ತುಮಕೂರು
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ನಕಲಿ ನೋಟುಗಳ ಚಲಾವಣೆಗೆ ಯತ್ನ ಮಾಡಿರುವ ಖಚಿತ ಮಾಹಿತಿ ಮೇರೆಗೆ ತುಮಕೂರು ನಗರ ಠಾಣೆಯ ಸಿಪಿಐ ಚಂದ್ರಶೇಖರ್ ಮತ್ತು ಸಿಬ್ಬಂದಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನ ವಂಶಿಕೃಷ್ಣ ತಿಳಿಸಿದರು.
ನಗರದ ಪೊಲೀಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾ.19ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮೂರು ಜನ ವ್ಯಕ್ತಿಗಳು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ನಕಲಿ ನೋಟು ಚಲಾವಣೆ ಮಾಡುವ ಯತ್ನ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದ ನಗರ ಠಾಣೆಯ ಸಿಪಿಐ ಚಂದ್ರಶೇಖರ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಇವರ ಬಳಿ ಸುಮಾರು 1,04,500 ರೂಗಳನ್ನು ಜಫ್ತಿ ಮಾಡಲಾಗಿದೆ. ಈ ಮೂವರನ್ನು ಗೌರಿಬಿದನೂರಿನ ಅಪ್ರೋಜ್, ಕೊರಟಗೆರೆಯ ಮಾರುತಿ ಮತ್ತು ಕಡೂರಿನ ತಮ್ಮಯ್ಯ ಎಂದು ಗುರುತಿಸಲಾಗಿದ್ದು, ಅವರನ್ನು ತನಿಖೆಗೆ ಒಳಪಡಿಸಲಾಗಿದೆ. ಅಪ್ರೋಜ್ ಮತ್ತು ತಿಮ್ಮಯ್ಯನ ಮೇಲೆ ವಿವಿಧ ಪ್ರಕರಣಗಳು ದಾಖಲಾಗಿದೆ. ತಿಮ್ಮಯ್ಯನ ಮೇಲೆ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಜೊತೆಗೆ ಅಪ್ರೋಜ್ ಕೂಡ ಅಪರಾಧ ಪ್ರಕರಣದಲ್ಲಿ ಭಾಗಿಯಾದ ದೂರುಗಳಿವೆ. ಇವರನ್ನು ಪೊಲೀಸ್ರ ವಶದಲ್ಲಿಡಲಾಗಿದ್ದು ತನಿಖೆ ಮುಂದುವರೆದಿದೆ ಎಂದರು.
ಈ ಆರೋಪಿಗಳಿಗೂ ಹಾಗೂ ಬಾಂಗ್ಲಾದೇಶದ ಮಾಲ್ಡಾ ಎಂಬ ಪ್ರದೇಶಕ್ಕೂ ನಂಟು ಇರುವ ಸಂದೇಹಗಳಿವೆ. ಅಲ್ಲದೆ ಇವರ ಬಳಿ ಇನ್ನಷ್ಟು ನಕಲಿ ನೋಟುಗಳಿರುವ ಅನುಮಾನಗಳಿವೆ. ಮುಂತಾದ ಅನುಮಾನಗಳಿಗೆ ತನಿಖೆಯಿಂದ ಸತ್ಯಾಂಶಗಳು ಹೊರಬರಬೇಕಿದೆ ಎಂದರಲ್ಲದೆ, ತನಿಖೆಗೆ ನಗರ ಡಿವೈಎಸ್ಪಿ ಹಾಗೂ ನಗರ ಸಿಪಿಐರನ್ನೊಳಗೊಂಡ ತಂಡವನ್ನು ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
