ಸೆಕ್ಯೂರಿಟಿ ಗಾರ್ಡ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಸೈಕೊ ರಾಜ…!!

ಬೆಂಗಳೂರು

         ಗಾಂಜಾ ಖರೀದಿಗೆ ಹಣ ಕೊಡದಿದ್ದರಿಂದ ಸೆಕ್ಯೂರಿಟಿ ಗಾರ್ಡ್‍ರೊಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಖಿ ಕೊಲೆಗೈದು ಮತ್ತೊಬ್ಬರ ಮೇಲೆ ಕಲ್ಲಿನಿಂದ ಕೊಲೆಯತ್ನ ನಡೆಸಿದ್ದ ಕುಖ್ಯಾತ ಕೊಲೆಗಾರ ರಾಜೇಂದ್ರ ಅಲಿಯಾಸ್ ಸೈಕೋ ರಾಜನ ಕಾಲುಗಳಿಗೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ..

        ಬಲಗಾಲಿನ ಮಂಡಿ ಹಾಗೂ ಎಡಗಾಲಿನ ಪಾದಕ್ಕೆ ಪೊಲೀಸರ ಗುಂಡೇಟು ತಗುಲಿ ಗಾಯಗೊಂಡಿರುವ ಬನ್ನೇರುಘಟ್ಟದ ಸಿಕೆಪಾಳ್ಯದ ಬೆಂಕಿ ರಾಜ(28)ನನ್ನು ಬಂಧಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಚಿಕಿತ್ಸೆ ಪಡೆಯುತ್ತಿರುವ ರಾಜ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

        ಕಳೆದ ಮಾ.23ರಂದು ಉತ್ತರಹಳ್ಳಿಯ ಮುಖ್ಯರಸ್ತೆಯಲ್ಲಿ ಕದಿರೇನಹಳ್ಳಿಯ ಕರ್ನಾಟಕ ಬ್ಯಾಂಕ್ ಎಟಿಎಂನ ಕಾವಲಿಗಿದ್ದ ಸೆಕ್ಯೂರಿಟಿ ಗಾರ್ಡ್ ಲಿಂಗಪ್ಪ ಅವರ ತಲೆ ಮೇಲೆ ಕಲ್ಲು ಎತ್ತಿ ಕೊಲೆಗೈದು ಪರಾರಿಯಾಗಿ ನಾಲ್ಕು ದಿನಗಳ ಹಿಂದೆ ಜೆಪಿನಗರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದನು.

       ಸೈಕೋ ರೀತಿಯಲ್ಲಿ ಎರಡು ಕೃತ್ಯಗಳನ್ನು ಬೆಂಕಿ ರಾಜ ನಡೆಸಿರುವುದನ್ನು ಪತ್ತೆಹಚ್ಚಿದ ಮಾಹಿತಿ ಪಡೆದು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ರಾಜನ ಪತ್ತೆಗೆ ಪೊಲೀಸರ ವಿಶೇಷ ತಂಡ ರಚಿಸಿದ್ದರು.
ರಾಜನ ಪತ್ತೆಗಾಗಿ ಶೋಧಕಾರ್ಯ ಕೈಗೊಂಡ ತಂಡಕ್ಕೆ ಆತ ಬನ್ನೇರುಘಟ್ಟದ ಕಡೆಯಿಂದ ಬಂದಿದ್ದ ಬೆಂಕಿರಾಜ ಶನಿವಾರ ಮುಂಜಾನೆ 4.30ರ ವೇಳೆ ಕೋಣನಕುಂಟೆಯ ಡಬ್ಬಲ್‍ರಸ್ತೆಯ ನಾರಯಣನಗರದ ಬಳಿ ಅಡಗಿರುವ ಖಚಿತ ಮಾಹಿತಿ ಪತ್ತೆಯಾಯಿತು ಕೂಡಲೇ ಎಸಿಪಿ ಮಹದೇವ ಕುಮಾರಸ್ವಾಮಿ ಲೇಔಟ್ ಇನ್ಸ್‍ಪೆಕ್ಟರ್ ಆಜರೇಶ್ ಕಿಲ್ಲೇಗಾರ್ ತಲಘಟ್ಟಪುರ ಇನ್ಸ್‍ಪೆಕ್ಟರ್ ಶ್ರೀನಿವಾಸ್ ಅವರಿದ್ದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡಿದೆ.

