ಉಳ್ಳಾಲ:
ಸಮುದ್ರಕ್ಕಿಳಿದು ಮೊಬೈಲ್ನಲ್ಲಿ ಸೆಲ್ಫಿ ತೆಗೆಯುವ ಯತ್ನದಲ್ಲಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ನಾಲ್ಕು ವರ್ಷದ ಮಗುವೊಂದು ನೀರು ಪಾಲಾಗಿರುವ ದುರ್ಘಟನೆ ನಡೆದಿದೆ.
ಸಮುದ್ರಪಾಲಾದ ಬಾಲಕಿಯನ್ನು ಮೈತ್ರಿ ಕೇಟ್ಕರ್(5) ಎಂದು ಗುರುತಿಸಲಾಗಿದೆ. ಸೋಮೇಶ್ವರ ಕಡಲ ಕಿನಾರೆಗೆ ವಿಹಾರಕ್ಕೆ ಬಂದಿದ್ದ ಬೆಂಗಳೂರು ಮೂಲದ ಕುಟುಂಬವೊಂದು ಸಮುದ್ರದ ಅಲೆಗಳಿಗೆ ಸಿಲುಕಿದ್ದು, ಘಟನೆ ಇಂದು(ಸೋಮವಾರ) ಮಧ್ಯಾಹ್ನ ನಡೆದಿದೆ.
ಪ್ರವಾಸಿಗರಾದ ಬೆಂಗಳೂರು ಬನಶಂಕರಿ ನಿವಾಸಿ ಚಿಂತಾಮಣಿ ಕೇಟ್ಕರ್ ಮತ್ತು ಶ್ರದ್ಧಾ ಕೇಟ್ಕರ್ ದಂಪತಿ ಇಬ್ಬರು ಪುತ್ರಿಯರೊಂದಿಗೆ ಇಂದು ಬೆಳಗ್ಗೆ 10:30ರ ಸುಮಾರಿಗೆ ಸೋಮೇಶ್ವರ ಕಡಲ ಕಿನಾರಕ್ಕೆ ವಿಹಾರ ಆಗಮಿಸಿದ್ದರು. ಈ ಸಂದರ್ಭ ಇವರೆಲ್ಲರೂ ಸಮುದ್ರಕ್ಕಿಳಿದು ಮೊಬೈಲ್ ಫೋನ್ನಲ್ಲಿ ಸೆಲ್ಫಿ ತೆಗೆಯುತ್ತಿದ್ದರೆನ್ನಲಾಗಿದೆ.
ಆಗ ಇವರೆಲ್ಲರೂ ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿದ್ದಾರೆ. ಕೂಡಲೇ ಅವರನ್ನು ಲೈಫ್ಗಾರ್ಡ್ ಅಶೋಕ್ ರಕ್ಷಿಸಿದರು. ಬಳಿಕ ಅಸ್ವಸ್ಥಗೊಂಡಿದ್ದ ಎಲ್ಲರನ್ನೂ ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಬಾಲಕಿ ಮೈತ್ರಿ ಕೇಟ್ಕರ್ ಮೃತಪಟ್ಟಿದ್ದಾಳೆ.
ಬದುಕುಳಿದಿರುವ ದಂಪತಿ ಹಾಗೂ ಹೆಣ್ಣು ಮಗುವನ್ನು ಸದ್ಯ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
