ಹುಳಿಯಾರು:
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರು ಹಾಗೂ ರೈತ ಮಹಿಳೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ರೈತಸಂಘ (ಹೊಸಹಳ್ಳಿ ಚಂದ್ರಣ್ಣ ಬಣ) ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಹುಳಿಯಾರಿನ ರಾಮ್ಗೋಪಾಲ್ ಸರ್ಕಲ್ ಬಳಿಯ ಸಂಘದ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಬೆಳಗಾವಿಯ ರೈತ ಮಹಿಳೆ ಕುರಿತು ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ತಾಯಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಖಂಡನೀಯ ಎಂದರು.
ರೈತ ಮಹಿಳೆಯ ಬಗ್ಗೆ ಹಗುರವಾಗಿ ಮಾತನಾಡಿರುವ ಮುಖ್ಯಮಂತ್ರಿಗಳು ರಾಜ್ಯದ ಜನತೆಯ ಕ್ಷಮೆ ಕೋರಬೇಕು. ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬೇಕು. ಅನ್ನದಾತರನ್ನು ಮುಖ್ಯಮಂತ್ರಿಗಳು ಗೂಂಡಾ ಎಂದು ಕರೆದಿರುವುದು ಅವರ ಉದ್ಧಟತನವನ್ನು ತೋರಿಸುತ್ತದೆ. ರಾಜ್ಯದ ರೈತರ ಹಿತ ಕಪಾಡುವಲ್ಲಿ ವಿಫಲರಾಗಿರುವ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ನಾಲಾಯಕ್ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ನೀಡಿರುವ 30 ಭರವಸೆಗಳನ್ನು ಇನ್ನು 15 ದಿನದ ಒಳಗೆ ಈಡೇರಿಸಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸೃಜನ ಸಂಘದ ಮಹಿಳಾ ಹೋರಾಟಗಾರ್ತಿ ಜಯಲಕ್ಷ್ಮಮ್ಮ ಮಾತನಾಡಿ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಮಹಿಳೆಯ ಬಗ್ಗೆ ಅಗೌರವವಾಗಿ ಮಾತನಾಡಿರುವ ಮುಖ್ಯಮಂತ್ರಿಗಳು ಈ ಮೂಲಕ ಇಡೀ ಮಹಿಳಾ ಸಮುದಾಯವನ್ನೆ ಅವಮಾನಿಸಿದ್ದಾರೆಂದರು. ಅಧಿಕಾರಕ್ಕೆ ಬಂದ ತಕ್ಷಣ ರೈತರ ಕಷ್ಟಗಳನ್ನು ಪರಿಹಾರಿಸುತ್ತೇನೆ ಎಂದಿದ್ದ ಅವರು ರೈತರ ಮೇಲೆ ಗದಾಪ್ರಹಾರ ಮಾಡುತ್ತಿರುವುದು ಶೋಚನೀಯ ಎಂದರು.
ಪ್ರತಿಭಟನೆಯಲ್ಲಿ ವಕೀಲ ಎಂ.ಎಸ್.ರಮೇಶ್ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈಶ್ವರಯ್ಯ, ಪದಾಧಿಕಾರಿಗಳಾದ ಬೀರಲಿಂಗಯ್ಯ, ಜಯಮ್ಮ, ಕರಿಯಪ್ಪ,ಭೋಜರಾಜ್, ನೀರ ಈರಣ್ಣ ಸೇರಿದಂತೆ ವಿವಿಧ ಗ್ರಾಮಗಳರೈತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
