ತುರುವೇಕೆರೆ
ಚಿರತೆಯ ದಾಳಿಗೆ ಮನೆ ಮುಂದೆ ಕಟ್ಟಿದ್ದ ಕುರಿಯೊಂದು ಬಲಿಯಾಗಿರುವ ಘಟನೆ ತಾಲ್ಲೂಕಿನ ಕೆ.ಹೊಸೂರಿನಲ್ಲಿ ಭಾನುವಾರ ಸಂಜೆ ನಡೆದಿದೆ.
ಕೆ.ಹೊಸೂರಿನ ಲಕ್ಷ್ಮಣಗೌಡರು ತಮ್ಮ ಮನೆಯ ಪಕ್ಕದಲ್ಲಿ ಕುರಿಯನ್ನು ಕೊಟ್ಟಿಗೆಯೊಳಗೆ ಕಟ್ಟಲು ಮನೆಯಿಂದ ಹೊರ ಬಂದಾಗ ಕುರಿ ರಕ್ತದ ಮುಡುವಿನಲ್ಲಿದ್ದುದು ಕಂಡು ಬಂದಿದೆ. ಹತ್ತಿರ ಹೋಗಿ ನೋಡಲಾಗಿ ಕಾಡು ಪ್ರಾಣಿಯೊಂದು ಕುರಿಯ ಕತ್ತನ್ನು ಸೀಳಿ ರಕ್ತ ಕುಡಿದು ಸಾಯಿಸಿರುವ ಸಂಗತಿ ಬಯಲಾಯಿತು. ಅಕ್ಕಪಕ್ಕ ನೋಡಲಾಗಿ ಚಿರತೆಯ ಹೆಜ್ಜೆ ಗುರುತುಗಳು ಕಂಡು ಬಂದಿದ್ದರಿಂದ ಚಿರತೆಯ ದಾಳಿಯಿಂದ ಕುರಿ ಮೃತಪಟ್ಟಿದೆ ಎಂದು ದೃಢಪಟ್ಟಿದ್ದು ಈ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ರೈತ ಪ್ರಸನ್ನಕುಮಾರ್ ಮಾತನಾಡಿ, ಗುರುವಾರ ರಾತ್ರಿಯಷ್ಟೇ ನಮ್ಮ ಗ್ರಾಮದ ಹೊರವಲಯದಲ್ಲಿ ಹೋರಿ ಕರುವೊಂದನ್ನು ಚಿರತೆ ದಾಳಿ ಮಾಡಿ ಸಾಯಿಸಿದೆ. ಸದರಿ ವಿಚಾರವನ್ನು ಅರಣ್ಯ ಇಲಾಖಾಧಿಕಾರಿಗಳಿಗೆ ತಿಳಿಸಲಾಗಿದೆ. ಅರಣ್ಯ ಇಲಾಖೆ ಚಿರತೆಯ ಬಂಧನಕ್ಕೆ ಮುಂದಾಗುವುದು ಅಗತ್ಯವಾಗಿದೆ. ಈಗ ಚಿರತೆ ಕುರಿ ಬಲಿ ಪಡೆದಿದೆ. ಚಿರತೆ ಪ್ರಾಣಿಗಳನ್ನು ಅಲ್ಲದೆ ಮನುಷ್ಯರ ಮೇಲೂ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಜನರಿಗೆ ಆತಂಕವಾಗಿದೆ. ಅರಣ್ಯ ಇಲಾಖಾ ಅಧಿಕಾರಿಗಳು ಕೂಡಲೇ ಚಿರತೆಯನ್ನು ಬಂಧಿಸಲು ಬೋನನ್ನು ಇಡಬೇಕೆಂದು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