ಕಲ್ಲಿನಿಂದ ಹಲ್ಲೆ

       ನಾರಯಣನಗರಕ್ಕೆ ಬಂದ ಪೊಲೀಸ್ ಜೀಪ್‍ನ್ನು ನೋಡಿದ ಬೆಂಕಿರಾಜ ಒಡಿಹೋಗಲು ಯತ್ನಿಸಿದಾಗ ಬೆನ್ನಟ್ಟಿ ಆತನನ್ನು ಅಡ್ಡಗಟ್ಟಿ ಬಂಧಿಸಲು ಹೋದಾಗ ಕಲ್ಲಿನಿಂದ ಹೊಡೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಈ ವೇಳೆ ಕುಮಾರಸ್ವಾಮಿ ಲೇಔಟ್ ಇನ್ಸ್‍ಪೆಕ್ಟರ್ ಆಜರೇಶ್ ಕಿಲ್ಲೇಗಾರ್ ಗಾಲಿಯಲ್ಲಿ ಒಂದು ಸುತ್ತುಗಂಡು ಹಾರಿಸಿ ಶರಣಾಗುವಂತೆ ಸೂಚನೆ ನೀಡಿದರೂ ಅದನ್ನು ಲೆಕ್ಕಿಸದೇ ಕಲ್ಲಿನಿಂದ ಹೊಡೆಯಲು ಮುಂದಾಗಿದ್ದಾನೆ.

         ಕೂಡಲೇ ಆತ್ಮರಕ್ಷಣೆಗಾಗಿ ಮತ್ತೆ ಎರಡು ಸುತ್ತು ಗುಂಡು ಹಾರಿಸಿದ್ದು ಅವು ಎರಡು ಕಾಲುಗಳಿಗೆ ತಗುಲಿ ಸ್ಥಳದಲ್ಲಿಯೇ ಕುಸಿದುಬಿದ್ದಿದ್ದಾನೆ ಆತನನ್ನು ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ ಆರೋಪಿಯು ಕಲ್ಲಿನಿಂದ ನಡೆಸಿದ ಹಲ್ಲೆಯಿಂದ ಗಾಯಗೊಂಡಿರುವ ಪೊಲೀಸರಿಗೂ ಚಿಕಿತ್ಸೆ ಕೊಡಿಸಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಣ್ಣಾಮಲೈ ತಿಳಿಸಿದ್ದಾರೆ.

ಸೈಕೋ ಕುಖ್ಯಾತಿ

        ಗಾಂಜಾ ವ್ಯಸನಿಯಾಗಿದ್ದ ಬೆಂಕಿ ರಾಜ 10 ವರ್ಷಗಳ ಹಿಂದೆ ಸ್ವಂತ ತಂಗಿಯನ್ನೇ ಬೆಂಕಿ ಹಚ್ಚಿ ಕೊಲೆ ಮಾಡಿ ಮನೆಯಿಂದ ಹೊರಬಂದಿದ್ದ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದ ನಂತರ ಬಸವನಗುಡಿಯಲ್ಲಿ ಸೂಪರ್‍ವೈಸರ್‍ರೊಬ್ಬರ ಕೊಲೆ ಕೃತ್ಯದಲ್ಲಿ ಬಾಗಿಯಾಗಿ ಮತ್ತೆ ಜೈಲು ಸೇರಿದ್ದ

         ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ಬೆಂಕಿರಾಜ ಗಾಂಜಾ ವ್ಯಸನಿಯಾಗಿ ರಸ್ತೆ ಪಕ್ಕದಲ್ಲಿ ಮಲಗಿರುವವರು ಗಾಂಜಾ ಖರೀದಿಸಲು ಹಣ ಕೊಡದಿದ್ದರೆ ಕಲ್ಲಿನಿಂದ ಹೊಡೆಯುತ್ತಿದ್ದು ಸೈಕೋ ರಾಜ ಎನ್ನುವ ಕುಖ್ಯಾತಿ ಪಡೆದಿದ್ದನು.

          ಸೆಕ್ಯೂರಿಟಿ ಗಾರ್ಡ್ ಲಿಂಗಪ್ಪ ಅವರ ತಲೆ ಮೇಲೆ ಕಲ್ಲು ಎತ್ತಿ ಕೊಲೆಗೈದಿರುವುದು ಗಾಂಜಾ ಖರೀದಿಗೆ 150 ರೂಗಳನ್ನು ಕೊಡದಿರುವುದು ಹಾಗೂ ಜೆಪಿನಗರದಲ್ಲಿ ರಸ್ತೆ ಬದಿ ಮಲಗಿದ್ದ ವ್ಯಕ್ತಿಯೊಬ್ಬ ಗಾಂಜಾಕ್ಕೆ ಹಣ ಕೊಡದಿದ್ದರಿಂದ ಕಲ್ಲಿನಿಂದ ಹಲ್ಲೆ ನಡೆಸಿದ್ದ ಆದರೆ ಅದೃಷ್ಟವಶಾತ್ ಗಾಯಗೊಂಡ ಆ ವ್ಯಕ್ತಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link