ರಾಷ್ಟ್ರದ ಗೌರವವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದು ನರೇಂದ್ರಮೋದಿ

ಚಳ್ಳಕೆರೆ

      ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕಳೆದ ಸುಮಾರು 5 ವರ್ಷಗಳಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರಗತಿಯ ಜೊತೆಗೆ ರಾಷ್ಟ್ರದ ಗೌರವವನ್ನು ಕಾಪಾಡಿದ ಕೀರ್ತಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರದ್ದು. ತಮ್ಮ ಸಂಪೂರ್ಣ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರರಹಿತ ಉತ್ತಮ ಆಡಳಿತವನ್ನು ನೀಡಿದ್ದಾರೆ. ವಿಶ್ವಮಟ್ಟದಲ್ಲಿ 11ನೇ ಸ್ಥಾನದಲ್ಲಿದ್ದ ಭಾರತವನ್ನು 6ನೇ ಸ್ಥಾನಕ್ಕೆ ತಂದಿದ್ದಾರೆ.

         ಇಂತಹ ಗುಣಾತ್ಮಕ ಆಡಳಿತ ನೀಡಿರುವ ಜೀವನದಲ್ಲಿ ಸ್ವಾರ್ಥಕ್ಕಾಗಿ ಯಾವುದನ್ನೂ ಬಯಸದ ರಾಜ ಋಷಿಯಂತಿರುವ ನರೇಂದ್ರಮೋದಿಯವರನ್ನು ಮತ್ತೊಮ್ಮೆ ಈ ರಾಷ್ಟ್ರದ ಪ್ರಧಾನಿಯನ್ನಾಗಿಸಬೇಕು ಎಂದು ರಾಜ್ಯ ಪ್ರಬುದ್ದರ ವಿಭಾಗದ ಅಧ್ಯಕ್ಷ ಗಿರಿಧರ್ ಉಪಾಧ್ಯಯ ತಿಳಿಸಿದರು.

       ಅವರು, ಬುಧವಾರ ಇಲ್ಲಿನ ದಲ್ಲಾಲ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರೀಕರು ಮತ್ತು ಪ್ರಬುದ್ದರೊಂದಿಗೆ ಸಂವಾದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ರಾಷ್ಟ್ರಕ್ಕೆ ಗಂಡಾಂತರವಾಗಿದ್ದು, ಪದೇ ಪದೇ ನಿರಂತರ ದಾಳಿ ನಡೆಸುವ ಮೂಲಕ ಭಯೋತ್ಪಾದನೆಯನ್ನೇ ಬಂಡವಾಳ ಮಾಡಿಕೊಂಡ ಪಾಕಿಸ್ತಾನದಲ್ಲಿ ನೆಲೆಸಿದ್ದ ಉಗ್ರರನ್ನು ಧ್ವಂಸ ಮಾಡುವ ಮೂಲಕ ಈ ದೇಶವನ್ನು ಉಗ್ರರ ಉಪಟಳದ ಕಪಿಮುಷ್ಠಿಯಿಂದ ಪಾರು ಮಾಡಿದ ಕೀರ್ತಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರದ್ದು.

         ತಮ್ಮ ಆಡಳಿತಾವಧಿಯಲ್ಲಿ ವಿಶ್ವದ ಅನೇಕ ರಾಷ್ಟ್ರಗಳಿಗೆ ಭೇಟಿ ನೀಡಿ ಸ್ನೇಹ ಸಂಪಾದಿಸುವ ಮೂಲಕ ರಾಷ್ಟ್ರದ ಆರ್ಥಿಕತೆಯನ್ನು ಸುಧಾರಣೆಯತ್ತ ತೆಗೆದುಕೊಂಡು ಹೋದ ಕೀರ್ತಿ ನರೇಂದ್ರಮೋದಿಯವರದ್ದು. ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಷ್ಟ್ರದ ಶೇ.80 ಭಾಗ ಶೌಚಾಲಯಗಳ ನಿರ್ಮಾಣಕ್ಕೆ ಪ್ರೇರಕ ಶಕ್ತಿಯಾದರು. ಇತ್ತೀಚೆಗೆ ತಾನೇ ಬಜೆಟ್‍ನಲ್ಲಿ ಮಂಡಿಸಿದಂತೆ ರೈತರಿಗೆ ವಾರ್ಷಿಕ ಆರು ಸಾವಿರ ನೀಡುವ ಘೋಷಣೆಯನ್ನು ಕೇವಲ ಕೆಲವೇ ದಿನಗಳಲ್ಲಿ ಜಾರಿಗೊಳಿಸಿದರು.

