ದಾವಣಗೆರೆ:
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮ ವರ್ತನೆಯನ್ನು ಬದಲಿಸಿಕೊಳ್ಳದಿದ್ದರೆ, ನಮಗೂ ಶಕ್ತಿ ಇದ್ದು, ಅವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ರಾಜ್ಯ ಜೆಡಿಎಸ್ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಹೊದಿಗೆರೆ ರಮೇಶ್ ಎಚ್ಚರಿಕೆ ನೀಡಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಮಂತ್ರಿ ಶ್ರೀನಿವಾಸ್ ಅವರನ್ನು ನಾಲಾಯಕ್ ಮಂತ್ರಿ ಎಂದು ಜರೆದಿರುವ ರೇಣುಕಾಚಾರ್ಯ, ತಮ್ಮ ಹಿಂದೆ ಮಾತ್ರ ಜನರಿದ್ದಾರೆ ಎಂಬುದಾಗಿ ಭಾವಿಸಿರುವುದು ಅವರ ಮೂರ್ಖತನದ ಪರಮಾವಧಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಹಿಂದೆ ಯಾರೂ ಇಲ್ಲ ಎಂಬುದಾಗಿ ಭಾವಿಸಿ ಬಾಯಿಗೆ ಬಂದಂತೆ ಮಾತನಾಡಿದರೆ, ಪರಿಣಾಮ ನೆಟ್ಟಗಿರುವುದಿಲ್ಲ. ಜೆಡಿಎಸ್ನಲ್ಲೂ ಜನರಿದ್ದು, ನಮ್ಮಲ್ಲಿಯೂ ಶಕ್ತಿ ಇದೆ. ರೇಣುಕಾಚಾರ್ಯ ಅವರ ವರ್ತನೆಯನ್ನು ಬದಲಿಸಿಕೊಳ್ಳದಿದ್ದರೆ, ಹೊನ್ನಾಳಿಗೆ ಸಚಿವರನ್ನು ಕರೆಸಿ, ಸಭೆ ನಡೆಸಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹೇಳಿದರು.
ಶಾಸಕರಾಗಿರುವ ರೇಣುಕಾಚಾರ್ಯರ ವರ್ತನೆ ಅವರ ಘನತೆಗೆ ತಕ್ಕುದಲ್ಲ. ಒಬ್ಬ ಶಾಸಕರಾಗಿ ಕಾನೂನು ಕೈಗೆತ್ತಿ ಕೊಂಡರೇ, ಜನಸಾಮಾನ್ಯರ ಗತಿ ಏನು? ಎಂದು ಪ್ರಶ್ನಿಸಿದ ಅವರು, ಈಗಾಗಲೇ ಸಮರ್ಪಕ ಮರಳು ಪೂರೈಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅಧಿಕಾರಿಗಳು ಮರಳು ಪೂರೈಸಲು ಕಾರ್ಯನ್ಮುಖರಾಗಿದ್ದಾರೆ. ಆದರೆ, ರೇಣುಕಾಚಾರ್ಯ ಬಿಜೆಪಿಯಲ್ಲಿ ಹಿರೋ ಆಗಲು ಹೋಗಿ ಕಾನೂನು ಕೈಗೆ ಎತ್ತಿಕೊಂಡಿದ್ದು ಅಕ್ಷಮ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಿಗೂ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಕಾಳಜಿ ಇದೆ. ನಿಮಗೂ ಅಭಿವೃದ್ಧಿಯ ಬಗ್ಗೆ ಕಾಳಜಿ ಇದ್ದರೆ, ವ್ಯವಧಾನದಿಂದ ಕೂತು ಆರೋಗ್ಯಕರ ಚರ್ಚೆಯಲ್ಲಿ ಪಾಲ್ಗೊಂಡು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ ಮಾತನಾಡಿ, ರೇಣುಕಾಚಾರ್ಯ ಜಿಲ್ಲಾ ಮಂತ್ರಿಗಳ ಬಗ್ಗೆ ಹೀನಾಯವಾಗಿ ಮಾತನಾಡಿದ್ದಾರೆ. ಜಿಲ್ಲಾ ಸಚಿವರನ್ನು ನಾಲಾಯಕ್ ಮಂತ್ರಿ ಎಂದಿದ್ದಾರೆ. ತಕ್ಷಣವೇ ಈ ಹೇಳಿಕೆಯನ್ನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು.
ರೇಣುಕಾಚಾರ್ಯರ ಮಾರ್ಗದರ್ಶನ ಪಡೆದು ಸರ್ಕಾರ ನಡೆಸಬೇಕಾದ ಅವಶ್ಯಕತೆ ಜೆಡಿಎಸ್ ವರಿಷ್ಠರಿಗೆ ಬಂದಿಲ್ಲ ಎಂದ ಅವರು, ಮರಳು ನೀತಿ ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ. ಇದು ಹೊನ್ನಾಳಿಗೆ ಮಾತ್ರ ಅನ್ವಯಿಸುವುದಿಲ್ಲ. ಹೊನ್ನಾಳಿಯಲ್ಲಿ ತಾಂತ್ರಿಕ ಕಾರಣಗಳಿಂದ ಮರಳು ಕೊಡಲು ವಿಳಂಬ ಆಗಿರಬಹುದಷ್ಟೇ. ಅಷ್ಟಕ್ಕೆ ಕಾನೂನು ಕೈಗೆತ್ತಿಕೊಂಡು ಗೂಂಡಾ ವರ್ತನೆ ಮೆರೆದಿರುವ ರೇಣುಕಾಚಾರ್ಯರ ಕ್ರಮ ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಗಣೇಶ್ ಟಿ. ದಾಸಕರಿಯಪ್ಪ, ಮುಖಂಡರುಗಳಾದ ಟಿ.ಅಸ್ಗರ್, ಬಾತಿ ಶಂಕರ್, ದಾದಾಪೀರ್, ಶೀಲಾ ಕುಮಾರ್, ಮಂಜುನಾಥ್ ಕೆ.ಎಂ, ವೆಂಕಟೇಶ್ ಕಣ್ಣಾಳವರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
