ತುರುವೇಕೆರೆ
ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯಲ್ಲಿನ ಹಲವು ಫಲಾನುಭವಿ ರೈತರುಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ, ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯಲ್ಲಿ ಹಲವು ಗೊಂದಲಗಳಿದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಈ ಬ್ಯಾಂಕ್ನಲ್ಲಿ ಸುಮಾರು 360 ರೈತರು ಸಾಲ ಪಡೆದಿದ್ದಾರೆ. ಆದರೆ ಕೇವಲ 110 ರೈತರ ಹೆಸರನ್ನು ಮಾತ್ರ ನೋಟೀಸ್ ಬೋರ್ಡ್ನಲ್ಲಿ ಹಾಕಲಾಗಿದೆ. ನಮ್ಮ ಸಾಲಮನ್ನಾ ಆಗಿಲ್ಲ ಎಂದು ದಿನ ನಿತ್ಯ ಬ್ಯಾಂಕ್ಗಳಿಗೆ ರೈತರು ಅಲೆಯುವಂತಾಗಿದೆ.
ಬ್ಯಾಂಕ್ ಅಧಿಕಾರಿಗಳನ್ನು ಕೇಳಿದರೆ ತಹಸೀಲ್ದಾರ್ ಕೇಳಿ ಎಂದು, ತಹಸೀಲ್ದಾರ್ ಕೇಳಿದರೆ ಬ್ಯಾಂಕ್ನವರು ಎಷ್ಟು ರೈತರು ಸಾಲ ಪಡೆದಿದ್ದಾರೆ ಎಷ್ಟು ರೈತರು ಮನ್ನಾ ಫಲಾನುಭವಿಗಳಾಗಿದ್ದಾರೆ ಎಂದು ನೀಡಬೇಕು ಎಂದು ತಿಳಿಸಿದ್ದು, ರೈತರ ಗೊಂದಲಕ್ಕೆ ಕಾರಣವಾಗಿದೆ. ಲೀಡ್ ಬ್ಯಾಂಕ್ ಅಧಿಕಾರಿ ಇದುವರೆವಿಗೂ ನಮ್ಮ ತಾಲ್ಲೂಕಿಗೆ ಆಗಮಿಸಿಲ್ಲ. ರೈತರ ಬಗ್ಗೆ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಲೀಡ್ ಬ್ಯಾಂಕ್ ಅಧಿಕಾರಿ ಕೂಡಲೇ ಆಗಮಿಸಿ ಈ ಗೊಂದಲವನ್ನು ನಿವಾರಿಸಬೇಕೆಂದು, ಇಲ್ಲದಿದ್ದರೆ ಬ್ಯಾಂಕ್ ಮುಂದೆ ಸಾವಿರಾರು ರೈತರೊಂದಿಗೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಪಟ್ಟಣದ ಸ್ಟೇಟ್ ಬ್ಯಾಂಕ್ನಲ್ಲಿ 2011ರಲ್ಲಿ 40 ಸಾವಿರ ಸಾಲ ಪಡೆದಿದ್ದೆವು. ರಾಜ್ಯ ಸರ್ಕಾರ 2009 ರಿಂದ ಸಾಲ ಮನ್ನಾ ಮಾಡಲಾಗಿದ್ದು, ಆದರೆ ಸಾಲ ಮನ್ನಾ ಪಟ್ಟಿಯಲ್ಲಿ ನಮ್ಮ ಹೆಸರು ಇಲ್ಲದಿದ್ದರಿಂದ ಗೊಂದಲಕ್ಕೆ ಕಾರಣವಾಗಿದೆ. ಬ್ಯಾಂಕ್ನಲ್ಲಿ ಕೇಳಿದರೂ ಸರಿಯಾದ ಉತ್ತರ ಸಿಗುತ್ತಿಲ್ಲ ಎಂದು ರೈತ ಬೊಮ್ಮೆನಹಳ್ಳಿಲೋಕೇಶ್ ತಿಳಿಸಿದರು.
ಇದೇ ರೀತಿ ರಾಮಕೃಷ್ಣಯ್ಯ, ಮಂಜುನಾಥ್, ಗಂಗಣ್ಣ , ಎನ್.ಆರ್.ರಾಜಣ್ಣ , ನಂಜುಂಡಪ್ಪ, ಯೋಗೀಶ್, ನಾಗರಾಜು ನಾವುಗಳು 2009ರ ಮೇಲೆ ಸಾಲ ಪಡೆದಿದ್ದರೂ ನಮ್ಮ ಸಾಲ ಮನ್ನವಾಗಿಲ್ಲ ಎಂದು ದೂರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
