇ ವಿನಾಯಕ ಪಿಜಿಗೆ ಬಂದಿದ್ದ ಸೇತುಕುಮಾರ್ರನ್ನು ಇನ್ನಿಬ್ಬರ ಜೊತೆಗೆ ಕೊಠಡಿ ಕೊಡಲಾಗಿತ್ತು ಜೊತೆಯಲ್ಲಿದ್ದವರು ಹೊರಹೋಗಿದ್ದಾಗ ನೇಣಿಗೆ ಶರಣಾಗಿದ್ದಾರೆ ಸ್ವಲ್ಪ ಸಮಯದ ನಂತರ ಆತನ ಜೊತೆಗಿದ್ದವರು ವಾಪಸ್ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸೇತುಕುಮಾರ್ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತರು ಸೇರಿ ಹಲವರ ಬಳಿ ಸಾಲ ಮಾಡಿಕೊಂಡಿದ್ದರು ಸಾಲ ವಾಪಸ್ ನೀಡುವಂತೆ ಒತ್ತಡ ತರುತ್ತಿದ್ದರಿಂದ ಪಿಜಿಯಲ್ಲಿ ಬದಲಾಯಿಸಿ ನಿಲಾದ್ರಿನಗರಕ್ಕೆ ಬಂದಿದ್ದರು ಕೆಲಸದ ಸ್ಥಳದಲ್ಲಿಯೂ ಸಾಲ ವಾಪಸ್ ಕೊಡುವಂತೆ ಕಾಟ ಕೊಡುತ್ತಿದ್ದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಂಗಲ್ನಲ್ಲಿ ಹುಳ
ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್)ದ ಕಾರು ನಿಲ್ದಾಣದ ಕ್ಯಾಂಟೀನ್ನಲ್ಲಿ ಕ್ಯಾಬ್ ಚಾಲಕರೊಬ್ಬರು ತಿನ್ನುತ್ತಿದ್ದ ಪೊಂಗಲ್ನಲ್ಲಿ ಹುಳ ಕಂಡುಬಂದಿದು ಆಕ್ರೋಶ ವ್ಯಕ್ತವಾಗಿದೆ..
ನಿಲ್ದಾಣದ ಕಾರ್ ನಿಲ್ದಾಣ ಬಳಿಯ ಸತೀಶ್ ಡೈನಿಂಗ್ ಕ್ಯಾಂಟೀನ್ ನಲ್ಲಿ ಕ್ಯಾಬ್ ಚಾಲಕ ಗಣೇಶ್ ಎಂಬಾತ 50 ರೂ. ಕೊಟ್ಟು ಖರೀದಿಸಿ ತಿನ್ನುತ್ತಿದ್ದ ಪೊಂಗಲ್ನಲ್ಲಿ ಹುಳವಿರುವುದನ್ನು ಕಂಡು ಬೆಚ್ಚಿಬಿದ್ದ ಗಣೇಶ್, ಕ್ಯಾಂಟೀನ್ ಸಿಬ್ಬಂದಿ ವಿರುದ್ಧ ತಿರುಗಿಬಿದ್ದಿದ್ದಾರೆ.
ವಿಷಯ ತಿಳಿದು ಗುಂಪುಗೂಡಿದ ಕ್ಯಾಬ್ ಚಾಲಕರು ಕ್ಯಾಂಟೀನ್ ಮಾಲೀಕ ಹಾಗೂ ಸಿಬ್ಬಂದಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ . ಕಳಪೆ ಗುಣಮಟ್ಟದ ಆಹಾರ ಕೊಡುವುದಲ್ಲದೇ ಒಂದು ಪ್ಲೇಟ್ ಪೊಂಗಲ್ ಗೆ 50 ರೂ. ವಸೂಲಿ ಮಾಡಿ ಹಣ ದೋಚುತ್ತಿದ್ದಾರೆ ಎಂದು ಕ್ಯಾಬ್ ಚಾಲಕರು ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಅಡುಗೆ ಕೊಠಡಿಗೆ ತೆರಳಿ ಕ್ಯಾಬ್ ಚಾಲಕರು ಪರಿಶೀಲನೆ ನಡೆಸಿದ್ದು, ಕೊಳೆತ ಟೊಮೆಟೋ, ತರಕಾರಿಗಳು ಸಹ ಪತ್ತೆಯಾಗಿವೆ. ಇದರಿಂದ ಮತ್ತಷ್ಟು ಕೆಂಡಾಮಂಡಲರಾಗಿರೋ ಕ್ಯಾಬ್ ಚಾಲಕರು ಕ್ಯಾಂಟೀನ್ ಮುಚ್ಚಬೇಕು ಹಾಗೂ ಬೇರೆಯವರಿಗೆ ಕ್ಯಾಂಟೀನ್ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








