ಜೈಪುರ:
ಉಗ್ರರ ವಿರುದ್ಧ ಏಕಾಂಕಿಯಾಗಿ ಹೋರಾಡಲು ಪಾಕಿಸ್ತಾನಕ್ಕೆ ಸಾಧ್ಯವಾಗದಿದ್ದರೆ ಭಾರತ ನೆರವು ನೀಡಲು ಸಿದ್ಧ ಎಂದು ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಮ್ಮು ಮತ್ತು ಕಾಶ್ಮೀರವು ದೇಶದ ಅವಿಭಾಜ್ಯ ಅಂಗವಾಗಿದೆ ಹೊರತು ಅದೊಂದು ಸಮಸ್ಯೆಯಾಗಿಲ್ಲ. ಸಮಸ್ಯೆ ಇರುವುದೇ ಭಯೋತ್ಪಾದನೆಯದ್ದು, ಹಾಗಾಗಿ ಪಾಕಿಸ್ತಾನ ಈ ಕುರಿತು ಚರ್ಚಿಸಬೇಕಿದೆ ಎಂದರು.
ಅಂತೆಯೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ನಾನು ಕೇಳಬಯಸುತ್ತೇನೆ. ಅಮೆರಿಕದ ಸಹಾಯದೊಂದಿಗೆ ಅಫ್ಘಾನಿಸ್ತಾನವು ಉಗ್ರರು ಮತ್ತು ತಾಲಿಬಾನ್ ವಿರುದ್ಧ ಹೋರಾಡಬಹುದೆಂದಾದರೆ, ಭಯೋತ್ಪಾದನೆ ದಮನಕ್ಕೆ ಪಾಕ್ ಒಬ್ಬಂಟಿಯಾಗಿ ಹೋರಾಡಲು ಸಾಧ್ಯವಾಗದಿದ್ದರೆ ಭಾರತದ ಸಹಾಯ ಕೇಳಬಹುದು. ನಾವೂ ಕೂಡ ಪಾಕ್ ನೆರವು ನೀಡಲು ಸಿದ್ಧ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ಕಿಡಿಕಾರಿದ ಅವರು, ರಾಜಕೀಯದಲ್ಲಿ ಅಪನಂಬಿಕೆಯನ್ನು ಹುಟ್ಟುಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಅವರ ಮಾತಿಗೂ, ಕೆಲಸಕ್ಕೂ ಸಂಬಂಧವೇ ಇಲ್ಲ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








