ತುಮಕೂರು
ತಾಳಿದವನು ಬಾಳಿಯಾನು. ಇಂದು ತಾಳ್ಮೆ, ಸಹನೆ ಇರುವವನು ಎಂದೆಂದೂ ಮುಂದೆ ಮುಂದೆ ಬರುತ್ತಾನೆ. ಎತ್ತರೆತ್ತರಕ್ಕೆ ಬೆಳೆಯುತ್ತಾನೆ. ಉತ್ಸಾಹ, ಧೈರ್ಯ ಎಂದೆಂದೂ ತುಂಬಿರಬೇಕು ಎಂದು ಪ್ರಾಧ್ಯಾಪಕ ಪ್ರೊ. ಎಂ. ಸಿದ್ಧಾನಂದ ನುಡಿದರು.
ನಗರದಲ್ಲಿ ಡಿ.ವಿ.ಜಿ.ಯವರ ಸಂಸ್ಮರಣೆಯಲ್ಲಿ ಮಂಕುತಿಮ್ಮನ ಕಗ್ಗದಲ್ಲಿ ಜೀವನೋತ್ಸಾಹ ವಿಷಯ ಕುರಿತು ನಗರ ಕೇಂದ್ರ ಗ್ರಂಥಾಲಯದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ತುಮಕೂರು ಮತ್ತು ಟ್ಯಾಕಲ್ ಸಂಸ್ಥೆಯ ವತಿಯಿಂದ ಇತ್ತೀಚೆಗೆ ನಡೆದ ಮಾಸಿಕ ಸಂವಾದ-5 ರಲ್ಲಿ ಪ್ರಧಾನ ಉಪನ್ಯಾಸ ಮಾಡಿದರು.
ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದಲ್ಲಿರುವ ಒಂದೊಂದು ಪದ್ಯವೂ ಅರ್ಥವಂತಿಕೆಯಿಂದ ಕೂಡಿದೆ. ಕಗ್ಗ ಕನ್ನಡದ ಉಪನಿಷತ್ತು ಎಂಬ ಪ್ರಶಂಸೆಗೆ ಪಾತ್ರವಾಗಿದೆ. 745 ಪದ್ಯಗಳೂ ಕೂಡ ಒಂದೊಂದು ಮುಕ್ತಕಗಳಾಗಿವೆ. ಅದೊಂದು ಸಾಹಿತ್ಯ ಕೃತಿಯಾದರೂ ನೀತಿಯುತವಾದ ಪದ್ಯಗಳಿಂದ ಕೂಡಿದ್ದು ಆಬಾಲ ವೃದ್ಧರಾದಿಯಾಗಿ ಎಲ್ಲರೂ ಓದುವ ಕೃತಿಯಾಗಿದೆ. ಪ್ರತಿಯೊಂದು ಗಳಿಗೆಯೂ ಉತ್ಸಾಹದಿಂದಿರಬೇಕು. ಈ ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ, ನಾವೆಲ್ಲಾ ಕುದುರೆಗಳಂತೆ. ಹೋಗೆಂದ ಕಡೆ ನಮ್ಮ ಪಯಣ. ಮದುವೆ, ಮಸಣಕೋ ಓಡುತ್ತಿರಬೇಕು ಎಂದು ವಿವರಿಸಿದರು.
ಸಜ್ಜನಿಕೆ, ಜೀವನವನ್ನು ಸುಂದರಗೊಳಿಸುವ ಒಂದು ಮಾರ್ಗ. ಧೈರ್ಯ, ಮತಿಯೋಜೆ, ಸರ್ವದಯೆ ಮತ್ತು ನಿರ್ಮವತ್ವ ಎಂಬ 4 ಸದ್ಗುಣಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಅಚಲ ಶ್ರದ್ಧೆ, ಕಠಿಣ ಶ್ರಮ ಮತ್ತು ಶಿಸ್ತು ಪ್ರಮುಖ ಸ್ಥಾನ ವಹಿಸುತ್ತವೆ. ಪ್ರತಿದಿನ ಕಲಿಯುತ್ತಾ ಮಾನವತ್ವವನ್ನು ಬೆಳೆಸಿಕೊಂಡಾಗ ದೇಶದಲ್ಲಿ ಶಾಂತಿ ನೆಲೆಸುತ್ತದೆ. ನಂಬಿಕೆ ಎಂಬುದು ತಾಯಿಗೆ ಸಮಾನ. ದೇವರನ್ನು ನಂಬು. ಅವನಿರುವನೋ ಇಲ್ಲವೋ ಎಂದು ಸಂಶಯಪಡದೆ ಆ ಭಗವಂತನಿಗೆ ಶರಣು ಹೋಗು. ಆಗ ನಿನ್ನ ಶ್ರೇಯಸ್ಸು ನಿನಗಿದ್ದೇ ಇದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
