ದಾವಣಗೆರೆ:
ತೃತೀಯ ಲಿಂಗಿಗಳಿಗೆ ಮಾರಕವಾಗಿರುವ ಟ್ರಾನ್ಸ್ಜೆಂಡರ್ ಪರ್ಸನ್ಸ್ ಮಸೂದೆ ಹಾಗೂ ಟ್ರಾಫಿಕಿಂಗ್ ಆಫ್ ಪರ್ಸನ್ಸ್ ಮಸೂದೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ, ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಮತ್ತು ಅಭಯ ಸ್ಪಂದನ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಸಂಜೆ ಮಂಗಳಮುಖಿಯರು ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಲೈಂಗಿಕ ಅಲ್ಪಸಂಖ್ಯಾತರು, ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಘೋಷಣೆ ಕೂಗುವ ಮೂಲಕ ಆಗ್ರಹಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಈ ಎರಡೂ ಮಸೂದೆಗಳು ರಾಜ್ಯಸಭೆ ಎದುರು ಮಂಡನೆಯಾಗುವುದು ಮಾತ್ರ ಬಾಕಿ ಇದೆ. ಈ ಎರಡೂ ಮಸೂದೆಗಳು ನಮ್ಮ ಸಮುದಾಯವನ್ನು ಮೂಲಭೂತವಾಗಿ ಅಪರಾಧೀಕರಿಸುವ ಪ್ರವೃತ್ತಿಯಿಂದ ಪ್ರೇರಿತವಾಗಿವೆ. ಸರ್ಕಾರವು ಸಮಾಜ ಕಲ್ಯಾಣವಾದಿ, ಅಭಿವೃದ್ಧಿವಾದಿ ಕಾರ್ಯಕ್ರಮಗಳ ಹಮ್ಮಿಕೊಳ್ಳುವ ಬದಲು ಬಡವರು, ಕಡೆಗಣಿಸಲ್ಪಟ್ಟವರು, ಲೈಂಗಿಕ ಕಾರ್ಯಕರ್ತರು, ಜೀತದಾಳುಗಳು, ಗುತ್ತಿಗೆ ಕಾರ್ಮಿಕರು, ಮನೆ ಕೆಲಸದವರು, ಕಟ್ಟಡ ಕಾರ್ಮಿಕರು, ಲಿಂಗ ಪರಿವರ್ತಿತ ವ್ಯಕ್ತಿಗಳನ್ನು ಸೆರೆ ಹಿಡಿಯುವತ್ತ ಗಮನಹರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಟ್ರಾಫಿಕಿಂಗ್ ಮಸೂದೆಯು ಅಪಹರಣಕ್ಕೊಳಗಾದ ಸಂತ್ರಸ್ತರನ್ನು ಲೈಂಗಿಕ ಕಿರುಕುಳ, ಜೀತ ಪದ್ದತಿ, ಗುತ್ತಿಗೆ ನೌಕರಿ, ಅಂತರಾಜ್ಯ ವಲಸಿಗ ಕೆಲಸಗಳಿಗಾಗಿ ಶೋಷಣೆಗೊಳಪಡಿಸುವುದನ್ನು ದಂಡನಾರ್ಹಗೊಳಿಸುವ ಈಗಾಗಲೇ ಅಸ್ತಿತ್ವದಲ್ಲಿರುವ ಕಾನೂನಿನ ವಿಷಯದಲ್ಲಿ ಅಸ್ಪಷ್ಟವಾಗಿದೆ. ಮಾನವಾಧಿಕಾರಗಳು ಮತ್ತು ಸಂತ್ರಸ್ತ-ಕೇಂದ್ರಿತ ವಿಧಾನಗಳೆಡೆಗೆ ಗಮನಹರಿಸುವ ಅಂತಾರಾಷ್ಟ್ರೀಯ ಕಾನೂನು ನಿಯಮಗಳಿಗೆ ವಿರುದ್ಧವಾಗಿವೆ. ಆದ್ದರಿಂದ ಈ ಎರಡೂ ಮಸೂದೆಗಳನ್ನು ರಾಜ್ಯ ಸಭೆಯಲ್ಲಿ ಮಂಡಿಸದೇ, ರದ್ದು ಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಭಯ ಸ್ಪಂದನ ಅಧ್ಯಕ್ಷ ದಾದಾಪೀರ್, ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಪ್ರಧಾನ ಕಾರ್ಯದರ್ಶಿ ಅಕ್ಷತಾ, ಮಲ್ಲಪ್ಪ ಕುಂಬಾರ್, ಗುರು ಸವಣೂರು ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
