ಹರಪನಹಳ್ಳಿ:
ಪಟ್ಟಣದಲ್ಲಿ ಬುಧವಾರ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಉಪ ನೋಂದಣಾಧಿಕಾರಿ ಕಚೇರಿಗೆ ಭೂನೋಂದಣಿ ಮಾಡಿಸಲು ಬಂದ ರೈತರಿಗೆ ಸಾಕಷ್ಟು ತೊಂದರೆ ಉಂಟಾಯಿತು.
ಬೆಳಗ್ಗೆಯೇ ಕಚೇರಿಗೆ ಬಂದಿದ್ದ ರೈತರು ವಿದ್ಯುತ್ ಬರುತ್ತದೆ ಎಂದು ಸಾಕಷ್ಟು ಸಮಯ ಕಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ವೇಳೆ ವಿದ್ಯುತ್ ಸಂಪರ್ಕಕ್ಕಾಗಿ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ರೈತರು ಒತ್ತಾಯಿಸಿದರು. ಅಲ್ಲದೇ ಅಧಿಕಾರಿಗಳ ವಿರುದ್ಧ ರೈತರು ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.
ರಾಜ್ಯ ಹಸಿರು ಸೇನೆಯ (ಮಂಜುನಾಥ ಬಣ) ಜಿಲ್ಲಾಧ್ಯಕ್ಷ ಅರಸನಾಳ ಸಿದ್ದಪ್ಪ ಮಾತನಾಡಿ’ ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯ ಇರುವುದರ ಬಗ್ಗೆ ಮಾಹಿತಿ ಇದ್ದರೂ ಉಪ ನೋಂದಣಿ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ.
ಕಚೇರಿಯಲ್ಲಿ ಜನರೇಟರ್ ಇದ್ದರೂ ಅದರ ಬಳಕೆ ಮಾಡಲಿಲ್ಲ. ಇದರಿಂದ ತಾಲ್ಲೂಕಿನ ಕೊನೆ ಭಾಗದಿಂದ ಬಂದ ರೈತರ ಕೆಲಸಕ್ಕೆ ಅಡ್ಡಿಯಾಗಿದೆ’ ಎಂದು ದೂರಿದರು.
ಉಪ ನೋಂದಣಿ ಅಧಿಕಾರಿ ಮಾತನಾಡಿ ‘ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ನೋಂದಣಿ ಕೆಲಸಕ್ಕೆ ಅಡಚಣೆ ಆಗಿದೆ. ಕಚೇರಿಯಲ್ಲಿರುವ ಜನರೇಟರ್ ಪದೇ ಪದೇ ರಿಪೇರಿಗೆ ಬರುತ್ತಿದೆ. ಹೀಗಾಗಿ ಎರಡು ಗಂಟೆ ಅವಧಿ ಹೆಚ್ಚು ಕೆಲಸ ಮಾಡಿ ರೈತರಿಗೆ ಸ್ಪಂದಿಸಲಾಗುವುದು’ ಎಂದು ತಿಳಸಿದರು.
ಈ ವೇಳೆ ರೈತ ಮುಖಂಡರಾದ ಅಣಜಿಗೆರೆ ನಂದಪ್ಪ, ರಾಮನಗೌಡ, ಜಗದೀಶ್, ಚಿಕ್ಕಪ್ಪ, ಕಂಭಟ್ರಹಳ್ಳಿ ಹುಚ್ಚಪ್ಪ, ಅಣ್ಣಪ್ಪ ದೇವೇಂದ್ರಪ್ಪ, ನಾಗರಾಜ, ಹನುಮಂತಪ್ಪ, ಬಸವರಾಜ, ಹನುಮನಗೌಡ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
