ಸೌಲಬ್ಯ ಪಡೆಯಲು ಸಂಘಟನೆ ಅನಿವಾರ್ಯ;ತಿಪ್ಪಾರೆಡ್ಡಿ

ಚಿತ್ರದುರ್ಗ:

       ಸಂಘಟನೆ ಮೂಲಕ ಸರ್ಕಾರದಿಂದ ದೊರಕುವ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕುಂಚಿಗ ವೀರಶೈವ ಸಮಾಜದವರಿಗೆ ಕರೆ ನೀಡಿದರು.ತರಳಬಾಳು ನಗರ ಒಂದನೆ ಕ್ರಾಸ್‍ನಲ್ಲಿ ಶನಿವಾರ ಕುಂಚಿಗ ವೀರಶೈವ ಸಮಾಜದ ವಿದ್ಯಾರ್ಥಿನಿಲಯ ಹಾಗೂ ವಾಣಿಜ್ಯ ಮಳಿಗೆ ಉದ್ಘಾಟಿಸಿ ಮಾತನಾಡಿದರು.

       ವಿದ್ಯಾರ್ಥಿನಿಲಯದ ಜೊತೆಗೆ ವಾಣಿಜ್ಯ ಮಳಿಗೆಗಳನ್ನು ಕಟ್ಟಿಕೊಂಡರೆ ನಿಮ್ಮ ಸಮಾಜದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರದಿಂದಲೇ ಶಿಕ್ಷಣಕ್ಕಾಗಿ ಎಲ್ಲಾ ಜಾತಿಯ ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಸೌಲಭ್ಯಗಳಿರುವುದರಿಂದ ನಿಮ್ಮ ವಿದ್ಯಾರ್ಥಿನಿಲಯದಲ್ಲಿಯೆ ಇದ್ದುಕೊಂಡು ಓದುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದರೂ ಆಗಬಹುದು ಎಂದು ಹೇಳಿದರು.

        ಸಂಘಟನೆ ಎನ್ನುವುದು ಮತ್ತೊಂದು ಜಾತಿಯವರ ವಿರುದ್ದವಲ್ಲ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕಾಗಿಯಾದರೂ ಸಂಘಟನೆಯಾಗಬೇಕು. ಪ್ರಧಾನಿ ನರೇಂದ್ರಮೋದಿರವರು ಚಿತ್ರದುರ್ಗವನ್ನು ಅಮೃತ್‍ಸಿಟಿಗೆ ಆಯ್ಕೆ ಮಾಡಿಕೊಂಡು 140 ಕೋಟಿ ರೂ.ಬಿಡುಗಡೆಗೊಳಿಸಿದ್ದಾರೆ. ಅದರಲ್ಲಿ 112 ಕೋಟಿ ರೂ.ಗಳಲ್ಲಿ ಮತ್ತೊಂದು ಪೈಪ್‍ಲೈನ್ ಅಳವಡಿಸಿ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ನನ್ನ ಅನುದಾನದಿಂದಲೂ ಹಣ ನೀಡುತ್ತೇನೆ ಎಂದು ಭರವಸೆಕೊಟ್ಟರು.

       ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನ ಮಾಡಿದ್ದೇವೆಂದು ಹೇಳುತ್ತಿದ್ದಾರೆ. ಅದ್ಯಾವ ರೈತರ ಸಾಲ ಮನ್ನ ಆಗಿದೆಯೋ ಏನೋ ನನಗಂತೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

        ಸಮಾರಂಭದ ಸಾನಿಧ್ಯ ವಹಿಸಿದ್ದು ಡಾ.ಶಿವಮೂರ್ತಿ ಶರಣರು ಆಶೀರ್ವಚನ ನೀಡಿ ಎಲ್ಲಾ ದಾನಕ್ಕಿಂತಲೂ ಸ್ಥಳದಾನ ಅಮೂಲ್ಯವಾದುದು. ಭಾರತದಲ್ಲಿ ಅನೇಕ ಪರಂಪರೆಗಳಿವೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಇವರುಗಳಿಗೆ ಜನ್ಮತಃ ಸ್ಥಾನಮಾನ ಕೊಡಲಾಗಿದೆ. ಶೂದ್ರರಿಗೆ ಯಾವ ಸ್ಥಾನಮಾನವೂ ಇನ್ನು ಸಿಕ್ಕಿಲ್ಲ. ಇತಿಹಾಸ ಕಟ್ಟಬೇಕಾದವರು ಮೊದಲು ಇತಿಹಾಸವನ್ನು ತಿಳಿದುಕೊಳ್ಳಬೇಕು. ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣ ಶೂದ್ರರ ಕುರಿತು ಗಂಭೀರವಾಗಿ ಚಿಂತನೆ ನಡೆಸಿದ್ದರು ಎಂದು ಹೇಳಿದರು.

