ಸ್ಲಂ ನಿವಾಸಿಗಳಿಗೆ ಸೌಲಭ್ಯ ಕಲ್ಪಿಸದ ಸರ್ಕಾರ

ದಾವಣಗೆರೆ

       ಸ್ಲಂ ನಿವಾಸಿಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ಈ ವರೆಗೂ ಆಡಳಿತ ನಡೆಸಿರುವ ಎಲ್ಲಾ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಆರೋಪಿಸಿದ್ದಾರೆ.ನಗರದ ರೋಟರಿ ಬಾಲಭವನದಲ್ಲಿ ಮಂಗಳವಾರ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಇವುಗಳ ಸಂಯುಕ್ತಾಶ್ರಯದಲ್ಲಿ ವಿವಿಧ ವಸತಿ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳ ಕುರಿತ ಮಾಹಿತಿ ಹಾಗೂ ಔಪಚಾರಿಕ ಮತ್ತು ಅನೌಪಚಾರಿಕ ವಲಯಗಳ ಅನುಭವ ಹಾಗೂ ಆರ್ಥಿಕ ಕೊಡುಗೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

      ದೇಶದ ಆರ್ಥಿಕ ಚಲನೆಯ ಶಕ್ತಿಯಾಗಿರುವ ಕೊಳಗೇರಿ ನಿವಾಸಿಗಳನ್ನು ಅನಾಗರೀಕರಂತೆ ಕಾಣಲಾಗುತ್ತಿದೆ. ಅಲ್ಲದೆ, ಇವರಿಗೆ ಕನಿಷ್ಠ ಸೌಲಭ್ಯಗಳನ್ನು ಸರ್ಕಾರಗಳು ಖಾತ್ರಿ ಮಾಡುತ್ತಿಲ್ಲ. 1970ರಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಆರಂಭವಾದರೂ, 1975ರಲ್ಲಿ ಅಧಿಕೃತವಾಗಿ ಸ್ಲಂಗಳನ್ನು ಘೋಷಿಸಿದರೂ ಸಹ ಈ ವರೆಗೂ ಸರ್ಕಾರ ಇವರಿಗೆ ಹಕ್ಕುಪತ್ರ ನೀಡಿಲ್ಲ ಎಂದು ಆರೋಪಿಸಿದರು.

       ದೇಶದ 40 ಕೋಟಿ ಕುಟುಂಬಗಳಿಗೆ ಸ್ವಂತ ಮನೆಗಳಿಲ್ಲ. ಆದರೆ, 2022ರ ವೇಳೆಗೆ ಸರ್ವರಿಗೂ ಸೂರು ಕಲ್ಪಿಸುವುದಾಗಿ ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಆ ಹೊತ್ತಿಗೆ ಕೇವಲ 2 ಕೋಟಿ ಮನೆ ನಿರ್ಮಿಸುವ ಗುರಿ ಹೊಂದಿದ್ದು, ಇದರಿಂದ ಹೇಗೆ ಸರ್ವರಿಗೂ ಸೂರು ಕಲ್ಪಿಸಲು ಸಾಧ್ಯ ಎಂದು ಪ್ರಶ್ನಿಸಿದರು.

        ಔಪಚಾರಿಕ ವಲಯದಲ್ಲಿ ಕೆಲಸದ ಭದ್ರತೆಯ ಜತೆಗೆ ಎಲ್ಲ ರೀತಿಯ ಸೌಲಭ್ಯಗಳು ಇರಲಿವೆ. ಆದರೆ, ಅನೌಪಚಾರಿಕ ವಲಯದಲ್ಲಿ ಕೆಲಸದ ಭದ್ರತೆ, ಕನಿಷ್ಠ ಕೂಲಿ, ಕನಿಷ್ಠ ಸೌಲಭ್ಯವೂ ಇರುವುದಿಲ್ಲ. ಕೊಳಗೇರಿಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಲ್ಲಿ ಶೇ.82 ರಷ್ಟು ಜನರು ಬೀದಿ ವ್ಯಾಪಾರ, ಚಿಂದಿ ಆಯುವಿಕೆ, ಕಟ್ಟಡ ಕಾರ್ಮಿಕರು, ಮನೆಗೆಲಸ ಕಾರ್ಮಿಕರು, ಹಮಾಲರು, ಆಟೋ ಚಾಲಕರು, ಸ್ವಚ್ಛತಾ ಕಾರ್ಮಿಕರು, ನಾನ್ ಕ್ಲಿನಿಕ್ ಸಿಬ್ಬಂದಿಗಳು, ಕಸೂತಿ ಮಾಡುವವರಿಗೆ ಹೀಗೆ ಹಲವು ಅಸಂಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಮಾಹಿತಿ ನೀಡಿದರು.

       ಈ ಅಸಂಘಟಿತ ಕಾರ್ಮಿಕರು ದೇಶದ ಆರ್ಥಿಕ ಚಲನೆಯ ಶಕ್ತಿ ಬಳಕೆಯಾಗುತ್ತಿದ್ದು, ಜಿಡಿಪಿಗೆ ಶೇ.50 ರಷ್ಟು ಕೊಡುಗೆ ನೀಡುತ್ತಿದ್ದಾರೆ. ಔಪಚಾರಿಕ ವಲಯದಲ್ಲಿರುವವರು ಕೇವಲ ಶೇ.8 ರಷ್ಟು ದೇಶಕ್ಕೆ ಆರ್ಥಿಕ ಕೊಡುಗೆ ನೀಡುತ್ತಿದ್ದರೆ, ಅನೌಪಚಾರಿಕ ವಲಯದಲ್ಲಿ ಗುರುತಿಸಿಕೊಂಡಿರುವ ದೇಶದ 48 ಕೋಟಿ ಜನರು ಶೇ.92 ರಷ್ಟು ಆರ್ಥಿಕ ಕೊಡುಗೆ ನೀಡುತ್ತಿದ್ದಾರೆ. ಆದರೆ, ಕನಿಷ್ಠ ವೇತನ ಹಾಗೂ ಸೌಲಭ್ಯ ಕೊಡುವಾಗ ಸರ್ಕಾರ ಇದ್ಯಾವುದನ್ನು ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು.

        ಸರ್ಕಾರಗಳು ಬಡವರಿಗೆ ನೀಡುವ ವಸತಿ ಯೋಜನೆಯೂ ತಾರತಮ್ಯದಿಂದ ಕೂಡಿರಬಾರದು. ಅಸಂಘಟಿತ ಕಾರ್ಮಿಕರು ನೀಡುತ್ತಿರುವ ಅಭಿವೃದ್ಧಿಯ ಕೊಡುಗೆಗೆ ಸರ್ಕಾರ ನೀಡುತ್ತಿರುವ ಇವರಿಗೆ ನೀಡುತ್ತಿರುವ ಸೌಲಭ್ಯವೂ ನ್ಯಾಯಸಮ್ಮತವಲ್ಲ. ಸ್ಲಂ ಜನರೇ ನಗರಕ್ಕೆ ಬೇಕಾಗಿರುವ ಉಸಿರು ಕೊಡುತ್ತಿದ್ದು, ಇವರನ್ನು ನಗರಗಳಿಂದ ಹೊರ ಹಾಕಿದರೆ, ನಗರಗಳ ಉಸಿರೇ ನಿಂತು ಹೋಗಲಿದೆ ಎಂದು ಸೂಚ್ಯವಾಗಿ ಎಚ್ಚರಿಸಿದರು.

        ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಉಪ ವಿಭಾಗದ ಇಂಜಿನಿಯರ್ ಆನಂದಪ್ಪ ಎಸ್.ಎಲ್. ಮಾತನಾಡಿ, ಕೊಳಗೇರಿ ನಿವಾಸಿಗಳಿಗೆ ಸಾಕಷ್ಟು ವಸತಿ ಯೋಜನೆಗಳು ಬರುತ್ತಿವೆ. ಆದರೆ, ಬೇಸ್‍ಮೆಂಟ್ ವರಗೆ ಫಲಾನುಭವಿಗಳೇ ಮನೆ ನಿರ್ಮಿಸಿಕೊಂಡ ಮೇಲೆ ಜಿಪಿಆರ್‍ಎಸ್ ಮಾಡಿ, ಮೊದಲ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಲಿದೆ. ಆದರೆ, ಸ್ಲಂ ನಿವಾಸಿಗಳು ಬಹುತೇಕರು ಆರ್ಥಿಕವಾಗಿ ಸಬಲರಾಗಿರುವುದಿಲ್ಲ. ಅಲ್ಲದೆ, ಫಲಾನುಭವಿಗಳು ನೇರವಾಗಿ ಭಾಗವಹಿಸುತ್ತಿಲ್ಲ ಹೀಗಾಗಿ ವಸತಿ ಯೋಜನೆಗಳು ವಿಫಲವಾಗುತ್ತಿವೆ ಎಂದರು.

          ಸ್ಲಂಗಳ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡಿರುವ ಮುಖಂಡರುಗಳು ಮಧ್ಯವರ್ತಿಗಳಾಗಿ ಯಾರಿಗೆ ಮನೆ ಕೊಡಬೇಕು. ಯಾರು ಮನೆ ನಿರ್ಮಿಸಬೇಕೆಂಬುದರ ತೀರ್ಮಾನ ಕೈಗೊಳ್ಳಲು ಮುಂದಾಗಿರುವುದು ಮನೆಗಳು ನಿರ್ಮಾಣ ಆಗದಿರಲು ಪ್ರಮುಖ ಕಾರಣವಾಗಿದೆ. ಇದಕ್ಕಾಗಿಯೇ ಜಿಲ್ಲೆಯಲ್ಲಿ 2,120 ಮನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆದರೆ, ಈ ವರೆಗೂ 800 ಮನೆಗಳು ಸಹ ಪೂರ್ಣಗೊಂಡಿಲ್ಲ ಎಂದು ಹೇಳಿದರು.

        ಕಾರ್ಯಕ್ರಮದಲ್ಲಿ ಸಾವಿತ್ರಿ ಬಾಪುಲೆ ಮಹಿಳಾ ಸಂಘದ ಅಧ್ಯಕ್ಷೆ ಸಾವಿತ್ರಮ್ಮ, ಪಾಲಿಕೆಯ ತಿಪ್ಪೇಸ್ವಾಮಿ, ಸ್ಲಂ ಜನಾಂದೋಲನ ಜಿಲ್ಲಾಧ್ಯಕ್ಷ ಶಬ್ಬೀರ್ ಸಾಬ್, ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಜರ್, ಕೊಟ್ರೇಶ್, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಾಹತ್ ಅಲಿ ಮತ್ತಿತರರು ಉಪಸ್ಥಿತರಿದ್ದರು.ರೇಣುಕಾ ಯಲ್ಲಮ್ಮ ಸ್ವಾಗತಿಸಿದರು. ಮಹಮ್ಮದ್ ಮೋಸಿನ್ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link