         ಪ್ರತಿನಿತ್ಯ ಉಪಯೋಗಿಸುವ ತೊಗರಿ ಬೇಳೆ, ಹೆಸರು ಬೇಳೆ ಮುಂತಾದ ಆಹಾರ ಪದಾರ್ಥಗಳ ಬೆಲೆಯನ್ನು ನಿಯಂತ್ರಣಗೊಳಿಸುವಲ್ಲಿ ಸಫಲರಾದರು. ಕಳೆದ ಸರ್ಕಾರದ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲದಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ನೇತಾರರು ರಫೇಲ್ ಹಗರಣದಲ್ಲಿ ಅನಿಲ್ ಅಂಬಾನಿಯವರಿಗೆ 30 ಸಾವಿರ ಕೋಟಿ ಕಮಿಷನ್ ರೂಪದಲ್ಲಿ ನೀಡಿದ್ದಾರೆಂದು ಆರೋಪಿಸಿದ್ದರು.

         ಕಳೆದ ಎರಡು ದಿನಗಳ ಹಿಂದೆ ಅನಿಲ್ ಅಂಬಾನಿ ಮಹರಾಷ್ಟ್ರದ ಹೈಕೋರ್ಟ್‍ನಲ್ಲಿ 532 ಕೋಟಿ ಹಣವನ್ನು ಪಾವತಿಸಬೇಕಿದ್ದು, ಇವರ ಅಣ್ಣ ಮುಖೇಶ್ ಅಂಬಾನಿ ನ್ಯಾಯಾಲಯಕ್ಕೆ ಹಣ ಪಾವತಿಸಿ ಅನಿಲ್ ಅಂಬಾನಿಯವರನ್ನು ರಕ್ಷಿಸಿದ್ಧಾರೆ. ರಾಷ್ಟ್ರದ ಸುಪ್ರೀಂ ಕೋರ್ಟ್‍ರಫೇಲ್ ಹಗರಣದ ಬಗ್ಗೆ ಈಗಾಗಲೇ ಸ್ವಷ್ಟ ಆದೇಶ ನೀಡಿದ್ದು, ದೇಶದ ಹಿತದೃಷ್ಠಿಯಿಂದ ಭದ್ರತೆಯ ಗೌಪ್ಯತೆತನ್ನು ಕಾಪಾಡಬೇಕಾಗಿದ್ದು, ಅದ್ದರಿಂದ ಒಟ್ಟು ರಕ್ಷಣಾ ವೆಚ್ಚದ ಮೌಲ್ಯವನ್ನು ತಿಳಿಸುವಂತಿಲ್ಲವೆಂದು ನಿರ್ದೇಶನಿಸಿ ರಫೇಲ್ ಹಗರಣದಲ್ಲಿ ಯಾವುದೇ ದೋಷ ಉಂಟಾಗಿಲ್ಲವೆಂದು ತಿಳಿಸಿದ್ದಾರೆ.