          ತಿರಸ್ಕತರಾದವರ ಕಡೆ ಬಸವಣ್ಣ ಗಮನಕೊಟ್ಟು ಅನುಭವ ಮಂಟಪದ ಮೂಲಕ ಎಲ್ಲರನ್ನು ಒಂದುಗೂಡಿಸುವ ಕೆಲಸ ಮಾಡಿದರು. ಗಾಂಧಿ ಕೊಡಿಸಿದ ಸ್ವಾತಂತ್ರ ಕೆಲವರಿಗೆ ಮಾತ್ರ ಸಿಕ್ಕಿದೆ. ದಲಿತರಿಗೆ ಶೂದ್ರರಿಗೆ ಇನ್ನು ಸಿಕ್ಕಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. 900 ವರ್ಷಗಳ ಹಿಂದೆಯ ಶೂದ್ರರಿಗೆ ಗಟ್ಟಿಯಾದ ಧಾರ್ಮಿಕ ತಳಹದಿ ಹಾಕಿಕೊಟ್ಟವರು ಬಸವಣ್ಣನವರು ಎನ್ನುವುದನ್ನು ಯಾರು ಮರೆಯುವಂತಿಲ್ಲ ಎಂದು ಸ್ಮರಿಸಿದರು.

       ಲಿಂಗಾಯಿತರಿಗೆಲ್ಲಾ ಚೈತನ್ಯವಾಗಿ ಬಸವಣ್ಣ ನಿಲ್ಲುತ್ತಾರೆ. ಜಗತ್ತಿನ ಆಗುಹೋಗುಗಳಿಗೆ ಯಾರು ಸ್ಪಂದಿಸುತ್ತಾರೋ ಅವರು ಲೋಕಾಯುತರಾಗುತ್ತಾರೆ.ಜಾತಿಯೊಳಗಿದ್ದುಕೊಂಡು ಜಾತಿಯನ್ನು ಮೀರುವವರೆ ಲೋಕಾಯುತರು. ಕುಂಚಿಗ ವೀರಶೈವ ಸಮಾಜಕ್ಕೆ ನಿವೇಶನ ಸ್ಥಾನಮಾನ ನೀಡುವ ಸಾಮಾಜಿಕ ಹೊಣೆಗಾರಿಕೆ ಮುರುಘಾಮಠದ ಮೇಲಿದೆ. ಇನ್ನು ಮುಂದೆ ನಾನು ನಿಮ್ಮ ಸಮಾಜಕ್ಕೆ ಲಕ್ಷ ಕೊಡುವುದಿಲ್ಲ. ಅದಕ್ಕೆ ಬದಲಾಗಿ ಲಕ್ಷ್ಯ ಕೊಡುತ್ತೇನೆಂದು ಹಾಸ್ಯ ಚಟಾಕಿ ಹಾರಿಸಿದರು.

        ಅಕ್ಷರ ಸಂಸ್ಕತಿಗೆ ಒಳಗಾಗುವ ಸಮಾಜಕ್ಕೆ ಉಜ್ವಲ ಭವಿಷ್ಯವಿದೆ. ಹಾಗಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿ ಬುದ್ದಿವಂತರನ್ನಾಗಿ ಮಾಡಿ ಎಂದು ಕುಂಚಿಗ ವೀರಶೈವ ಸಮಾಜಕ್ಕೆ ಕರೆ ನೀಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಂಚಿಗ ವೀರಶೈವ ಸಮಾಜದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಂ.ಬಿ.ತಿಪ್ಪೇರುದ್ರಪ್ಪ ಮಾತನಾಡಿ ವಿದ್ಯಾರ್ಥಿನಿಲಯದ ಕಟ್ಟಡವನ್ನು ಜರೂರಾಗಿ ಮುಗಿಸಿ ವಿದ್ಯಾರ್ಥಿಗಳಿಗೆ ನೀಡಬೇಕಾಗಿರುವುದರಿಂದ ಸಮಾಜದ ಪ್ರತಿಯೊಬ್ಬರು ಕೈಜೋಡಿಸಬೇಕು. ಧಾರಾಳತನ ಕಡಿಮೆಯಾಗಿದೆ. ಬಿಗಿಯಾದ ಮನಸ್ಸನ್ನು ಸಡಿಲಿಸಿದರೆ ಸಮಾಜದ ಗೌರವ ಘನತೆ ಹೆಚ್ಚಲಿದೆ ಎಂದು ಸಮಾಜದವರಲ್ಲಿ ಮನವಿ ಮಾಡಿದರು.

       ಮಾಜಿ ಶಾಸಕರುಗಳಾದ ಜಿ.ಎಸ್.ಪರಮೇಶ್ವರಪ್ಪ, ಪಿ.ರಮೇಶ್, ಟಿ.ಹೆಚ್.ಬಸವರಾಜ್, ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪರಮೇಶ್ವರಪ್ಪ, ಕುಂಚಿಗ ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿ ಎಲ್.ಬಿ.ರಾಜಶೇಖರ್ ಇವರುಗಳು ಮಾತನಾಡಿದರು.
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಜಿ.ಪಂ.ಸದಸ್ಯೆ ಚೇತನ, ಜಯಪದ್ಮ ಬಸ್ ಮಾಲೀಕರಾದ ಶಿವಪ್ರಕಾಶ್ ವೇದಿಕೆಯಲ್ಲಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link