ಚಿತ್ರದುರ್ಗ:
ಶಿವರಾತ್ರಿಯೆಂದರೆ ಶಿವನ ಧ್ಯಾನ ಕಡಿಮೆಯಾಗಿ ರಾತ್ರಿಯಿಡಿ ಸಿನಿಮಾ ನೋಡುವುದರಿಂದ ಶಿವರಾತ್ರಿ ಸಿನಿಮಾರಾತ್ರಿಯಾಗಿದೆ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಬೇಸರ ವ್ಯಕ್ತಪಡಿಸಿದರು.ಕಬೀರಾನಂದಾಶ್ರಮದಲ್ಲಿ ನಡೆಯುತ್ತಿರುವ 89 ನೇ ಮಹಾಶಿವರಾತ್ರಿ ಮಹೋತ್ಸವದ ನಾಲ್ಕನೆ ದಿನವಾದ ಸೋಮವಾರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿವರಾತ್ರಿಯಂದು ಶಿವನ ಧ್ಯಾನ ಜಾಗರಣೆ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಮಾಧಾನ ಸಿಗುತ್ತದೆ. ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮಿಗಳು ಜ್ಞಾನ ದಾಸೋಹ, ಅನ್ನದಾಸೋಹವನ್ನು ಮಕ್ಕಳಿಗೆ ನೀಡುವುದರ ಜೊತೆಗೆ ವೃದ್ದಾಶ್ರಮ, ಅನಾಥಾಶ್ರಮ ತೆರೆದಿದ್ದಾರೆ. ಜೊತೆಗೆ ಗೋಶಾಲೆಯನ್ನು ತೆರೆದು ಜಾನುವಾರುಗಳ ರಕ್ಷಣೆಯಲ್ಲಿ ತೊಡಗಿರುವುದು ಸುಲಭದ ಕೆಲಸವಲ್ಲ. ಕಬೀರಾನಂದ ಮಠ ಒಂದು ಜಾತಿಗೆ ಸೀಮಿತವಾಗಿಲ್ಲ. ಪ್ರತಿ ವರ್ಷ ಇಲ್ಲಿ ನಡೆಯುವ ಮಹಾಶಿವರಾತ್ರಿ ಮಹೋತ್ಸವದಲ್ಲಿ ಎಲ್ಲಾ ಜಾತಿಯ ಜನಸಾಮಾನ್ಯರು, ಭಕ್ತರು ಪಾಲ್ಗೊಳ್ಳುತ್ತಿರುವುದು ಒಂದು ವಿಶೇಷ ಎಂದು ಗುಣಗಾನ ಮಾಡಿದರು.
ಮಾಜಿ ಸಚಿವ ಅನೇಕಲ್ ನಾರಾಯಣಸ್ವಾಮಿ ಮಾತನಾಡುತ್ತ ಕಳೆದ 89 ವರ್ಷಗಳಿಂದಲೂ ಕಬೀರಾನಂದಾಶ್ರಮದಲ್ಲಿ ಶಿವರಾತ್ರಿ ಮಹೋತ್ಸವ ಆಚರಿಸಿಕೊಂಡು ಬರುತ್ತಿರುವುದು ದೊಡ್ಡ ಸಾಧನೆ. ಶಿವರಾತ್ರಿ ಎಂದರೆ ಕೇವಲ ಶಿವನನ್ನು ಆರಾಧಿಸುವುದು ಧ್ಯಾನಿಸುವುದು ಎಂದರ್ಥವಲ್ಲ. ಎಲ್ಲಾ ದೇವಸ್ಥಾನಗಳಲ್ಲಿಯೂ ವಿಶೇಷವಾದ ಪೂಜೆ ನಡೆಯಲಿದೆ ಎಂದು ಹೇಳಿದರು.
ಮಹಾಶಿವರಾತ್ರಿಯಂದು ಎಲ್ಲಾ ಜಾತಿಯವರು ಎಲ್ಲಾ ದೇವಸ್ಥಾನಗಳಿಗೂ ಹೋಗಿ ಶಿವರಾತ್ರಿಯನ್ನು ಆಚರಿಸುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯ. ದೇಶದಲ್ಲಿ ಅನೇಕ ಪಕ್ಷಗಳು ಅಧಿಕಾರ ಚಲಾಯಿಸಿವೆ. ಸಂತರು, ಮಠಗಳು ಇಲ್ಲವೆಂದಿದ್ದರೆ ಹಿಂದೂ ಸಂಸ್ಕತಿ ಶಕ್ತಿಶಾಲಿಯಾಗಿ ಉಳಿಯಲು ಆಗುತ್ತಿರಲಿಲ್ಲ ಎಂದರು.
