ಬೆಂಗಳೂರು
ಹಾಸನ ಮತ್ತು ಮಂಡ್ಯದಲ್ಲಿ ತಮ್ಮ ಮೊಮ್ಮಕ್ಕಳನ್ನು ಕಣಕ್ಕಿಳಿಸುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಬಗ್ಗೆ ಪಕ್ಷದ ಒಳ ವಲಯದಲ್ಲೇ ತೀವ್ರ ಅಸಮಾಧಾನ ಮಡುಗಟ್ಟಿದೆ.
ಭುಗಿಲೆದ್ದಿರುವ ಅಸಮಾಧಾನ ಸರಿಪಡಿಸಲು ಇದೀಗ ಗೌಡರು ಮತ್ತೆ ಹಾಸನ ಕ್ಷೇತ್ರದತ್ತ ತೆರಳಬೇಕೋ ಅಥವಾ ತುಮಕೂರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಬೇಕೋ ಎನ್ನುವ ಗೊಂದಲದಲ್ಲಿ ಸಿಲುಕಿದ್ದಾರೆ.
ದೇವೇಗೌಡರಷ್ಟೇ ಅಲ್ಲದೇ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ಮತ್ತವರ ಕುಟುಂಬ ಸದಸ್ಯರು ಸಹ ಆತಂಕಕ್ಕೆ ಒಳಗಾಗಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ನ ಸಂಪೂರ್ಣ ಗಮನ ಮಂಡ್ಯ, ಹಾಸನ ಕ್ಷೇತ್ರಗಳತ್ತಲೇ ಕೇಂದ್ರೀಕೃತಗೊಂಡಿದೆ. ಉಳಿದ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ, ಚುನಾವಣಾ ತಂತ್ರಗಾರಿಕೆಯನ್ನು ಕಡೆಗಣಿಸಿದ್ದಾರೆ. ಇದು ಜೆಡಿಎಸ್ ನ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರ ವಲಯದಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆ.
ಮಂಡ್ಯದಲ್ಲಿ ನಿಖಿಲ್ ಕುಮಾರ ಸ್ವಾಮಿ ಅವರಿಗೆ ಸುಮಲತಾ ತೀವ್ರ ಪ್ರತಿಸ್ಪರ್ಧೆ ಒಡ್ಡಿದ್ದಾರೆ. ಇದೀಗ ಹಾಸನದಲ್ಲೂ ಪ್ರಜ್ವಲ್ ರೇವಣ್ಣ ವಿರುದ್ಧ ಅಸಮಾಧಾನದ ಎಲೆ ಏಳುತ್ತಿದೆ. ಹೀಗಾಗಿ ಒಂದೆಡೆ ಕುಮಾರ ಸ್ವಾಮಿ ಮತ್ತೊಂದೆಡೆ ರೇವಣ್ಣ ಚಿಂತಾಕ್ರಾಂತರಾಗಿದ್ದಾರೆ.
ಈ ಬೆಳವಣಿಗೆಗಳ ಬಗ್ಗೆ ದೇವೇಗೌಡರ ಕುಟುಂಬದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಮತ್ತೆ ಹಾಸನ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಹೇಗೆ ಎಂದು ಸ್ವತಃ ದೇವೇಗೌಡರೇ ಆಲೋಚನೆ ಮಾಡುವ ಚಿಂತನೆಯಲ್ಲಿದ್ದಾರೆ.
ಜೆಡಿಎಸ್ ಮೂಲಗಳ ಪ್ರಕಾರ, ದೇವೇಗೌಡರು ಮತ್ತೆ ಹಾಸನದಲ್ಲಿ ಸ್ಪರ್ಧಿಸಿದರೆ ಹೇಗೆ ಎನ್ನುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ. ಆದರೆ ನಿಖಿಲ್ ಮತ್ತು ಪ್ರಜ್ವಲ್ ಇಬ್ಬರೂ ಇದೇ 22 ರಂದು ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ. ಆದರೆ ಜೆಡಿಎಸ್ ಪಾಳಯದಲ್ಲಿ ಒಂದೆರಡು ದಿನಗಳಲ್ಲಿ ಸಾಕಷ್ಟು ಮಹತ್ವದ ಬದಲಾವಣೆಗಳಾಗಲಿವೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
