ಶಿರಾ
ಕಳೆದ 20 ವರ್ಷಗಳಿಂದ ರಸ್ತೆ ಬದಿ ಪೆಟ್ಟಗೆ ಅಂಗಡಿ ಇಟ್ಟುಕೊಂಡು ಸಣ್ಣ ಪುಟ್ಟ ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಅನಧಿಕೃತ ನೆಪ ಹೇಳಿ ಪೊಲೀಸ್ ಭದ್ರತೆ ಬಳಸಿ ಅಂಗಡಿ ಮತ್ತು ತಾತ್ಕಾಲಿಕ ಮನೆಗಳನ್ನು ನೆಲಸಮ ಮಾಡಿ ಹತ್ತಾರು ಬಡ ಕುಟುಂಬಗಳನ್ನು ಲೋಕೋಪಯೋಗಿ ಇಲಾಖೆಯು ಬೀದಿಗೆ ತಳ್ಳಿದ ಘಟನೆ ನಡೆದಿದೆ.
ಶಿರಾ-ಅಮರಾಪುರ ರಸ್ತೆಯ ಉದ್ದರಾಮನಹಳ್ಳಿ ಕ್ರಾಸ್ ರಸ್ತೆಬದಿಯಲ್ಲಿ ಹತ್ತಾರು ವರ್ಷಗಳಿಂದ ಟೀ ಅಂಗಡಿ, ಚಿಲ್ಲರೆ ಅಂಗಡಿ, ಹೋಟಲ್ ಸೇರಿದಂತೆ 15 ಕುಟುಂಬಗಳು ಈ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವು. ಸರ್ವೆ ನಂ499/3ರಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ 08 ಗುಂಟೆ ಜಾಗದಲ್ಲಿ ಅನಧಿಕೃತ ಪೆಟ್ಟಗೆ ಅಂಗಡಿಗಳು ಇದ್ದ ಕಾರಣದ ಜೊತೆಗೆ ರಸ್ತೆ ಆಕ್ರಮಿಸಿಕೊಂಡಿದ್ದಾರೆ ಎಂದು ಸ್ಥಳೀಯ ವ್ಯಕ್ತಿ ಸಂಜೀವಯ್ಯ ಎಂಬುವರು ಲೋಕಾಯುಕ್ತದಲ್ಲಿ ದೂರ ದಾಖಲಿಸಿದ ಕಾರಣ ಹಾಗೂ ಈ ಹಿಂದೆ ನೋಟಿಸ್ ನೀಡಿದ್ದರೂ ತೆರವು ಮಾಡದ ಕಾರಣ ಶುಕ್ರವಾರ ಬೆಳಿಗ್ಗೆ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಆಭಿಯಂತರ ಷಣ್ಮುಖಪ್ಪ ಹಾಗೂ ಡಿವೈಎಸ್ಪಿ ವೆಂಕಟಸ್ವಾಮಿ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ನಡೆಸಿ ಅಂಗಡಿಗಳು ಮತ್ತು ತಾತ್ಕಾಲಿಕ ಮನೆಗಳನ್ನು ತೆರವು ಪೊಲೀಸ್ ಭದ್ರತೆಯಲ್ಲಿ ತೆರವು ಮಾಡಿಸಲಾಯಿತು.
ಸೂರು ಕಳೆದುಕೊಂಡು ಬೀದಿಪಾಲದ ಸುಂಕಮ್ಮ: ಹತ್ತಾರು ವರ್ಷಗಳಿಂದ ಇದೇ ಜಾಗದಲ್ಲಿ ಮನೆ ಕಟ್ಟಿಕೊಂಡು ಮಕ್ಕಳ ಆಟಿಕೆ ಸಾಮಾನು, ಪೀಪಿ, ಬಳೆ ಮಾರಿಕೊಂಡು ಸಂಸಾರ ಸಾಗಿಸುತ್ತಿದ್ದ ಸುಂಕಮ್ಮ, ಊರಲ್ಲಿ ಮನೆ ಇಲ್ಲದ ಕಾರಣ ಸ್ಪಲ್ಪ ಸಮಯ ಕೊಡಿ ತೆರವು ಮಾಡುತ್ತೇನೆ ಎಂದರೂ ಕೇಳದೆ ಜೆಸಿಬಿ ಯಂತ್ರ ಬಳಸಿ ಮನೆ ನೆಲಸಮ ಮಾಡಿದ ಕಾರಣ ದಿನ ಬಳಕೆ ಸಾಮಾನು, ಸಾಮಗ್ರಿಗಳು ಬೀದಿಯಲ್ಲಿ ಬಿಸಾಡುತ್ತಿದ್ದುದನ್ನು ಕಂಡ ಜನ ಸರ್ಕಾರ ಬೀದಿ ಬದಿ ವ್ಯಾಪಾರಿಗಳಿಗೆ ಬಡವರ ಬಂಧು ಯೋಜನೆ ಜಾರಿಗೆ ತಂದಿದೆ. ಆದರೆ ಇಲ್ಲಿ ಬೀದಿಯಲ್ಲಿ ವ್ಯಾಪಾರ ಮಾಡುವಂತವರನ್ನೆ ಬೀದಿ ತಳ್ಳಿದೆ ಎಂದು ಸರ್ಕಾರಕ್ಕೆ ಹಿಡಿ ಶಾಪ ಹಾಕುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಪರಿಸರ ಪ್ರೇಮಿ ವೆಂಕಟಸ್ವಾಮಿ: ತೆರವು ಕಾರ್ಯಾಚರಣೆ ವೇಳೆ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಷಣ್ಮುಖಪ್ಪ ಅನಧಿಕೃತ ಜಾಗದಲ್ಲಿ ಬೆಳೆದಿರುವ ಹತ್ತಾರು ಮರಗಳನ್ನು ಜೆಸಿಬಿ ಬಳಸಿ ತೆರವು ಮಾಡುವಂತೆ ಸೂಚಿಸಿದರು. ಒಂದು ಮರ ನೆಲಕ್ಕುರಳಿದನ್ನು ಗಮನಿಸಿದ ಡಿವೈಎಸ್ಪಿ ವೆಂಕಟಸ್ವಾಮಿ ತಕ್ಷಣ ಮರ ತೆರವು ಮಾಡದಂತೆ ತಡೆದರು. ಕೇವಲ ಅನಧಿಕೃತ ಪೆಟ್ಟಿಗೆ ಅಂಗಡಿ ತೆರವು ಮಾಡಿ ಎಂದು ಲೋಕಾಯುಕ್ತ ಆದೇಶ ಮಾಡಿದ್ದಾರೆ. ಆದರೆ ಮರ ಕಡಿದು ಮತ್ತೆ ಬೆಳಸಲು ಎಷ್ಟು ಕಷ್ಟಪಡಬೇಕು ಮರಗಳನ್ನು ತೆರವು ಮಾಡಬೇಡಿ ಎಂಬ ಡಿವೈಎಸ್ಪಿ ಕಾಳಜಿ ಪರಿಸರ ಪ್ರೇಮ ಪೊಲೀಸ್ನವರಿಗೂ ಇದೆ ಎಂಬುದನ್ನು ಸಾಬೀತುಪಡಿಸಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