         ಆದರೆ, ಕಾಂಗ್ರೆಸ್ ಪಕ್ಷದ ನೇತಾರರು ಎಲ್ಲವನ್ನೂ ಮರೆತು ಮೋದಿಯವರ ಹೆಸರಿಗೆ ಮಸಿ ಬಳಿಯುವ ದೃಷ್ಠಿಯಿಂದ ಪ್ರತಿನಿತ್ಯ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ತಿಳಿಸಿದರು. ಭಾರತೀಯ ಜನತಾ ಪಕ್ಷದ ಎಲ್ಲಾ ಕಾರ್ಯಕರ್ತರು ಈ ಭೂಮಿಯನ್ನು ಪುಣ್ಯಭೂಮಿ ಎಂದು ಭಾವಿಸಿದ್ದಾರೆ. ತಾಯಿಯಷ್ಟೇ ಪೂಜ್ಯ ಭಾವನೆಯನ್ನು ಈ ಭೂಮಿಯೊಂದಿಗೆ ಹೊಂದಿದ್ದಾರೆ. ದೇಶವೇ ಮೊದಲು ಎನ್ನುವ ವಿಶಾಲಾ ದೃಷ್ಠಿವುಳ್ಳ ಕಾರ್ಯಕರ್ತರು ಹಾಗೂ ಮುಖಂಡರು ಬಿಜೆಪಿಯಲ್ಲಿದ್ದು, ಇದು ಮುಂದಿನ ದಿನಗಳಲ್ಲಿ ಪಕ್ಷ ಹೆಚ್ಚು ಸ್ಥಾನಗಳಿಸಲು ಕಾರಣವಾಗುತ್ತದೆ ಎಂದರು.

      ಪ್ರಾಸ್ತಾವಿಕವಾಗಿ ಮಾತನಾಡಿ ಬಿಜೆಪಿ ಮುಖಂಡ ಎಂ.ಎಸ್.ಜಯರಾಮ್, ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಿಸಬೇಕಿದೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಬಲವಾದ ಸಂಘಟನೆಯನ್ನು ಹೊಂದಿದೆ. ಪಕ್ಷದ ಕಾರ್ಯಕರ್ತರು ಮನೆ ಮನೆಗೂ ಭೇಟಿ ನೀಡಿ ಮೋದಿಯವರ ಆಡಳಿತವನ್ನು ಜನಸಾಮಾನ್ಯರಿಗೆ ತಿಳಿಸಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಅಂತಿಮ ತೀರ್ಪು ನೀಡುವ ಶಕ್ತಿ ಸಾಮಥ್ರ್ಯ ಹೊಂದಿದ್ದಾನೆ. ಪಕ್ಷದ ಕಾರ್ಯಕರ್ತರ ನಿರಂತರ ಪರಿಶ್ರಮ ಮುಖಂಡರ ಮಾರ್ಗದರ್ಶನದಿಂದ ಈ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ ಅತಿ ಹೆಚ್ಚು ಮತಗಳನ್ನು ಪಡೆಯಲಿದೆ ಎಂದರು.

      ವೇದಿಕೆಯಲ್ಲಿ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಅನಂತರಾಮ್ ಗೌತಮ್, ನಿರ್ದೇಶಕ ಅನಂತಪ್ರಸಾದ್, ವಕೀಲರ ವೇದಿಕೆಯ ಹಿರಿಯ ನಿರ್ದೇಶಕ ಜಿ.ಎಂ.ಆನಂದ್, ನಿವೃತ್ತ ಪ್ರೊ.ದೇವೇಂದ್ರಪ್ಪ, ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಶಿವಪುತ್ರಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಟಿ.ಮಂಜುನಾಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಮ್ಮ, ನಗರಸಭಾ ಸದಸ್ಯರಾದ ಎಸ್.ಜಯಣ್ಣ, ವೆಂಕಟೇಶ್, ಪಾಲಮ್ಮ, ಹೊಟ್ಟೆಪ್ಪನಹಳ್ಳಿ ಮಂಜುನಾಥ, ಕರೀಕೆರೆ ತಿಪ್ಪೇಸ್ವಾಮಿ, ಡಿ.ಎಂ.ತಿಪ್ಪೇಸ್ವಾಮಿ, ಎ.ವಿಜಯೇಂದ್ರ, ಆದಿಭಾಸ್ಕರಶೆಟ್ಟಿ, ತಿಮ್ಮಾರೆಡ್ಡಿ ಮುಂತಾದವರು ಉಪಸ್ಥಿತರಿದ್ದರು. ಬಿಜೆಪಿ ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ಸ್ವಾಗತಿಸಿ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link