ಡಾ.ಲೋಕೇಶ್ ಅಗಸನಕಟ್ಟೆ ಹೃದಯ ಶಿವಂ ಎಂಬ ವಿಷಯ ಕುರಿತು ಉಪನ್ಯಾಸ ನೀಡುತ್ತ ಶಿವನನ್ನು ಎಲ್ಲಿಯೂ ಹೊರಗಡೆ ಕಾಣುವುದು ಸಾಧ್ಯವಿಲ್ಲ. ಪ್ರತಿಯೊಬ್ಬರು ತಮ್ಮ ತಮ್ಮ ಮನಸ್ಸು ಹಾಗೂ ನಡವಳಿಕೆಯನ್ನು ಶುದ್ದವಾಗಿಟ್ಟುಕೊಂಡರೆ ತನ್ನೊಳಗೆ ಶಿವನನ್ನು ಕಾಣಬಹುದು. ಎಲ್ಲೆಡೆ ಮೋಸ, ಅಕ್ರಮ, ಅನ್ಯಾಯ, ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ. ಒಳ್ಳೆಯವರನ್ನು ಹುಡುಕಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಧರ್ಮ, ಮಠಾಧೀಪತಿಗಳಿಂದ ಕೆಟ್ಟ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಆಗುವುದಿಲ್ಲ.
ತಲೆಯಲ್ಲಿ ಮಲವನ್ನು ತುಂಬಿಕೊಂಡು ಎಷ್ಟೆ ಶಿವರಾತ್ರಿ ಆಚರಿಸಿದರೂ ಯಾವ ಪ್ರಯೋಜನವಿಲ್ಲ. ಹಾಗಾಗಿ ಮನಸ್ಸಿನಲ್ಲಿರುವ ಕಲ್ಮಶವನ್ನು ಮೊದಲು ತೊಡೆದು ಹಾಕಬೇಕು. ಆಗ ಮಹಾಶಿವರಾತ್ರಿಗೆ ನಿಜವಾದ ಅರ್ಥ ಸಿಗುತ್ತದೆ ಎಂದು ತಿಳಿಸಿದರು.ಹಳ್ಳಿ ಪ್ರತಿಭೆ ಬುಡಕಟ್ಟು ಜನಾಂಗದ ಹಾಡುಗಾರ್ತಿ ಸುಕ್ರಿಬೊಮ್ಮುಗೌಡಗೆ ಆರೂಢಶ್ರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಬೀರಾನಂದಾಶ್ರಮದ ಶಿವಲಿಂಗಾನಂದಮಹಾಸ್ವಾಮಿಗಳು, ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ, ತೀರ್ಥ ಕಟ್ನೂರು ನೇರ್ಲಗಿ ವಿರಕ್ತಮಠದ ಚನ್ನಬಸವದೇಶಿಕೇಂದ್ರ ಮಹಾಸ್ವಾಮಿ, ಕುಸನೂರು ತಿಪ್ಪಯ್ಯಸ್ವಾಮಿ ಮಠದ ಜ್ಯೋರ್ತಿಲಿಂಗಾನಂದ ಮಹಾಸ್ವಾಮಿ ಇವರುಗಳು ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸುಕ್ತಿ ಬೊಮ್ಮೇಗೌಡ ಅವರಿಗೆ ಆರೂಢಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಬಾಪೂಜಿ ವಿದ್ಯಾಸಂಸ್ಥೆಯ ಕೆ.ಎಂ.ವೀರೇಶ್, ಜಾನಪದ ಹಾಡುಗಾರ ಚಂದ್ರಪ್ಪ ಕಾಲ್ಕೆರೆ, ಸಾಹಿತಿ ಹಾಗೂ ನ್ಯಾಯವಾದಿ ರೇವಣ್ಣ ಬಳ್ಳಾರಿ ಇವರುಗಳು ವೇದಿಕೆಯಲ್ಲಿದ್ದರು.ಮಾತೃಶ್ರೀ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು.