ಚಿತ್ರದುರ್ಗ:
ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದಂತೆ ನೋಟಾಕ್ಕೆ ಮತದಾನ ಮಾಡುವ ವಿಷಯವನ್ನು ಮುಂದುವರಿಸಿಕೊಂಡು, ಜಿಲ್ಲೆಯ ದೃಷ್ಠಿಯಿಂದ ನೋಟಾ ಮತದಾನ ಬದಲಾವಣೆ ಮಾಡಿಕೊಳ್ಳಲು ತೀರ್ಮಾನಿಸಲಾಯಿತು.
ನಗರದ ಹೊರವಲಯದ ಭೋವಿ ಗುರುಪೀಠದಲ್ಲಿ ಭಾನುವಾರ ಭೋವಿ ಗುರು ಪೀಠಾಧ್ಯಕ್ಷ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ರಾಜ್ಯ ಮಟ್ಟದ ಭೋವಿ ಜನಾಂಗದ ಚಿಂತನ?ಮಂಥನ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಿಂದ ಮತದಾನ ಚಲಾವಣೆ ಕುರಿತು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡುವುದು ಕಡ್ಡಾಯ ಮತದಾನಕ್ಕೆ ಮನವೊಲಿಸುವುದು. ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2000ಕ್ಕೂ ಹೆಚ್ಚು ಮತಗಟ್ಟೆಗಳಿದ್ದು, ಅದರಲ್ಲಿ 1000ಕ್ಕೂ ಹೆಚ್ಚು ಮತಗಟ್ಟೆ ಕೇಂದ್ರಗಳ ವ್ಯಾಪ್ತಿಯಲ್ಲಿ ಭೋವಿ ಜನಾಂಗದ ಮತದಾರರಿದ್ದಾರೆ. ಅವರೆಲ್ಲರೂ ಮತದಾನವನ್ನು ತಪ್ಪದೆ ಮಾಡುವಂತೆ ಜಾಗೃತಿ ಮೂಡಿಸಲಾಗುವುದು ಎಂದು ಶ್ರೀಗಳು ತಿಳಿಸಿದರು.
ಸದಾಶಿವ ಆಯೋಗದ ವರದಿಗೆ ಸಂಬಂಧಿಸಿದಂತೆ ಲೋಕಸಭೆ ಸ್ಪರ್ಧಾಳು ತಮ್ಮ ನಿಲುವನ್ನು ಸ್ಪಷ್ಟಿಕರಿಸಿದ ನಂತರ ಮತ ನೀಡಲು ತೀರ್ಮಾನಿಸಲಾಗುವುದು. ಸದಾಶಿವ ಆಯೋಗದ ವರದಿ ಪರವಾಗಿ ಇರುವ ಸ್ಪರ್ಧಾಳುಗಳನ್ನು ತಿರಸ್ಕರಿಸುವಂತೆ ತಿಳಿಸಿದರು.ಸಮಾಜದ ಹಿತ ದೃಷ್ಠಿಯಿಂದ ಜನರನ್ನು ಜಾಗೃತಿಗೊಳಿಸಿ ಉದ್ಯೋಗ ಅರಸಿ ಗುಳೆ ಹೋದವರನ್ನು ಮತದಾನದ ದಿನದಂದು ಮತದಾನ ಮಾಡಲು ಕರೆಸಿಕೊಳ್ಳಲು ಸಮಿತಿ ಕೆಲಸ ಮಾಡಬೇಕು. ಮತದಾನದಿಂದ ಭೋವಿ ಜನಾಂಗದ ಹಿಂದೆ ಉಳಿಯಬಾರದು. ಪ್ರತಿಯೊಬ್ಬ ಮತದಾರ ಮತದಾನ ಮಾಡುವ ಮೂಲಕ ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಹೇಳಿದರು.
ಮಂಗಳವಾರ ಕರ್ನಾಟಕ ರಾಜ್ಯ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸಭೆ ನಡೆಸಲಾಗುವುದು. ಆ ಸಭೆಯಲ್ಲಿ ಭೋವಿ, ಲಂಭಾಣಿ, ಕೊರಚ, ಕೊರಮ ಜನಾಂಗ ಸೇರಿದಂತೆ 99 ಜಾತಿಯ ಜನಾಂಗದವರು ಮತದಾನದ ವಿಷಯದಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಗುವುದು ಎಂದು ನಿರ್ಣಯ ಕೈಗೊಳ್ಳಲಾಯಿತು.
ಒಸಿಸಿಐ ರಾಜ್ಯ ಘಟಕದ ಅಧ್ಯಕ್ಷ ಆನಂದಪ್ಪ ಮಾತನಾಡಿ, ಯಾವ ರಾಜಕೀಯ ಪಕ್ಷಗಳನ್ನು ದೂರುವುದು ಬೇಡ. ಎಲ್ಲ ರಾಜಕೀಯ ಪಕ್ಷಗಳು ಬೇಕು. ಭವಿಷ್ಯದಲ್ಲಿ ಸಮಾಜಕ್ಕೆ ರಾಜಕೀಯ ಪಕ್ಷಗಳಿಂದ ಆಗುವಂತಹ ಉಪಯೋಗಗಳನ್ನು ಪಡೆಯಬೇಕು. ದೂರದೃಷ್ಠಿಯಿಂದ ಸಮಾಜದ ಹಿತವನ್ನು ಕಾಪಾಡಲು ಪ್ರತಿಯೊಬ್ಬರು ಒಗ್ಗಟ್ಟಾಗಿರಬೇಕು. ಸಮಾಜದ ವಿಷಯ ಬಂದಾಗ ಎಲ್ಲರೂ ಒಟ್ಟು ಗೂಡಿ ಸಮಾಜದ ಒಳಿತಿಗೆ ಶ್ರಮಿಸುವುದೆ ಮುಖ್ಯ ಎಂದು ತಿಳಿಸಿದರು.
ಭೋವಿ ಯುವ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಜೈ ಕುಮಾರ್ ಮಾತನಾಡಿ, ಸದಾಶಿವ ಆಯೋಗದಿಂದ ಸಮಾಜಕ್ಕೆ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಜನಾಂಗದ ಪ್ರತಿಯೊಬ್ಬರು ಆಯೋಗದ ಮಾಹಿತಿಯನ್ನು ತಿಳಿದುಕೊಂಡು ಅಕ್ಕಪಕ್ಕದ ಸಂಬಂಧಿಗಳಿಗೂ ತಿಳಿಸಬೇಕು. ಆಯೋಗದ ವಿಷಯ ಬಂದಾಂಗ ಪ್ರತಿಯೊಬ್ಬರು ಬೀದಿಗೆ ಬಂದು ಹೋರಾಟ ಮಾಡುವ ನಿಲುವು ಹೊಂದಿರಬೇಕು ಎಂದು ಅಭಿಪ್ರಾಯಪಟ್ಟರು.
ಭೋವಿ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ತಿಮ್ಮಯ್ಯ, ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ, ತಾಲ್ಲೂಕು ಅಧ್ಯಕ್ಷರಾದ ಡಿ.ಸಿ.ಮೋಹನ್, ಚಂದ್ರಪ್ಪ, ತಿಮ್ಮಯ್ಯ, ಕೃಷ್ಣಮೂರ್ತಿ, ಅಂಜಿನಪ್ಪ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಎಚ್.ಲಕ್ಷ್ಮಣ್, ಈ.ಮಂಜುನಾಥ್, ಡಾ.ಮಂಜುನಾಥ ಸ್ವಾಮಿ, ನಿವೃತ್ತ ಡಿಡಿಪಿಐ ಎಲ್.ರಂಗಪ್ಪ, ರಾಜ್ಯದ ವಿವಿಧ ಜಿಲ್ಲೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಮುಖಂಡರು ಸಭೆಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








